ಧರ್ಮಸ್ಥಳಕ್ಕೆ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜ್ ಆಗಮನ
Team Udayavani, Feb 1, 2019, 1:00 AM IST
ಬೆಳ್ತಂಗಡಿ: ಧರ್ಮವು ಸಕಲ ಜೀವಿಗಳಿಗೂ ಹಿತಕರವಾಗಿದ್ದು, ಸುಖ -ಶಾಂತಿ ನೀಡುತ್ತದೆ. ಧರ್ಮಾನುಷ್ಠಾನದಿಂದ ಆತ್ಮಕಲ್ಯಾಣವಾಗುತ್ತದೆ ಎಂದು ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರು ನುಡಿದರು.
ಧರ್ಮಸ್ಥಳಕ್ಕೆ ಗುರುವಾರ ಪುರಪ್ರವೇಶ ಮಾಡಿದ ಮುನಿ ಸಂಘವನ್ನು ಸ್ವಾಗತಿಸಿ ಮುಖ್ಯ ಪ್ರವೇಶ ದ್ವಾರದಿಂದ ಬಸದಿವರೆಗೆ ಭವ್ಯ ಮೆರವಣಿಗೆಯಲ್ಲಿ ಬರ ಮಾಡಿಕೊಂಡಿತು.
ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ದರ್ಶನ ಮಾಡಿ, ಪೂಜೆ ವೀಕ್ಷಿಸಿದ ಬಳಿಕ ಅವರು ಮಂಗಲ ಪ್ರವಚನ ನೀಡಿ, ಧರ್ಮಸ್ಥಳವು ಧರ್ಮದ ನೆಲೆವೀಡಾಗಿದ್ದು, ಇಲ್ಲಿ ಸರ್ವಧರ್ಮೀಯರಿಗೂ ಸಮಾನ ಮಾನ್ಯತೆ, ಗೌರವ ಇದೆ. ಸಕಲ ಧರ್ಮಗಳಲ್ಲಿ ಧಾರ್ಮಿಕ ಕ್ರಿಯೆ ವಿಭಿನ್ನವಾಗಿದ್ದರೂ ಅಹಿಂಸಾ ಧರ್ಮ ಶ್ರೇಷ್ಠ ಧರ್ಮವಾಗಿದೆ. ಎಲ್ಲರೂ ಅಹಿಂಸೆಗೆ ಮಾನ್ಯತೆ ನೀಡುತ್ತಾರೆ. ಭಗವಾನ್ ಮಹಾವೀರಸ್ವಾಮಿ ಅನೇಕಾಂತದ ಮೂಲಕ ಎಲ್ಲ ಸಮಸ್ಯೆಗಳಿಗೆ ಸೌಹಾರ್ದ ಪರಿಹಾರ ನೀಡಿದರು ಎಂದರು.
ಧರ್ಮಸ್ಥಳದಲ್ಲಿ ಮಾತೃಶ್ರೀ ರತ್ನಮ್ಮನವರ ಆಶಯದಂತೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಾಹುಬಲಿ ಮೂರ್ತಿ ಪ್ರತಿಷ್ಠೆ ಮಾಡಿ ಮಹಾಮಸ್ತಕಾಭಿಷೇಕ ನೆರವೇರಿಸುತ್ತಿರುವುದು ಭುವನದ ಭಾಗ್ಯ; ಅದನ್ನು ನೋಡಿ ಪುಣ್ಯ ಸಂಚಯ ಮಾಡಿಕೊಳ್ಳುವುದು ನಮ್ಮ ಭಾಗ್ಯ ಎಂದರು.
ಮುನಿ ಸಂಘವನ್ನು ಭಕ್ತಿಪೂರ್ವಕ ಸ್ವಾಗತಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಸ್ತಾವನೆಗೈದು, ಮುನಿ ಸಂಘದ ಆಗಮನದಿಂದ ಧರ್ಮಸ್ಥಳ ಕ್ಷೇತ್ರವೇ ಪಾವನವಾಗಿದೆ. ಇದೇ ನಿಜವಾದ ಮಹೋತ್ಸವ ಎಂದರು. ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರ ಪಾವನ ಆತ್ಮಚರಿತ್ರೆಯ ಪುಸ್ತಕವನ್ನು ಎಲ್ಲರಿಗೂ ಉಚಿತವಾಗಿ ವಿತರಿಸಲಾಯಿತು.
ಹೇಮಾವತಿ ವೀ. ಹೆಗ್ಗಡೆ, ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್, ಸುಪ್ರಿಯಾ ಹಷೇìಂದ್ರ ಕುಮಾರ್, ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆಯ ಆನಡ್ಕ ದಿನೇಶ್ ಕುಮಾರ್ ಮತ್ತು ಸುದೇಶ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