ಪರಿಸರ ಸಂರಕ್ಷಣೆಗಾಗಿ ಸಮ್ಮೇಳನಗಳು ನಡೆಯಲಿ
Team Udayavani, Dec 10, 2018, 11:03 AM IST
ತೊಡಿಕಾನ (ಡಾ| ಕೀಲಾರು ಗೋಪಾಲ ಕೃಷ್ಣಯ್ಯ ವೇದಿಕೆ): ಹಸಿರು ವನಸಿರಿಯಿದ್ದರೆ ಮಾನವನ ಬದುಕು ಐಸಿರಿಯನ್ನು ಕಾಣಲು ಸಾಧ್ಯವಿದೆ. ಹಸಿರು ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಮ್ಮೇಳನಗಳನ್ನು ನಡೆಸುವುದು ಇಂದಿನ ಕಾಲಮಾನಕ್ಕೆ ಬಹು ಅಗತ್ಯ ಎಂದು ಸುಳ್ಯ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಲಲಿತಾಜ ಮಲ್ಲಾರ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ, ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನ ಸಮಿತಿ ಆಶ್ರಯದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವಠಾರದಲ್ಲಿ ನಡೆದ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕೃತಿ ಒಲಿದರೆ ಮಾನವರ, ಪ್ರಾಣಿ ಪಕ್ಷಿಗಳ, ಸಸ್ಯ ಶ್ಯಾಮಲೆಯ ಉಳಿವು ಎನ್ನುವ ಅರಿವು ಪ್ರತಿಯೊಬ್ಬರಲ್ಲಿಯೂ ಇರಲೇಬೇಕು. ಮಾನವನ ಸೌಕರ್ಯಕ್ಕೆ ಮರ ಗಿಡಗಳು ಧರೆಗುರುಳುತ್ತಿವೆ. ಲಯಕರ್ತರಾದ ದೇವರನ್ನು ವೃಕ್ಷಗಳಲ್ಲಿಯೇ ಕಾಣುವ ನಾವು ಮರಗಳನ್ನೇ ಕಗ್ಗೊಲೆ ಮಾಡಿ ಮೆರೆಯುತ್ತಿದ್ದೇವೆ ಎಂದರು.
ಹಳ್ಳಿಯಿಲ್ಲದೆ ಭಾರತ ಇಲ್ಲ
ಹಳ್ಳಿಯಿಲ್ಲದ ಭಾರತದ ಪರಿಕಲ್ಪನೆಯೇ ಸಾಧ್ಯವಿಲ್ಲ. ಭಾರತದ ಆತ್ಮವೇ ಹಳ್ಳಿ, ಹಳ್ಳಿಯ ಗ್ರಾಮಗಳು. ಹಳ್ಳಿಗಳಿಗೂ ಆಧುನಿಕತೆಯ ಅಂಟು ಜಾಡ್ಯ ವ್ಯಾಪಿಸುತ್ತಿದೆ. ಯಂತ್ರಗಳು, ವಾಹನಗಳು, ಆಂಗ್ಲವ್ಯಾಮೋಹದ ವಿದ್ಯೆ ಹಳ್ಳಿಯ ಸೊಬಗನ್ನು ಕಬಳಿಸುತ್ತಿವೆ ಎಂದರು.
ಸಾಹಿತ್ಯ ಸಂಬಂಧ ಕ್ಷೀಣ
ಮಾಹಿತಿ ತಂತ್ರಜ್ಞಾನದ ಅಪ್ಪುಗೆಯಿಂದಾಗಿ ವಿದೇಶಿಗರು ಸಮೀಪವಾಗಿ ನೆರೆಹೊರೆಯವರು ದೂರವಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಮನಸ್ಸು ಸಣ್ಣದಾಗುತ್ತಿದೆ. ದೂರದರ್ಶನ ಕಾರ್ಯಕ್ರಮಗಳಲ್ಲಿ ಆಂಗ್ಲ ಶಬ್ದಗಳೇ ಅತಿಯಾಗುತ್ತಿವೆ. ವಿಶ್ವ ಶಾಂತಿಯ ಮಾತುಗಳ್ನಾಡಿ ಮನೆಯ ಶಾಂತಿಯನ್ನೇ ಕದಡುತ್ತಿದ್ದೇವೆ. ಗಣಕ ಯಂತ್ರಕ್ಕೆ ಮರುಳಾಗಿ ಮಾತೃಭಾಷೆ ಕನ್ನಡದ ಕಂಪಿಗೆ ಮಣ್ಣೆರಚಿ, ಸಾಹಿತ್ಯ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದವರು ವಿಷದ ವ್ಯಕ್ತಪಡಿಸಿದರು.
ಪುಸ್ತಕವೆಂದರೆ ಅಕ್ಷರಗಳ ಆಗರ, ಜ್ಞಾನ ಭಂಡಾರ, ಬೆಲೆ ಕಟ್ಟಲಾಗದ ಆಸ್ತಿ. ಒಂದು ಉತ್ತಮ ಗ್ರಂಥವನ್ನು ಓದಿದರೆ ನಮ್ಮ ವಿಚಾರ ಶಕ್ತಿಯನ್ನು ಹೆಚ್ಚಿಸಿ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ದಯ ಧರ್ಮದ ಶಕ್ತಿಯಲ್ಲಿ ಮಾನವೀಯ ಗುಣಗಳನ್ನು ಬಿತ್ತುತ್ತದೆ ಎಂದು ಅವರು ಹೇಳಿದರು.
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ
ಪ್ರಾಥಮಿಕ ಶಿಕ್ಷಣವು ಮಗುವಿನ ಮಾತೃಭಾಷೆಯಲ್ಲಿ ಇರಬೇಕು. ಇದರಿಂದ ಮಗುವಿನ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ, ಪದ ಪರಿಚಯ, ವಿಷಯ ಗ್ರಹಿಕೆ ಹೆಚ್ಚಿರುತ್ತದೆ. ಪರಿಸರದ ಭಾಷೆಯೊಡನೆ ಮಗುವಿನ ಒಡನಾಟ ಪಕೃತಿಯಷ್ಟೇ ಸಹಜವಾದದ್ದು ಎಂದ ಅವರು, ಇಂಗ್ಲಿಷನ್ನು ಕಲಿತ ಕೂಡಲೇ ಮನುಷ್ಯ ವಿದ್ಯಾವಂತ ಎನ್ನಿಸಿಕೊಳ್ಳುವುದು ಅಸಾಧ್ಯ. ಉತ್ತಮ ವ್ಯಕ್ತಿತ್ವ ಇದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಲಲಿತಾಜ ಮಲ್ಲಾರ ಹೇಳಿದರು.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