ದಿ ಗ್ರೇಟ್ ಎಸ್ಕೇಪ್
Team Udayavani, Jun 7, 2018, 3:55 PM IST
ಮೆಕ್ಸಿಕೋಗೆ ಬಂದ ಮೊದಮೊದಲಲ್ಲಿ ಇಲ್ಲಿರೋ ಮೆಟಾಕ್ಯಾನಸ್ ಎಂಬೋ ಜಾಗದ ಬಗ್ಗೆ ಕೇಳಿದ್ದೆ. ದಟ್ಟಕಾಡಿನ ಮಧ್ಯೆ ಹರಿಯೋ ನೀರಿಗೆ ಬಂಡೆಗಳ ಮೇಲಿಂದ ಧುಮುಕಬೇಕು. ಆಳ ಅಗಲದ ನೀರಲ್ಲಿ ಮತ್ತೂಂದು ಬಂಡೆ ಸಿಗುವ ತನಕ ಈಜಬೇಕು. ಚೆನ್ನಾಗಿ ಈಜೋಕೆ ಬರಲಿಲ್ಲ ಅಂದ್ರೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಸಮುದ್ರಕ್ಕೆ ಹೋಗಿಬಿಡ್ತೀವಿ ಅಂತೆಲ್ಲ ಹೇಳಿದ್ದ ಫ್ರೆಂಡ್ನ ಮಾತು ಕೇಳಿ ಇಷ್ಟೆಲ್ಲಾ ರಿಸ್ಕ್ ತಗೊಂಡು ಯಾವುದಾದರೂ ಜಾಗಕ್ಕೆ ಹೋಗೋ ಅಗತ್ಯವಿದೆಯೊ ಅಂಥ ಅಲ್ಲಿಗೆ ಹೋಗೋ ಪ್ಲಾನೇ ಮಾಡಿರಲಿಲ್ಲ. ಆದರೂ ಮನಸ್ಸು ಮಾಡಿಬಿಟ್ಟೆ.
ಎಲ್ಲಿದೆ ಮೆಟಕ್ಯಾನಸ್?
ನಮ್ಮಲ್ಲೆಲ್ಲ ಬೆಟ್ಟಗಳ ಮೇಲಿಂದ ಧುಮ್ಮಿಕ್ಕೋ ಜಲಪಾತಗಳನ್ನು ನೋಡಿರುತ್ತೇವೆ. ಆದರೆ, ಬಂಡೆಗಳೊಳಗಿಂದ ಸ್ರವಿಸೋ ನೀರನ್ನು ನೋಡಿರೋದು ಅಪರೂಪ. ಮೆಕ್ಸಿಕೋದ ಸ್ಯಾಂಟಿಯಾಗೋ ಎಂಬ ಸ್ಥಳದಲ್ಲಿರುವ ಕೊಲ್ಲಾ ದೆ ಕಬಯ್ಯೋ ಎಂಬ ಜಲಪಾತದಿಂದ ಎರಡು ಗಂಟೆ ದೂರದಲ್ಲಿದೆ ಈ ಮೆಟಕ್ಯಾನಸ್. ಇಲ್ಲಿನ ಸುಣ್ಣದ ಕಲ್ಲುಗಳ ಗುಹೆಗಳು, ಬಂಡೆಗಳಿಂದ ಸದಾ ನೀರು ಜಿನುಗುತ್ತಿರುತ್ತದೆ. ಈ ಪರಿಯಲ್ಲಿ ಜಿನುಗೋ ನೀರು ಜಿನುಗೋ ಸ್ಥಳಗಳನ್ನೇ ಮೆಟಕ್ಯಾನಸ್ ಎನ್ನುತ್ತಾರೆ. ಹರಿವ ನೀರು ಜಲಪಾತಗಳಾಗಿ, ರಭಸದ ಧಾರೆಗಳಾಗಿ, ನೀರ ಗುಹೆಗಳಾಗಿ ಹರಿಯುತ್ತೆ. ರ್ಯಾ ಪಲಿಂಗ್ ಮೂಲಕ ಜಲಪಾತಗಳ ಕೆಳಗಿಳಿದು, ಕಗ್ಗತ್ತಲ ಗುಹೆಗಳ ಮೂಲಕ ಹರಿಯೋ ನೀರಿನಲ್ಲಿ ಈಜಿ ಆ ಗುಹೆಗಳ ದಾಟಿ, ಹದಿನೈದಡಿ ಎತ್ತರದಿಂದ ನೀರು ಧುಮುಕುವಲ್ಲಿ ನೀರಿನೊಟ್ಟಿಗೆ ಜಿಗಿದು, ಕೆಲವೆಡೆಯ ಬಂಡೆಗಳಲ್ಲಿ ನೀರೊಟ್ಟಿಗೆ ಜಾರುಬಂಡಿಯಾಗಿ ಜಾರಿ, ಈಜುತ್ತಾ ಎಂಟಹತ್ತು ಕಿ.