“ಮನೆಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಯಶಸ್ವಿ 50ನೇ ದಿನ
ವಿವಿಧೆಡೆ ಮಾಹಿತಿ ಶಿಬಿರ; ಕೈಜೋಡಿಸಿದ ಸಂಘ - ಸಂಸ್ಥೆಗಳು
Team Udayavani, Jul 27, 2019, 5:00 AM IST
ಮಹಾನಗರ: “ಮನೆಮನೆಗೆ ಮಳೆಕೊಯ್ಲು’ ಉದಯವಾಣಿಯ ಜಾಗೃತಿ ಅಭಿಯಾನ ಯಶಸ್ವಿ 50ನೇ ದಿನ ಪೂರೈಸಿದ್ದು, ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವ ಮಂದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೂನ್ ತಿಂಗಳ 7ರಂದು ಉದಯವಾಣಿಯು ಈ ಅಭಿಯಾವನ್ನು ಆರಂಭಿಸಿತ್ತು. ಈಗಾಗಲೇ ಅನೇಕ ಸಂಘ – ಸಂಸ್ಥೆಗಳು ಅಭಿಯಾನದ ಜತೆ ಕೈಜೋಡಿಸಿದ್ದು, ಅನೇಕ ಕಡೆಗಳಲ್ಲಿ ಮಳೆಕೊಯ್ಲು ಮಾಹಿತಿ ಶಿಬಿರಗಳು ನಡೆದಿವೆ.
ಉದಯವಾಣಿ ಪತ್ರಿಕೆಯು ದ.ಕ.ಜಿ.ಪಂ. ಸಹಯೋಗದೊಂದಿಗೆ ಜೂ. 19ರಂದು “ಮನೆಮನೆಗೆ ಮಳೆಕೊಯ್ಲು’ ಜಾಗೃತಿ ಅಭಿಯಾನದ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭ ನಿರ್ಮಿತಿ ಕೇಂದ್ರದವರು ಮಳಿಗೆ ಹಾಕಿ ಮಳೆಕೊಯ್ಲು ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದರು. ಮಳೆಕೊಯ್ಲು ಅಳವಡಿಸುವವರ ಮನೆಗೆ ತೆರಳಿ ಸಲಹೆ, ಮಾರ್ಗದರ್ಶನ ನೀಡುವ ಸಲುವಾಗಿ ಸ್ಥಳದಲ್ಲೇ ನೋಂದಣಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು. 74 ಮಂದಿ ಈ ವೇಳೆ ಸ್ಥಳದಲ್ಲೇ ನೋಂದಣಿ ಮಾಡಿದ್ದರು.
ಜೂ. 19ರಿಂದ ಜು. 26ರ ವೆರಗೆ ಸುರತ್ಕಲ್ನ ನಿರ್ಮಿತಿ ಕೇಂದ್ರಕ್ಕೆ ಮಳೆಕೊಯ್ಲು ಮಾಹಿತಿಗೆ ಸಂಬಂಧಿಸಿದಂತೆ ಒಟ್ಟಾರೆ 277 ಮಂದಿ ಕರೆ ಮಾಡಿದ್ದಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು 95 ಮನೆಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. 282 ಮಂದಿಗೆ ದೂರವಾಣಿಯ ಮುಖೇನ ಮಾಹಿತಿ ನೀಡಿದ್ದಾರೆ. ನಿರ್ಮಿತಿ ಕೇಂದ್ರ ವತಿಯಿಂದ ಮಳೆಕೊಯ್ಲು ವಿಚಾರಕ್ಕೆ ಸಂಬಂಧಿಸಿ 24 ಮಾಹಿತಿ ಕಾರ್ಯಕ್ರಮವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ.
ಉದಯವಾಣಿ ಅಭಿಯಾನದಿಂದ ಪ್ರೇರೇಪಣೆಗೊಂಡು ಈಗಾಗಲೇ ಹತ್ತಾರು ಮಂದಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಮಂಗಳೂರು ಮಾತ್ರವಲ್ಲದೆ, ಸುರತ್ಕಲ್, ಕಿನ್ನಿಗೋಳಿ, ಉಡುಪಿ, ಮೂಡುಬಿದಿರೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿಯೂ ಮಳೆಕೊಯ್ಲು ಅಳವಡಿಸಲು ಉತ್ಸುಕರಾಗಿದ್ದಾರೆ.
