ದ. ಕ ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿ ಕೇಂದ್ರದಿಂದ 10,000 ಕೋ.ರೂ
Team Udayavani, May 25, 2017, 3:37 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ 10 ಸಾವಿರ ಕೋ.ರೂ. ನೀಡುತ್ತಿದೆ. ಹೆಚ್ಚುವರಿಯಾಗಿ ಈಗಾಗಲೇ 5,500 ಕೋ.ರೂ.ಗಳನ್ನು ದ.ಕ. ಹೆದ್ದಾರಿಗೆ ಬಳಕೆ ಮಾಡಲಾಗಿದೆ ಎಂದು ಸಂಸದ ನಳಿನ್ ತಿಳಿಸಿದರು.
ಅವರು ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ನೇರ ಪೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಳಿಕ ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಸಂಸದರು ಉತ್ತರಿಸಿದರು.ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಈಗಾಗಲೇ ಸಾಕಷ್ಟು ಅನುದಾನಗಳು ಬಂದಿವೆ. 1,200 ಕೋ.ರೂ.ಗಳನ್ನು ರೈಲ್ವೇ ಇಲಾಖೆಗೆ ಬಳಕೆ ಮಾಡಲಾಗಿದೆ. ಕೃಷಿಗೆ ಪ್ರಧಾನಿ ಸಿಂಚನ ಯೋಜನೆ ಮೂಲಕ ಜಿಲ್ಲೆಗೆ 5,500 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅಮೃತ್ ಯೋಜನೆ ಮೂಲಕ ನಗರ ಪ್ರದೇಶಕ್ಕೆ 163 ಕೋ.ರೂ., ಮಂಗಳೂರು ಸ್ಮಾರ್ಟ್ ಸಿಟಿಗೆ ಸಾವಿರ ಕೋ.ರೂ. ಅನುದಾನ ಬರುತ್ತಿದೆ.
ಮಂಗಳೂರು-ಅಡ್ಡಹೊಳೆ ರಾ.ಹೆ. ಚತುಷ್ಪಥ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದ್ದು, ದೇಶದಲ್ಲೇ ದೊಡ್ಡದಾದ ಕಾಂಕ್ರೀಟ್ ರಸ್ತೆ ಇದಾಗಿರುತ್ತದೆ. ವಿಮಾನ ನಿಲ್ದಾಣದ ಹೆಚ್ಚುವರಿ ರನ್ವೇ ಗೆ ಸಾವಿರ ಕೋ.ರೂ., ಭಾರತ್ಮಾಲಾ ಯೋಜನೆ ಮೂಲಕ ಹಳೆಬಂದರಿನಿಂದ ಹೆದ್ದಾರಿ ಸಂಪರ್ಕಿಸುವ ರಸ್ತೆಗೆ 63 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ವಿಶ್ವ ದರ್ಜೆಯ ರೈಲು ನಿಲ್ದಾಣ ಕಾರ್ಯ ಪ್ರಗತಿಯಲ್ಲಿದ್ದು, ಪುತ್ತೂರು ಆದರ್ಶ ರೈಲ್ವೇ ನಿಲ್ದಾಣ ಕಾಮಗಾರಿ ಮುಗಿದಿದೆ ಎಂದರು.
ಮಂಗಳೂರಿಗೆ ಪ್ರತ್ಯೇಕ ವಿಭಾಗ ಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಡಿ.ವಿ. ಸದಾನಂದ ಗೌಡ ಅವರು ರೈಲ್ವೇ ಸಚಿವರಾಗಿದ್ದಾಗ ಈ ಕುರಿತು ಪ್ರಯತ್ನಗಳು ನಡೆದಿದ್ದವು. ಇಲ್ಲಿ ಆದಾಯದ ಸಮಸ್ಯೆಯೂ ಇದೆ ಎಂದು ಸಾರ್ವಜನಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
4ನೇ ಪ್ಲಾಟ್ಫಾರ್ಮ್ ಬೇಡಿಕೆ
ಮಂಗಳೂರು-ಬೆಂಗಳೂರು ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು ಸೆಂಟ್ರಲ್ನ ಬದಲು ಜಂಕ್ಷನ್ ರೈಲು ನಿಲ್ದಾಣದಿಂದ ತೆರಳುತ್ತಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕಳೆದ 25 ವರ್ಷಗಳಿಂದ ಮೂರೇ ಪ್ಲಾಟ್ಫಾರ್ಮ್ಗಳಿದ್ದು, 4ನೇ ಪ್ಲಾಟ್ಫಾರ್ಮ್ನ ಬೇಡಿಕೆಯೂ ಹಾಗೆ ಇದೆ ಎಂದು ಸಾರ್ವಜನಿಕರು ಗಮನ ಸೆಳೆದರು.
ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲನ್ನು ಸೆಂಟ್ರಲ್ನಿಂದ ಓಡಿಸಲು ಪ್ರಯತ್ನ ನಡೆಯುತ್ತಿವೆ. ಜತೆಗೆ ಮೂರೇ ಪ್ಲಾಟ್ಫಾರ್ಮ್ನಿಂದ ಒತ್ತಡ ಹೆಚ್ಚಿದ್ದು, 4ನೇ ಪ್ಲಾಟ್ಫಾರ್ಮ್ಗೆ ಯತ್ನಿಸಲಾಗುತ್ತಿದೆ. ಮಂಗಳೂರು- ಹುಬ್ಬಳ್ಳಿ ಮಹಾಲಕ್ಷ್ಮೀ ಎಕ್ಸ್ ಪ್ರಸ್ ರೈಲು ಸಂಚಾರ ಆರಂಭಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಬೈಂದೂರು-ಮಂಗಳೂರು-ಕಣ್ಣೂರು ರೈಲು ಕೂಡ ಶೀಘ್ರ ಪುನರಾರಂಭಗೊಳ್ಳಲಿದೆ ಎಂದರು.
ಸರಕಾರದ ಟೋಲ್ ರದ್ದು
ಹೆದ್ದಾರಿಗಳಿಗೆ ಸರಕಾರವೇ ದುಡ್ಡು ಹಾಕಿ ವಾಹನಿಗರಿಂದ ಟೋಲ್ ಸಂಗ್ರಹ ಮಾಡುವುದು ಒಂದು ವಿಧವಾದರೆ ಖಾಸಗಿ ಕಂಪೆನಿಗಳು ಪಿಪಿಪಿ ಮಾದರಿಯಲ್ಲಿ ಅವರೇ ಹಣ ಹಾಕಿ ರಸ್ತೆ ಮಾಡಿ ಟೋಲ್ ಸಂಗ್ರಹಿಸುವುದು ಇನ್ನೊಂದು. ಪ್ರಸ್ತುತ ಕೇಂದ್ರ ಸರಕಾರದ ಮೋಟಾರ್ ಬಿಲ್ ಆ್ಯಕ್ಟ್ನ ಮೂಲಕ ಸರಕಾರದ ಟೋಲ್ಗಳನ್ನು ತೆಗೆದು ಪಿಪಿಪಿ ಮಾದರಿಯ ಟೋಲನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ.
– ನಳಿನ್ ಕುಮಾರ್ ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