ಬಸ್ ಟ್ರಿಪ್ ಮೊಟಕು: ಕುತ್ತೆತ್ತೂರು ನಾಗರಿಕರ ಪರದಾಟ
ಉತ್ತಮ ರಸ್ತೆಯಿದ್ದರೂ ಸಂಚಾರ ಸಮಸ್ಯೆ
Team Udayavani, Sep 22, 2022, 2:09 PM IST
ಸುರತ್ಕಲ್: ಊರಿಗೆ ರಸ್ತೆ ಸರಿ ಇಲ್ಲದಿದ್ದರೆ, ಹೊಂಡ-ಗುಂಡಿಗಳಿಂದ ತುಂಬಿದ್ದರೆ, ಬಸ್, ಆಟೋ ರಿಕ್ಷಾ ಮತ್ತಿತರ ಸಾರಿಗೆ ವಾಹನಗಳು ಮೂಲಸೌಕರ್ಯ ಸಮಸ್ಯೆಯ ನೆಪವೊಡ್ಡಿ ಹೋಗಲು ಹಿಂದೇಟು ಹಾಕುವುದು ಸಾಮಾನ್ಯ. ಆದರೆ ಈ ಊರಿಗೆ ಉತ್ತಮ ರಸ್ತೆಯಿದೆ. ನಗರಕ್ಕೆ ಕೆಲವೇ ಕಿ.ಮೀ.ಗಳ ಅಂತರ ಮಾತ್ರವಿದೆ. ಆದರೆ ಇಲ್ಲಿಗೆ ಬರುವ ಸಿಟಿ ಬಸ್ಗಳು ಮಾತ್ರ ಟ್ರಿಪ್ಗಳನ್ನು ಮೊಟಕುಗೊಳಿಸಿ ಜನರಿಗೆ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಪೆರ್ಮುದೆ ಗ್ರಾ.ಪಂ.ಗೆ ಸೇರಿರುವ ಕುತ್ತೆತ್ತೂರು ಗ್ರಾಮ ಎಲ್ಲ ರೀತಿಯಲ್ಲೂ ಉನ್ನತೀಕರಣಗೊಳ್ಳುತ್ತಿದೆ. ಎಂಆರ್ ಪಿಎಲ್ ಸಮೀಪದಲ್ಲೇ ಇದೆ. ಹೆಚ್ಚಿನ ಕೃಷಿ ಕುಟುಂಬಗಳು ಈಗಲೂ ಈ ಊರಿನಲ್ಲಿ ನೆಲೆಸಿವೆ. ಕಂಪೆನಿಗೆ ಬಂದ ಕಾರ್ಮಿಕರ ಕುಟುಂಬಗಳು ಇಲ್ಲಿ ಇವೆ. ನಿತ್ಯ ಈ ಊರಿನಿಂದ ನೂರಾರು ವಿದ್ಯಾರ್ಥಿಗಳು ಸುರತ್ಕಲ್, ಕಟೀಲು ಮತ್ತಿತರ ಕಡೆ ಪದವಿ, ಇನ್ನಿತರ ವಿದ್ಯಾಭ್ಯಾಸಕ್ಕೆ ಹೋಗುವವರು, ನಿತ್ಯ ಕೈಗಾರಿಕೆ ವಲಯಕ್ಕೆ, ಇನ್ನಿತರ ಕೆಲಸ ಕಾರ್ಯಗಳಿಗೆ ಸಂಚರಿಸುತ್ತಾರೆ.
