ಕೋಂಗಲಪಾದೆ, ಕಂಚಿನಡ್ಕಪದವಿನಲ್ಲಿ ಮಾದರಿ ಶ್ಮಶಾನಗಳು
ಬಂಟ್ವಾಳ ತಾ|ನ 8 ಗ್ರಾಮಗಳಲ್ಲಿ ರುದ್ರಭೂಮಿ ವ್ಯವಸ್ಥೆಯೇ ಇಲ್ಲ
Team Udayavani, Mar 16, 2020, 5:00 AM IST
ಕಲ್ಲಡ್ಕ: ರುದ್ರಭೂಮಿ ಹೇಗಿರಬೇಕು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೋಂಗಲಪಾದೆ ಮತ್ತು ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ಎರಡು ಶ್ಮಶಾನಗಳು ಮಾದರಿಯಾಗಿವೆ.
ಕೋಂಗಲಪಾದೆಯಲ್ಲಿ 5.29 ಎಕ್ರೆ ಜಮೀನು ಶ್ಮಶಾನದ ಉದ್ದೇಶಕ್ಕೆ ಮೀಸಲಾಗಿದೆ. ಇಲ್ಲಿ ನೂರಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನೆಡಲಾಗಿದೆ. ಕ್ರೀಡಾಂಗಣ ರಚಿಸಲಾಗಿದೆ. ಸುಖಾಸಿನಗಳನ್ನು ಅಳವಡಿಸಿದ್ದು, ರುದ್ರ ದೇವರ ಬೃಹತ್ ಮೂರ್ತಿ ಯನ್ನು, ತ್ರಿಶೂಲವನ್ನು ಸ್ಥಾಪಿಸಲಾಗಿದೆ.
ಕಂಚಿನಡ್ಕಪದವಿನಲ್ಲಿ 1.20 ಎಕ್ರೆ ಜಮೀನು ಶ್ಮಶಾನದ ಉದ್ದೇಶಕ್ಕೆ ಮೀಸಲಾಗಿದೆ. ಶ್ಮಶಾನವನ್ನು ಸೌಕರ್ಯ, ಸೌಲಭ್ಯಗಳಿಂದ ನಿರ್ಮಿಸಲಾಗಿದೆ.ರುದ್ರ ದೇವರ ಬೃಹತ್ ಮೂರ್ತಿಯನ್ನು, ತ್ರಿಶೂಲ ವನ್ನು ಸ್ಥಾಪಿಸಲಾಗಿದೆ.
8 ಗ್ರಾಮಗಳಲ್ಲಿ
ರುದ್ರಭೂಮಿ ವ್ಯವಸ್ಥೆ ಇಲ್ಲ
ಬಂಟ್ವಾಳ ತಾಲೂಕಿನ 58 ಗ್ರಾ.ಪಂ.ಗಳಲ್ಲಿ ರುದ್ರಭೂಮಿ ವ್ಯವಸ್ಥೆಯೇ ಇಲ್ಲದ 8 ಗ್ರಾಮಗಳಿವೆ. ಇಲ್ಲಿನ ಗ್ರಾಮಸ್ಥರು ಹತ್ತಿರದ ಗ್ರಾಮದ ಶ್ಮಶಾನವನ್ನು ಅವಲಂಬಿಸಿದ್ದಾರೆ. 16 ಗ್ರಾಮಗಳ ಶ್ಮಶಾನಗಳಲ್ಲಿ ಸಮರ್ಪಕ ಸೌಕರ್ಯಗಳಿಲ್ಲ. ಅವುಗಳಲ್ಲಿ ಬಂಟ್ವಾಳ ನಗರ ಕೇಂದ್ರ ಬಿ.ಸಿ. ರೋಡ್ನ ಕೈಕುಂಜೆ ಶ್ಮ¾ಶಾನವೂ ಕೂಡ ಒಂದಾಗಿದೆ.
ಕೈಕುಂಜೆ ರುದ್ರಭೂಮಿಗೆ ಸಂಪರ್ಕಿಸುವ ರಸ್ತೆ ರೈಲ್ವೇ ಇಲಾಖೆ ಜಮೀನಿನಲ್ಲಿ ಹೋಗುವುದರಿಂದ ಸಮಸ್ಯೆ ಎದುರಾಗಿದೆ. ನಿರ್ವಾಹಕರ ಕೊರತೆ ಯಿಂದ ಸಮಸ್ಯೆ ಎದುರಾಗಿದ್ದು, ಮೃತದೇಹ ವನ್ನು ಹತ್ತಿರದ ಇತರ ಗ್ರಾಮಗಳ ಶ್ಮ¾ಶಾನಕ್ಕೆ ಕೊಂಡು ಹೋಗುವಂತಾಗಿದೆ.
