ಕರಾಯ: ‘ನನ್ನೂರ ರಸ್ತೆ ಮಾತ್ರ ಏಕೆ ಹೀಗೆ?’
Team Udayavani, Aug 3, 2018, 12:04 PM IST
ಉಪ್ಪಿನಂಗಡಿ: ಎಲ್ಲ ಕಡೆ ರಸ್ತೆಗಳು ಚೆನ್ನಾಗಿವೆ. ಅಭಿವೃದ್ಧಿಗೊಂಡ ರಾಜ್ಯದಲ್ಲಿ ನನ್ನೂರ ರಸ್ತೆ ಏಕೆ ಹೀಗೆ? ಎಂಬ ಪ್ರಶ್ನೆಯೊಂದಿಗೆ ವಿದ್ಯಾರ್ಥಿಯೊಬ್ಬ ಮಾಧ್ಯಮದ ಗಮನ ಸೆಳೆದಿದ್ದಾನೆ. ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ವಿದ್ಯಾರ್ಥಿ ಅಭಿಲಾಷ್ ಕೇಳಿದ್ದು, ಕಲ್ಲೇರಿ – ಮಜಿಕುಡೇಲು ರಸ್ತೆಯ ದುಃಸ್ಥಿತಿ ಕುರಿತಾಗಿ.
ಸಂಪರ್ಕ ರಸ್ತೆ
ಈ ರಸ್ತೆಯನ್ನು ಚಿತ್ರಗಳಲ್ಲಿ ನೋಡಿಯೇ ಬೆಚ್ಚಿ ಬಿದ್ದವರಿದ್ದಾರೆ. ಇನ್ನು ಇದರಲ್ಲಿ ನಡೆದಾಡುವವರ ಪಾಡೇನು? ಎಂಬ ಚಿಂತನೆ ಮೂಡುವಷ್ಟು ಕುಲಗೆಟ್ಟಿರುವ ಈ ರಸ್ತೆ 20ಕ್ಕೂ ಹೆಚ್ಚಿನ ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಮಳೆಯಿಂದ ತೊಡಕು
ಸರಕಾರದಿಂದ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ನಡೆಸಲು 8 ತಿಂಗಳ ಹಿಂದೆಯೇ ಗುದ್ದಲಿ ಪೂಜೆ ನೆರವೇರಿದೆ. ಬಳಿಕ ಕಾಮಗಾರಿ ಮಂದಗತಿಯಲ್ಲಿ ನಡೆದು ಈ ಬಾರಿ ಸತತ ಮಳೆ ಸುರಿದ ಪರಿಣಾಮ ಅತ್ತ ಕಾಮಗಾರಿಯನ್ನೂ ಮುಂದುವರಿಸಲಾಗದೆ ಇತ್ತ ರಸ್ತೆಯನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳಲೂ ಆಗದೆ ಈಗ ಅದು ಕೆಸರು ಗದ್ದೆಗಿಂತಲೂ ಕಡೆಯಾಗಿದೆ.
ಅನುದಾನ ಬಿಡುಗಡೆ
ರಸ್ತೆ ನಿರ್ಮಾಣಕ್ಕಾಗಿ ಸರಕಾರ ಅನುದಾನವನ್ನು ಬಿಡುಗಡೆ ಮಾಡಿದ್ದು ಸ್ವಾಗತಾರ್ಹ. ಅದರ ಸವಿಯನ್ನು ಅನುಭವಿಸೋಣ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಈ ರಸ್ತೆಯಲ್ಲಿ ನಡೆದಾಡಲೂ ಅಸಾಧ್ಯವಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಎಂಟು ತಿಂಗಳ ಹಿಂದೆ ಗುದ್ದಲಿ ಪೂಜೆಯಾದ ಈ ಕಾಮಗಾರಿ ಇಷ್ಟು ಹೊತ್ತಿಗೆ ಮುಗಿದು ರಸ್ತೆ ಬಳಕೆಗೆ ಲಭಿಸಬೇಕಾಗಿತ್ತು. ಆದರೆ ಕಾಮಗಾರಿ ವಿಳಂಬವಾಗಿ ಆರಂಭವಾಗಿದ್ದು, ಮಳೆ ಸುರಿದ ಪರಿಣಾಮ ಈ ದುಃಸ್ಥಿತಿ ಮೂಡಿದೆ. ಪರಿಸರದ ಮಕ್ಕಳ ಹಿತಾಸಕ್ತಿಯನ್ನು ಪರಿಗಣಿಸಿ ರಸ್ತೆಯನ್ನು ಕನಿಷ್ಠ ನಡೆದಾಡಲು ಯೋಗ್ಯವಾಗಿ ಮಾಡಬೇಕೆಂದು ಸ್ಥಳೀಯ ನಿವಾಸಿ ಜಯರಾಮ್ ಆಗ್ರಹಿಸಿದ್ದಾರೆ.