ಮೀ. ದೂರ ಸಾಗೋದೇ ಇಲ್ಲಿನ ರೋಚಕ ಪಯಣ. ಈಜು, ಜಾರುವಿಕೆಗಿಂತ ಜಾಸ್ತಿ ರೋಮಾಂಚನ ಕೊಡೋದು ನೀರಿಗೆ ಧುಮುಕುವ ಜಾಗಗಳು. 25ಕ್ಕಿಂತ ಹೆಚ್ಚಿನ ಜಾಗಗಳಲ್ಲಿರುವ ಈ ಧುಮುಕೋ ಜಾಗಗಳಲ್ಲಿ ಅತ್ಯಂತ ಎತ್ತರದ್ದು 12 ಮೀಟರ್! ಇಲ್ಲಿನ ಪರಿಸರ, ನಿರ್ಮಲ ನೀಲಿ ನೀರು, ಹಕ್ಕಿಗಳ ಇಂಚರ, ಜಲಚರಗಳು ನಮ್ಮನ್ನು ಬೇರೆಯೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.
ನಾವು ಹೊರಟೇವ…
ಬೆಳಗ್ಗೆ ಸಿಕ್ಕ ಎರಡು ಬಾಳೆಹಣ್ಣು ಮತ್ತು ಒಂಚೂರು ಹಾಲು ಕುಡಿದು, ಗ್ರೂಪ್ನವರು ಕೊಟ್ಟ ಹೆಲ್ಮೆಟ್, ಕಾಲಿಂದ ಕುತ್ತಿಗೆಯವರೆಗೆ ಕವರ್ ಮಾಡುವ ನಿಯೋಫ್ರೀನ್ ಜಾಕೆಟ್ ಮತ್ತು ಲೈಫ್ ಜಾಕೆಟ್ ತೊಟ್ಟು, ನಮ್ಮ ಹೈಕಿಂಗ್ ಶುರುವಾಯ್ತು. ಸುಮಾರು ಒಂದೂವರೆ ತಾಸು ನಡೆದ ಬಳಿಕ ಮೊದಲ ಜಂಪಿಂಗ್ ಜಾಗ ಸಿಕ್ಕಿತು.
ಧೈರ್ಯಂ ಸರ್ವತ್ರ ಸಾಧನಂ!
ಇಲ್ಲಿಂದ ಕೆಳಗೆ ಹಾರಬೇಕು ಅಂತ ಹೇಳಿದ ಗೈಡ್, ನೀರಿಗೆ ಹೇಗೆ ಧುಮಕಬೇಕು, ಹೇಗೆ ಧುಮುಕಬಾರದು ಅನ್ನೋದನ್ನ ಫಾರಿನ್ ಭಾಷೆ ಸ್ಪಾನಿಷ್ನಲ್ಲಿ, ಸಂಜ್ಞೆಗಳಲ್ಲಿ ವಿವರಿಸುತ್ತಿದ್ದ. ನನ್ನ ಎದುರಿಗೆ ಒಂದು ಹತ್ತು ಜನ ನೀರಿಗೆ ಧುಮುಕಿದ ಮೇಲೆ ನನಗೂ ಸ್ವಲ್ಪ ಧೈರ್ಯ ಬಂತು. ನೇರವಾಗಿ ಹಾರಬೇಕು, ಹೇಗೇ ಧುಮುಕಿದರೂ ಲೈಫ್ ಜಾಕೆಟ್ ಇರೋದ್ರಿಂದ ಏನೂ ಆಗೋಲ್ಲ ಅನ್ನೋ ಧೈರ್ಯ ಮೊದಲ ಜಿಗಿತದಿಂದ ಬಂತು. ಅನಂತರದ ಜಿಗಿತಗಳಲ್ಲಿ ಕಾಲು ನೀರಿಗೆ ಕೆಳಗಿಳಿಸೋ ಬದಲು ಇಡೀ ದೇಹವನ್ನು ಒಟ್ಟಿಗೇ ಕೆಳಗಿಳಿಸಿ ಅಂಗಾತ ಮಲಗೋ ಪ್ರಯತ್ನ ಮಾಡಿ ಮುಖ, ಎದೆಗೆ ಪೆಟ್ಟೂ ತಿಂದೆ. ನೀರಿಗೆ ಬಿದ್ದ ಮೇಲೆ ಅಲ್ಲಿಂದ 20 ಮೀಟರ್ ಈಜಿಕೊಂಡು
ಮುಂದಿನ ಜಾಗಕ್ಕೆ ಹೋದೆ. ಅನಂತರ ಎರಡು ಜಲಪಾತಗಳಿಂದ ಕೆಳಗಿಳಿಯಬೇಕಿತ್ತು. ಮುಂಚೆಯೇ ರ್ಯಾಪಲಿಂಗ್ ಮಾಡಿ ಅನುಭವವಿದ್ದರೂ ಜಲಪಾತಗಳ ಪಕ್ಕದಿಂದ ರ್ಯಾಪಲಿಂಗ್ ಮಾಡೋದ್ರಲ್ಲಿರುವ ಥ್ರಿಲ್ಲೇ ಬೇರೆ.