ಇಂಗು ಗುಂಡಿಗಳಿಂದ ನೀರಿನ ಒರತೆ ಹೆಚ್ಚಳ
ಮನೆಯಲ್ಲಿ ಅಳವಡಿಸಿದ ಮಳೆ ಕೊಯ್ಲು ಪದ್ಧತಿಯಿಂದ ನಮ್ಮ ಮನೆಗೆ ಮಾತ್ರವಲ್ಲದೆ ಅಕ್ಕ ಪಕ್ಕದ ಮನೆಯವರಿಗೂ ಸಹಕಾರಿಯಾಗಿದೆ. ಮಳೆಕೊಯ್ಲು ಅಳವಡಿಸಿ ಕೆಲವು ವರ್ಷಗಳಾಗಿವೆ ಈವರೆಗೂ ನೀರಿನ ಸಮಸ್ಯೆ ಬರಲಿಲ್ಲ. ಇದರಿಂದ ಅಕ್ಕ ಪಕ್ಕದ ಮನೆಯವರೂ ಉತ್ತೇಜೀತರಾಗಿದ್ದಾರೆ ಎಂದು ಹೇಳುತ್ತಾರೆ ಕಿನ್ನೀಗೋಳಿಯ ಡಾ| ಪಿ.ಎಂ. ಪ್ರಕಾಶ್ ನುಂಬಿಯಾರ್.
ಮನೆಯ ಛಾವಣಿಗೆ ಬೀಳುವ ಮಳೆ ನೀರನ್ನು ಪೈಪ್ ಆಳವಡಿಸಿ ಫಿಲ್ಟರ್ ಮಾಡಿ ಬಾವಿಗೆ ಬೀಳುವಂತೆ ಮಾಡಲಾಗಿದೆ. ಮಳೆಕೊಯ್ಲು ಅಳವಡಿಕೆಯಿಂದ ನೀರಿನ ಕೊರತೆಯನ್ನು ನೀಗಿಸಬಹುದು. ಇದರೊಂದಿಗೆ ಮನೆಯ ಆವರಣದ ಒಳಗಡೆ ಇಂಗು ಗುಂಡಿ ಮಾಡಿದ್ದೇನೆ. ಇದು ನೀರಿನ ಒರತೆಗೆ ತುಂಬ ಸಹಕಾರಿಯಾಗಿದೆ. ಇದರಿಂದ ನೀರಿನ ವಸರು ಕೂಡ ಜಾಸ್ತಿಯಾಗಿದೆ. ಈ ನಿಟ್ಟಿನಲ್ಲಿ ಪತ್ರಿಕೆಯ ಜಾಗೃತಿ ಕಾರ್ಯ ಶ್ಲಾಘನೀಯ ಎಂದು ಅವರು ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಮಳೆಕೊಯ್ಲು ಮಾಹಿತಿ
ಶ್ರೀನಿವಾಸ ವಿಶ್ವವಿದ್ಯಾನಿಲಯ, ಶ್ರೀನಿವಾಸ ಸಮೂಹ ಸಂಸ್ಥೆಗಳ ವತಿಯಿಂದ ಪಾಂಡೇಶ್ವರದಲ್ಲಿರುವ ಸಿಟಿ ಕ್ಯಾಂಪಸ್ನಲ್ಲಿ ಜು. 27ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಹಲವು ಕಂಪೆನಿಗಳು ಹಾಗೂ ಸುಮಾರು 2,000ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ವಿಶೇಷ ಅಂದರೆ, ಈ ಮೇಳದಲ್ಲಿ ಯುವ ಸಮೂಹದಲ್ಲಿ ಮಳೆ ನೀರು ಸಂಗ್ರಹದ ಬಗ್ಗೆ ಅರಿವು ಮೂಡಿಸಲು ಸುರತ್ಕಲ್ನ ನಿರ್ಮಿತಿ ಕೇಂದ್ರಯು “ಉದಯವಾಣಿ’ ಸಹಯೋಗದಲ್ಲಿ ಮಳೆಕೊಯ್ಲು ಬಗ್ಗೆ ಉಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳಕ್ಕೆ ಆಗಮಿಸುವ ಎಲ್ಲರಿಗೂ ಮಳೆಕೊಯ್ಲು ಅಳವಡಿಕೆ ಬಗ್ಗೆ ನಿರ್ಮಿತಿ ಕೇಂದ್ರದ ಸಿಬಂದಿ ಮಾಹಿತಿ ನೀಡಲಿದ್ದಾರೆ.