ತಾಲೂಕಿನ ಅನೇಕ ಗ್ರಾ.ಪಂ.ಗಳಲ್ಲಿ ಶ್ಮಶಾನಕ್ಕೆ ಜಮೀನು ಕಾದಿರಿಸಲಾಗಿದೆ. ಕಟ್ಟಡ ನಿರ್ಮಿಸಿ ಅರ್ಧದಲ್ಲಿ ನಿಲ್ಲಿಸಲಾಗಿದೆ. ಆರ್ಥಿಕ ಸಮಸ್ಯೆ, ಜಮೀನು ವಿವಾದ, ಆಕ್ಷೇಪಗಳಿಂದಾಗಿ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಸೋತಿದೆ. ಪ್ರಾಥಮಿಕವಾಗಿ ಜಮೀನು ಇಲ್ಲದಿರುವುದು. ಅನುದಾನದ ಕೊರತೆ, ಆಡಳಿತದ ನಿರಾಸಕ್ತಿ ಶ್ಮಶಾನ ನಿರ್ಮಾಣ ಸಮಸ್ಯೆಗೆ ಕಾರಣಗಳಾಗಿದೆ.
ಅತಿಕ್ರಮಣ
ರುದ್ರಭೂಮಿಗೆ ಮೀಸಲಿಟ್ಟ ಜಮೀನನ್ನು ಖಾಸಗಿ ವ್ಯಕ್ತಿಗಳು ಅಧಿಕಾರ ಬಲದಿಂದ ಅತಿಕ್ರಮಿಸಿ ತನ್ನ ಕುಟುಂಬಿಕರಿಗೆ, ಸಂಬಂಧಿಗಳಿಗೆ, ಸ್ವಹಿತಾಸಕ್ತರಿಗೆ ಅಕ್ರಮ-ಸಕ್ರಮದಲ್ಲಿ ಪರಾಭಾರೆ ಮಾಡಿಸಿಕೊಟ್ಟಿದ್ದಾರೆ ಎಂಬ ದೂರುಗಳಿವೆ. ಇಂತಹ ದೂರುಗಳನ್ನು ತಹಶೀಲ್ದಾರ್ ಕೂಡಾ ಪರಿಹರಿಸಲಾಗದೆ ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪಗಳಿವೆ.
ಸರಕಾರಿ ಭೂಮಿ ಗುರುತಿಸಲು ಸೂಚನೆ
ಜಮೀನು ಕಾದಿರಿಸದ ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವಂತಹ ಸರಕಾರಿ ಭೂಮಿಯನ್ನು ಗುರುತಿಸಿ ಶ್ಮಶಾನಕ್ಕೆ ಗೊತ್ತುಪಡಿಸಲು ಸೂಚಿಸಲಾಗಿದೆ. ಶ್ಮಶಾನ ನಿರ್ಮಾಣ ಆರ್ಥಿಕ ಸಂಪನ್ಮೂಲಕ್ಕೆ ಉದ್ಯೋಗ ಖಾತರಿ ಯೋಜನೆ ಸಹಿತ ವಿವಿಧ ಮೂಲಗಳಿಂದ ಅನುದಾನ ಒದಗಿಸಲು ಸಾಧ್ಯವಿದೆ. ಈ ಸದುದ್ದೇಶಕ್ಕೆ ಖಾಸಗಿ ಸಾಮಾಜಿಕ ಸಂಘಸಂಸ್ಥೆಗಳು ಕೈಜೋಡಿಸುತ್ತವೆ. ಶ್ರೀಕ್ಷೇತ್ರ ಧ.ಗಾ. ಯೋಜನೆ ಪ್ರೋತ್ಸಾಹವನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಿದೆ.
– ರಾಜಣ್ಣ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಪುರಸಭಾ ವ್ಯಾಪ್ತಿ ರುದ್ರಭೂಮಿ
– ಪಾಣೆಮಂಗಳೂರು ಗ್ರಾಮದ ಮಾಸ್ತಿಕಟ್ಟೆ- 0.50 ಎಕ್ರೆ, ನೇತ್ರಾವತಿ ನದಿ ತೀರದ ಸುಸಜ್ಜಿತ ಶ್ಮಶಾನ.
– ಬಿ. ಕಸ್ಬಾ ಗ್ರಾಮದ ಬಡ್ಡಕಟ್ಟೆ-0.30 ಎಕ್ರೆ, ನೇತ್ರಾವತಿ ನದಿ ತೀರದ ಸುಸಜ್ಜಿತ ಶ್ಮಶಾನವಿದೆ.
– ಬಿ. ಮೂಡ ಗ್ರಾಮದ ಕೈಕುಂಜೆ: 0.60 ಎಕ್ರೆ, ನೇತ್ರಾವತಿ ನದಿ ಸನಿಹವಿದೆ. ರಸ್ತೆ ಮತ್ತು ನಿರ್ವಾಹಕರ ಕೊರತೆ ಇದೆ ಎದುರಿಸುತ್ತಿದೆ.
– ರಾಜಾ ಬಂಟ್ವಾಳ