12 ಮೀಟರ್ ಜಂಪ್!
ನಿಧಾನವಾಗಿ ಜಂಪಿಂಗಿನ ಜಾಗಗಳ ಎತ್ತರ ಹೆಚ್ಚು, ಕಮ್ಮಿಯಾಗುತ್ತಿತ್ತು. ಒಂದು ಕಡೆಯಲ್ಲಿ ನೇರವಾಗಿ ಧುಮುಕೋ ಬದಲು ಅಡ್ಡಲಾಗಿ ಬಿದ್ದು ಬಿದ್ದ ರಭಸಕ್ಕೆ ತುಟಿಗೆ ಸ್ವಲ್ಪ ಪೆಟ್ಟಾಯಿತು. ನೀರಿಗೆ ಬೀಳುತ್ತಾ, ಸೈನಿಕರ ಥರ ನೆಟ್ಟಗೆ ನಿಂತುಬಿಡು, ಏನೂ ಆಗೋಲ್ಲ ಅಂದ ಒಬ್ಬ ಗೆಳೆಯ. ಕೆಳಗೆ ನೋಡಿದಾಗ ಹೆದರಿಕೆಯಾದರೆ, ರಸ್ತೆಯ ಮೇಲೆ ನಡೀತಾ ಇದ್ದೀನಿ ಅಂತಂದುಕೋ ಎಂದ ಮತ್ತೂಬ್ಬ. ಅಂತೂ ಧೈರ್ಯ ಮಾಡಿದೆ. ಏನಾದರೂ ಆದರೆ, ಲೈಫ್ ಜಾಕೆಟ್ ಹೇಗಿದ್ರೂ ಮೇಲೆ ತಂದೇ ತರುತ್ತೆ. ಹಾಗಾಗಿ ಜಿಗಿಯುವಾಗ ಅಪ್ಪಿತಪ್ಪಿಯೂ ನನ್ನ ಎದೆ, ಮುಖಗಳು ಮುಂದಾಗಬಾರದು, ಅವು ನೇರವಾಗಿರಬೇಕು ಅನ್ನೋ ಎಚ್ಚರಿಕೆಯಿಂದ ಕೆಳ ಜಿಗಿದೆ. ಆರಾಮವಾಗಿ ನೀರು ತಲುಪಿದೆ !
ಅವರಿಗೆ ಮೀನು, ನಂಗೆ ನೀರೇ ಗತಿ!
ಮಧ್ಯೆ ಒಂದು ಕಡೆ ಊಟಕ್ಕೆ ನಿಂತೆವು. ಊಟ ಅಂದರೆ ಅಲ್ಲಿನವರೆಗೆ ಟೂನಾ ಎನ್ನುವ ಮೀನು. ಆದರೆ, ಮೀನನ್ನು ತಿನ್ನದ ನನಗೆ ಒಂದಿಷ್ಟು ಪ್ರೊಟೀನ್ ಬಾರ್ ತರುತ್ತೀನಿ ಅಂತ ಗೈಡ್ ಹೇಳಿದ್ದ. ಅದು ಸಿಗದ ಕಾರಣ, ನನಗೆ ನೀರೇ ಗತಿಯಾಯಿತು. ಈ ವಿರಾಮದ ಬಳಿಕವೂ ಜಾರುವಿಕೆ, ಜಂಪಿಂಗ್, ಈಜು ಸುಮಾರು ಒಂದೂವರೆ ತಾಸು ಮುಂದುವರಿದಿತ್ತು. ಸುಮಾರು ನಾಲ್ಕು ತಾಸುಗಳ ಅನಂತರ ನೀವಿನ್ನು ನಿಮ್ಮ ಲೈಫ್ ಜಾಕೆಟ್ ತೆಗೆಯಬಹುದು, ಇನ್ನೇನೂ ಈಜುವ ಪ್ರಸಂಗವಿಲ್ಲ ಅಂದ ಗೈಡು . ಈಜಾಡಿ ಸೋತು ಹೋಗಿದ್ದ ಕೈಗಳಿಗೆ ಖುಷಿಯಾದರೆ ಇನ್ನೂ ನಡೆಯಬೇಕಲ್ಲ ಎಂದು ಕಾಲುಗಳಿಗೆ ಬೇಸರವಾಗುತ್ತಿತ್ತು.
ಕತ್ತಲ ಗುಹೆಗಳ ನಡುವೆ…
12 ಮೀಟರ್ ಜಂಪ್ ಅನಂತರ ಎಲ್ಲ ಮುಗಿಯಿತು ಅಂತಂದು ಕೊಂಡಿದ್ದೆ. ಆದರೆ, ಅದಕ್ಕಿಂತ ಮುಂಚೆ ಒಂದು ಗುಹೆ ಸಿಕ್ಕಿತು. ರ್ಯಾಪಲಿಂಗ್ ಮಾಡಿ ಅದರ ಬುಡಕ್ಕೆ ಮುಟ್ಟಿದೆವು. ಅಲ್ಲಿಂದ ಮುಂದೆ ನಡೆದೋ, ಈಜಿಯೋ ಹೋಗಬೇಕೆಂದು ಕಾಯುತ್ತಿದ್ದ ನನಗೆ ಅಚ್ಚರಿ. ಅಲ್ಲಿಂದ ಜಾರಿ ಮುಂದೆ ಸಾಗಬೇಕಿತ್ತು. ಹಾಗೆ ಸಾಗುವ ಹೊತ್ತಿಗೆ ಮತ್ತೂಂದು ಅಚ್ಚರಿ. ಅಲ್ಲಿಂದ ಮುಂದೆ ಸಂಪೂರ್ಣ ಕತ್ತಲೆ. ಅದರಲ್ಲಿ ಈಜಿ ಮುಂದೆ ಹೋಗಬೇಕೆಂದು ಗೈಡ್ ಹೇಳುತ್ತಿದ್ದ. ಆದರೆ ಎಲ್ಲಿಗೆ? ಎಷ್ಟು ದೂರ ? ಕತ್ತಲ ಹಾದಿಯಲ್ಲಿ ಸಾಗೋ ನೀರು ಇನ್ನೆಲ್ಲೋ ಜಲಪಾತವಾಗಿ ಧುಮುಕಿಬಿಟ್ಟರೆ? ಸ್ವಲ್ಪ ದೂರದಲ್ಲಿ ಈ ನೀರ ಝರಿ ಗುಹೆಯಿಂದ ಹೊರಬರುತ್ತದೆ. ಅಲ್ಲಿಯವರೆಗೆ ಈಜಬೇಕಷ್ಟೆ ಎಂಬ ಸಮಾಧಾನವನ್ನು ಅಲ್ಲಿಗೆ ಬಂದಿದ್ದವರ ಮಾತುಕತೆಯಿಂದ ಅರಿತು, ಮುಂದಡಿಯಿಟ್ಟೆ. ಎರಡು ಮೂರು ನಿಮಿಷ ಕತ್ತಲೆಯಲ್ಲೇ ಈಜುತ್ತಾ ಸಾಗಿದ ಮೇಲೆ ಬೆಳಕಿನ ಕಿರಣಗಳು ಕಾಣಿಸಿದವು. ಅಬ್ಟಾ ಎಂದು ನಿಟ್ಟುಸಿರು ಬಿಟ್ಟು, ದೇವರಿಗೆ ಧನ್ಯವಾದ ಹೇಳಿದೆ.
ಪ್ರಶಸ್ತಿ ಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