“ಕುಕ್ಕೆ ದೇವರಿಗೆ ಭಕ್ತರ ದೇಣಿಗೆಯಲ್ಲಿ ಸುವರ್ಣರಥ’
Team Udayavani, Apr 30, 2019, 6:30 AM IST
ಸುಬ್ರಹ್ಮಣ್ಯ : ಕುಕ್ಕೆ ದೇವರ ಸುವರ್ಣ ರಥವನ್ನು ಕ್ಷೇತ್ರದ ಭಕ್ತರ ದೇಣಿಗೆ ಮತ್ತು ದೇಗುಲದ ಆದಾಯ ಬಳಸಿ ನಿರ್ಮಿಸಲಾಗುತ್ತಿದೆ. ಸರಕಾರದ ಹಣಕಾಸು ಒಪ್ಪಿಗೆ ದೊರೆತ ತತ್ಕ್ಷಣ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು, ಮುಂದಿನ ಅಕ್ಟೋಬರ್ ಒಳಗೆ ನಿರ್ಮಾಣ ಪೂರ್ಣವಾಗಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿನ್ನದ ರಥ ನಿರ್ಮಾಣ ಮಾಡಲು 2006ರಲ್ಲಿ ಹಿಂದಿನ ಆಡಳಿತ ಸಮಿತಿಯು ಭಕ್ತರ ಆಶಯದಂತೆ ನಿರ್ಧರಿಸಿತ್ತು. 15 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ನಡೆದು ಶಿಲ್ಪಿಗಳು ಮರದ ಕೆತ್ತನೆ ಆರಂಭಿಸಿದ್ದರು. ಆದರೆ ಚಿನ್ನದ ದರದಲ್ಲಿ ವ್ಯತ್ಯಾಸದಿಂದಾಗಿ ಸ್ಥಗಿತಗೊಂಡಿತ್ತು ಎಂದು ಮುಂಡೋಡಿ ಹೇಳಿದರು.
ಈ ಕುರಿತು ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು ಸುವರ್ಣ ರಥ ನಿರ್ಮಾಣ ಪೂರ್ಣಗೊಳಿಸುವ ಕುರಿತು ನಮ್ಮನ್ನು ಬೆಂಗಳೂರಿಗೆ ಕರೆಸಿ ಚರ್ಚಿಸಿದ್ದಾರೆ. ದೇಗುಲದ ಸ್ಥಿತಿಗತಿ, ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. 88 ಕೋಟಿ ರೂ. ವೆಚ್ಚದ ರಥ ನಿರ್ಮಾಣಕ್ಕೆ ತಾಂತ್ರಿಕ ಮತ್ತು ಹಣಕಾಸಿನ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಿಕೊಡುತ್ತಿದ್ದು, ಮೇ 6ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆತು ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಲಿದೆ ಎಂದರು.
ರಥ ನಿರ್ಮಾಣ ಸಮಿತಿ
ಸೋಮವಾರ ಆಡಳಿತ ಮಂಡಳಿ ಸಮಿತಿಯ ಸಭೆಯಲ್ಲಿ ರಥ ನಿರ್ಮಾಣದ ಕುರಿತು ಚರ್ಚೆ ನಡೆದಿದೆ. ಅ. 15ರ ಒಳಗೆ ರಥ ನಿರ್ಮಾಣ ಪೂರ್ಣ ಗೊಳಿಸಲು ನಿರ್ಧರಿಸಿದ್ದೇವೆ. ರಥ ನಿರ್ಮಾಣ ಸಮಿತಿ ರಚಿಸಿ ಪ್ರತ್ಯೇಕ ಖಾತೆಯನ್ನು ತೆರೆಯಲಾಗುತ್ತದೆ. ಭಕ್ತರಿಂದ ಚಿನ್ನ ಮತ್ತು ನಗದು ರೂಪದ ದೇಣಿಗೆ ಸ್ವೀಕರಿಸಲಾಗುತ್ತದೆ. ಆರಂಭದಲ್ಲಿ 13 ಕೆ.ಜಿ.ಯಷ್ಟು ದೇಗುಲದ ಚಿನ್ನವನ್ನೇ ಬಳಸಿಕೊಳ್ಳಲಾಗುವುದು. ರಥ 14 ಅಡಿ 8 ಇಂಚು ಎತ್ತರವಿರಲಿದೆ ಎಂದರು.
14 ಕೋ.ರೂ. ವೆಚ್ಚದಲ್ಲಿ ಹೊರಾಂಗಣ ಸುತ್ತುಪೌಳಿ
ದೇಗುಲದ ಹೊರಾಂಗಣ ಸುತ್ತುಪೌಳಿ ನಿರ್ಮಾಣಕ್ಕೆ 14 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರದ ಹಣಕಾಸು ಅನುಮೋದನೆಗೆ ಕಳುಹಿಸಿಕೊಟ್ಟಿದ್ದೇವೆ. 68 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ. ಆದಿಸುಬ್ರಹ್ಮಣ್ಯದಲ್ಲಿ 182 ಕೊಠಡಿಗಳ ನೂತನ ವಸತಿಗ್ರಹ ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ನಗರದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಿದ್ದೇವೆ.
ಕುಮಾರಧಾರೆಯಲ್ಲಿ ಭಕ್ತರಿಗೆ ಪುಣ್ಯ ಸ್ನಾನಕ್ಕೆ ತೆರಳಲು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟು ಎಲ್ಲೆಂದರಲ್ಲಿ ನದಿಗೆ ತ್ಯಾಜ್ಯ ಸುರಿಯದಂತೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಚ್.ಎಂ., ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಮಹೇಶ್ಕುಮಾರ್ ಕರಿಕ್ಕಳ, ರಾಜೀವಿ ರೈ ಆರ್., ದಮಯಂತಿ ಕೂಜುಗೋಡು, ಮಾಧವ ಡಿ. ಉಪಸ್ಥಿತರಿದ್ದರು.
“ಸರಕಾರಿ ಅನುದಾನ ಇಲ್ಲ’
ಬೆಂಗಳೂರು:
ಕ್ಕೆ ಸಮರ್ಪಿಸಲು ಉದ್ದೇಶಿಸಿರುವ ಚಿನ್ನದ ರಥಕ್ಕೆ ಸರಕಾರದ ಅನುದಾನ ಬಳಸುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟನೆ ನೀಡಿದೆ.
ಸಾರ್ವಜನಿಕರ ದೇಣಿಗೆ ಸಂಗ್ರಹ ಮತ್ತು ದೇವಾಲಯದ ಸಂಪನ್ಮೂಲಗಳಿಂದಲೇ ರಥದ ನಿರ್ಮಾಣ ವೆಚ್ಚ ಭರಿಸುವಂತೆ ತಿಳಿಸಲಾಗಿದೆ. ಇದು ಹಳೆಯ ಪ್ರಸ್ತಾವನೆಯಾಗಿದ್ದು, ಇತ್ತೀಚೆಗೆ ಕ್ಷೇತ್ರದ ಭಕ್ತರೊಬ್ಬರು ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ನನೆಗುದಿಗೆ ಬಿದ್ದಿರುವ ರಥದ ಯೋಜನೆ ಮುಂದುವರಿಸುವಂತೆ ಮನವಿ ಮಾಡಿದ್ದರು ಎಂದು ತಿಳಿಸಲಾಗಿದೆ.