ಸಿಟಿ ಬಸ್ ಪ್ರಮುಖ ಪಾತ್ರ
ನಗರದ ಸ್ಟೇಟ್ಬ್ಯಾಂಕ್ನಿಂದ ಕೃಷ್ಣಾಪುರ, ಕಾಟಿಪಳ್ಳ, ಕುತ್ತೆತ್ತೂರು ಕಡೆಗೆ ಪರ್ಮಿಟ್ ಪಡೆದ ಬಸ್ಗಳಿಗೆ ಕೊರತೆಯಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಿಟಿ ಬಸ್ಗಳು ಕೇವಲ ಬೆಳಗ್ಗೆ ಮತ್ತು ಸಂಜೆ ಒಂದು ಟ್ರಿಪ್ಗೆ ಸೀಮಿತಗೊಂಡಿವೆ. ಕಾರಣ ಪ್ರಯಾಣಿಕರು ಇಲ್ಲ ಎಂಬ ಸಬೂಬು ನೀಡಲಾಗುತ್ತಿದೆ. ಬೆಳಗ್ಗೆ ವಿದ್ಯಾರ್ಥಿಗಳಿಗೆ ಅನುಕೂಲವಲ್ಲದ ಸಮಯಕ್ಕೆ ಬಸ್ ಹೋಗುವುದರಿಂದ ಕಾಲೇಜಿಗೆ ವಿದ್ಯಾರ್ಥಿಗಳು ಒಂದೆರಡು ಗಂಟೆ ಮುಂಚಿತವಾಗಿಯೇ ಬಂದು ಸೇರುವಂತಾಗಿದೆ. ಗ್ರಾಮದಲ್ಲಿ ಮನೆಗಳು ದೂರ ದೂರ ಇರುವುದರಿಂದ ವಿದ್ಯಾರ್ಥಿನಿಯರು, ಮಹಿಳೆಯರು ಬಸ್ ಕೊರತೆಯಿಂದ ನಡೆದುಕೊಂಡು ಸುರಕ್ಷೆಯ ಭೀತಿಯಿಂದಲೇ ಹೋಗುವಂತಾಗಿದೆ. ಬಸ್ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಇದು ಒಂದು ರೀತಿಯ ಕುಗ್ರಾಮ ಎನ್ನುವ ಮನೋಭಾವನೆ ಜನರಲ್ಲಿ ಮೂಡುವಂತಾಗಿದೆ.
ಪ್ರಯೋಜನಕ್ಕೆ ಬಾರದ ಹೋರಾಟ
ಬಸ್ ಟ್ರಿಪ್ ಮೊಟಕು ಮಾಡುವ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಅದಕ್ಕೆ ಸಂಬಂಧ ಪಟ್ಟ ಕಚೇರಿ, ಅಧಿಕಾರಿಗಳ ಜತೆ ವಿಚಾರ ತಿಳಿಸಿದ್ದರೂ ಏನೂ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗಿಲ್ಲ.
ಡಿಸಿ ಆದೇಶಕ್ಕೆ ಬೆಲೆಯಿಲ್ಲ
ಈ ಕುತ್ತೆತ್ತೂರು ಗ್ರಾಮಕ್ಕೆ ಮಂಗಳೂರಿ ನಿಂದ ಕುತ್ತೆತ್ತೂರುವರಗೆ 4 ಬಸ್ಸಿನ ವ್ಯವಸ್ಥೆಯಿದೆ. 45ಡಿ ಮೂರು ಬಸ್ಸು, 15 ಡಿ ಒಂದು ಬಸ್ ಇಲ್ಲಿಗೆ ಪರ್ಮಿಟ್ ಪಡೆದಿದೆ. ಒಂದು ಬಸ್ ದಿನಕ್ಕೆ ಮೂರು ಟ್ರಿಪ್ಮಾಡಬೇಕು ಎಂದು ಜಿಲ್ಲಾಧಿ ಕಾರಿಗಳು, ಈ ಹಿಂದೆ ಗ್ರಾಮಸ್ಥರು, ಸಾರಿಗೆ ಇಲಾಖಾ ಅಧಿಕಾರಿಗಳು, ಬಸ್ ನಿರ್ವಾಹಕ ಮುಖ್ಯಸ್ಥರು ಜತೆಗಿದ್ದು, ಮಾತುಕತೆ ನಡೆಸಿ ಬಸ್ ಮಾಲಕರಿಗೆ ಆದೇಶ ಹೊರಡಿಸಿದ್ದರು.