ಅಭಿಯಾನಕ್ಕೆ ಓದುಗರ ಸ್ಪಂದನೆ
ಅಭಿಯಾನ ಪ್ರಸ್ತುತ
ಅತ್ಯುತ್ತಮ ಅಭಿ ಯಾ ನವಿದು. ಅಮೂಲ್ಯ ನೀರನ್ನು ಸಂಗ್ರಹಿಸಿ ಭವಿಷ್ಯದ ದಿನಗಳಲ್ಲಿ ಉಪಯೋಗಿಸಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಳೆಕೊಯ್ಲು ಅಭಿಯಾನ ಪ್ರಸ್ತುತ.
-ಅಶ್ವಿನಿ ಟಿ. ಕುರ್ನಾಡ್
ನೀರಿನ ಮಹತ್ವ ಸಾರಿದ ಪತ್ರಿಕೆ
ನೀರಿನ ಮಹತ್ವದ ಬಗ್ಗೆ “ಉದಯವಾಣಿ’ ಸುದೀರ್ಘ ಅಭಿಯಾನದ ಮೂಲಕ ತಿಳಿಸಿಕೊಟ್ಟಿದೆ. ನೀರೇ ಸರ್ವಸ್ವ ಎಂಬುದನ್ನು ಸಮಾಜದ ಜನರು ಅಗತ್ಯವಾಗಿ ತಿಳಿಯಬೇಕಾಗಿದೆ.
-ವಿಶ್ವನಾಥ, ಗಾಂಧಿನಗರ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ವಿದ್ಯಾರ್ಥಿ
ಉತ್ತಮ ಪ್ರಯೋಗ
ಉದಯ ವಾಣಿ ಸುದಿನದಲ್ಲಿ ಪ್ರಕಟ ವಾಗುತ್ತಿರುವ ಮನೆಮನೆಗೆ ಮಳೆಕೊಯ್ಲು ಅಭಿಯಾನವು ಒಂದು ಉತ್ತಮ ಯೋಚನೆಯಾಗಿದೆ. ನೀರು ಉಳಿಸುವ ನಿಟ್ಟಿನಲ್ಲಿ ಇದೊಂದು ಸ್ಫೂರ್ತಿದಾಯಕ ಹೆಜ್ಜೆ. ಈ ಯೋಜನೆಯಿಂದ ನಾವು ಕೂಡ ಪ್ರೇರೇಪಣೆ ಪಡೆದಿದ್ದೇವೆ.
-ನಾಗವೇಣಿ, ಬಜ್ಜೋಡಿ
ಮಳೆಕೊಯ್ಲು ಅನಿವಾರ್ಯ
ಕಳೆದ ಬಾರಿಯ ಬೇಸಗೆ ವೇಳೆ ಜಲಕ್ಷಾಮ ದಿಂದಾಗಿ ಹನಿ ನೀರಿಗೂ ಪರದಾಡಿದ್ದೇವೆ. ಈ ನಿಟ್ಟಿನಲ್ಲಿ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಬೇಕಾದ ಅನಿವಾರ್ಯವಿದೆ. ಮಳೆಕೊಯ್ಲು ಅಳವಡಿ ಸುವುದರಿಂದ ಅಂತರ್ಜಲ ಮಟ್ಟವನ್ನು ಏರಿಕೆ ಮಾಡಬಹುದು. “ಉದಯವಾಣಿ ಸುದಿನ’ ಅಭಿಯಾನ ಉತ್ತಮವಾಗಿ ಮೂಡಿಬರುತ್ತಿದೆ.
-ಕೃಷ್ಣ, ಬಜ್ಜೋಡಿ ಬಿಕರ್ನಕಟ್ಟೆ
ಮಳೆಕೊಯ್ಲು ಅಳವಡಿಸಿ ಸಮಸ್ಯೆ ತಪ್ಪಿಸಿ
“ಉದಯವಾಣಿ ಸುದಿನ’ ಮನೆಮನೆಗೆ ಮಳೆಕೊಯ್ಲು ಅಭಿಯಾನವು ಜನರಲ್ಲಿ ಭವಿಷ್ಯದಲ್ಲಿ ಬರುವ ನೀರಿನ ಸಮಸ್ಯೆಗಳ ಬಗ್ಗೆಅರಿವು ಮೂಡಿಸಿ ತನ್ನ ಉದ್ದೇಶವನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ಸು ಕಂಡಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದರೆ, ನೀರಿನ ಸಮಸ್ಯೆ ತಪ್ಪಿಸಬಹುದು.
-ರೇವತಿ, ವಿದ್ಯಾರ್ಥಿನಿ, ವಿ.ವಿ. ಕಾಲೇಜು ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು