ಗುರುವನ್ನು ಮರೆಯದ ಸಂಸದ
ಪಾಲ್ತಾಡಿ ಆರ್ಎಸ್ಎಸ್ ಶಾಖೆಯ ಸ್ವಯಂ ಸೇವಕ
Team Udayavani, May 24, 2019, 6:10 AM IST
ಸವಣೂರು: ಮೂರನೇ ಬಾರಿಗೆ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲು ಪ್ರಾಥಮಿಕ ಶಿಕ್ಷಣ ವನ್ನು ಹುಟ್ಟೂರು ಪಾಲ್ತಾಡಿಯ ಕುಂಜಾಡಿ ಸಮೀಪದ ಮುಕ್ಕೂರು ಹಿ.ಪ್ರಾ. ಶಾಲೆಯಲ್ಲಿ ಪೂರೈಸಿದ್ದರು. ಅವರ ತಂದೆ ದಿ| ನಿರಂಜನ ಶೆಟ್ಟಿ, ತಾಯಿ ಸುಶೀಲಾವತಿ.
2ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕ ನಳಿನ್ ಅವರನ್ನು ಪಾಲ್ತಾಡಿಯ ಮಂಜುನಾಥನಗರದಲ್ಲಿ ನಡೆಯುತ್ತಿದ್ದ ಆರ್ಎಸ್ಎಸ್ನ ನಿತ್ಯ ಶಾಖೆಗೆ ಕರೆತಂದವರು ಸಂಘದ ಹಿರಿಯ ಕಾರ್ಯಕರ್ತ ಬಿ.ಕೆ. ರಮೇಶ್ ಅವರು.
ಬಿ.ಕೆ. ರಮೇಶ್ ಅವರು ಹೇಳುವಂತೆ ಬಾಲಕ ನಳಿನ್ ಪ್ರತಿದಿನ ತಪ್ಪದೇ ಶಾಖೆಗೆ ಹಾಜರಾ ಗುತ್ತಿ ದ್ದರಲ್ಲದೆ, ಸಂಘದ ವಿಚಾರ ಗಳಿಗೆ ಬಹುಬೇಗನೇ ಆಕರ್ಷಿತ ರಾಗಿ ಮುಂದೆ ಆರ್ಎಸ್ಎಸ್ನ ಪ್ರಚಾರಕರಾಗಿ ಕೆಲಸ ಮಾಡಿದರು.
ರಾಜಕೀಯವಾಗಿ ಎತ್ತರಕ್ಕೆ ಏರಿದರೂ ಸಂಘದ ಸಂಸ್ಕಾರವನ್ನೂ ಇಂದಿಗೂ ಬಿಟ್ಟಿಲ್ಲ. ಇದು ಸಂತಸದ ವಿಚಾರ ಎನ್ನುತ್ತಾರೆ ಬಿ.ಕೆ. ರಮೇಶ್.
ಬಿ.ಕೆ. ರಮೇಶ್ ಅವರನ್ನು ಇಂದಿಗೂ ಗುರುಗಳೆಂದು ಗೌರವಿಸುವ ನಳಿನ್ ಕುಮಾರ್ ಊರಿಗೆ ಬಂದಾಗ ಅವರನ್ನು ಮಾತಾಡಿಸದೆ ಹೋಗುವುದು ಅಪರೂಪ. ನಳಿನ್ ಕುಮಾರ್ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರು ಎಂದು ಹೆಮ್ಮೆಯಿಂದ ಹೇಳುತ್ತಾರೆ ಬಿ.ಕೆ. ರಮೇಶ್.
ಗುರುವಿಗೆ ನಮನ
ತನ್ನ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಬೆಳವಣಿಗೆಯ ಮೂಲ ಬೇರು ಆಗಿರುವ ಗುರು ರಮೇಶ್ ಅವರನ್ನು ಗೌರವದಿಂದಲೇ ಕಾಣುವ ನಳಿನ್ ಅನುದಾನ ಬಳಕೆಯಲ್ಲಿ ನಂ. 1 ಸಂಸದನಾಗಿ ಹೊರಹೊಮ್ಮಿದಾಗ ಮಂಗಳೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಿದ್ದರು.
3 ಸಲವೂ ಚುನಾವಣೆಯ ಪ್ರಚಾರ ಆರಂಭಿಸುವಾಗ ರಮೇಶ್ ಅವರ ಕೈಯಿಂದಲೇ ಪ್ರಚಾರ ಸಭೆಗೆ ಚಾಲನೆ ನೀಡಿದ್ದಾರೆ. ನಳಿನ್ ಪ್ರತೀ ವರ್ಷವೂ ತನ್ನೂರಿನ ಸಿದ್ಧಿವಿನಾಯಕ ಸೇವಾ ಸಂಘದ ವತಿಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
– ಪ್ರವೀಣ್ ಚೆನ್ನಾವರ