ಜನರ ಸಂಚಾರ ಕಡಿಮೆ ಇದೆ ಎನ್ನುವ ಕಾರಣವನ್ನು ಮುಂದಿಟ್ಟು ನಿರ್ಲಕ್ಷ್ಯ ಧೋರಣೆಯಿಂದ ಬಸ್ಸನ್ನು ಅರ್ಧದಿಂದಲೇ ಹಿಂದಿರುಗಿಸಿ ಹೋಗು ವುದು ಇದೀಗ ಸಾಮಾನ್ಯವಾಗಿದೆ.
ರಿಕ್ಷಾ ಮೂಲಕ ಕನಿಷ್ಠ 100-150 ದರ ನೀಡಿ ನಿತ್ಯವೂ ಸಂಚರಿಸುವುದು ಸಾಧ್ಯವಾಗದ ಮಾತು. ಇದರಿಂದ ಬೇಸತ್ತ ಗ್ರಾಮಸ್ಥರು ನರ್ಮ್ ಬಸ್ಗೆ ಬೇಡಿಕೆ ಮಂಡಿಸಿದಾಗ ಬಸ್ಸಿನ ವ್ಯವಸ್ಥೆ ಮಾಡಿದ್ದರೂ ಅದು ಕೆಲವೇ ಕೆಲವು ದಿನಗಳಿಗೆ ಸೀಮಿತವಾಗಿ ಹೋಯಿತು. ಕಾರಣ ಸಿಟಿ ಬಸ್ಗಳ ಪೈಪೋಟಿಯಿಂದ ಸರಕಾರಿ ಬಸ್ ಬಾರದಂತೆ ಒತ್ತಡ ಹೇರಲಾಯಿತು ಎಂಬುದು ಗ್ರಾಮಸ್ಥರ ಆರೋಪ.
ಸಂಚಾರ ಮೊಟಕುಗೊಳಿಸುವಂತಿಲ್ಲ: ಬಸ್ಗಳು ಪರ್ಮಿಟ್ ಪಡೆದ ಬಳಿಕ ಗ್ರಾಮಕ್ಕೆ ವೇಳಾಪಟ್ಟಿಯಂತೆ ಸಂಚಾರ ಕೈಗೊಳ್ಳಬೇಕು. ಪ್ರಯಾಣಿಕರ ಕೊರತೆ ಕಾರಣಕ್ಕಾಗಿ ಮೊಟಕುಗೊಳಿಸುವಂತಿಲ್ಲ. ಗ್ರಾಮಸ್ಥರಿಂದ, ಗ್ರಾಮ ಪಂಚಾಯತ್ನಿಂದ ಸಾರಿಗೆ ಇಲಾಖೆಗೆ ದೂರು ಬಂದರೆ ಸೂಕ್ತ ಕ್ರಮ ಕೈಗೊಂಡು ಪರಿಹಾರೋಪಾಯಕ್ಕೆ ಕ್ರಮ ಜರಗಿಸಲಾಗುವುದು. – ರವಿಶಂಕರ್ ಪಿ., ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ
ಮನವಿ ಸಲ್ಲಿಸಲಾಗಿದೆ: ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ, ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜಂಟಿ ಸಭೆ ನಡೆಸಿದ ಬಳಿಕ ಒಂದೆರಡು ದಿನ ಬಂದರೂ ಮತ್ತೆ ಟ್ರಿಪ್ ಮೊಟಕು ಗೊಳಿಸಲಾಯಿತು. ನಗರದ ಸಮೀಪವಿದ್ದರೂ ಬಸ್ಸಿಲ್ಲದೆ ಜನ ಪರದಾಡುವಂತಾಗಿದೆ. – ಪ್ರಸಾದ್ ಅಂಚನ್, ಅಧ್ಯಕ್ಷರು, ಪೆರ್ಮುದೆ ಗ್ರಾಮ ಪಂಚಾಯತ್
-ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?