ಗಾಯಾಳು ಕಾಡಾನೆಗೆ ಮತ್ತೆ ತಿವಿದ ಮದ್ದಾನೆ
ಬಾಳುಗೋಡು: ಮೀಸಲು ಅರಣ್ಯದಲ್ಲಿ ಸಲಗಗಳ ಕಾಳಗ
Team Udayavani, May 13, 2019, 6:00 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಅರಣ್ಯ ಇಲಾಖೆ ವ್ಯಾಪ್ತಿಯ ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಬುಧವಾರ ಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿರುವ ಸಲಗಕ್ಕೆ ಮತ್ತೂಂದು ಕಾಡಾನೆ ತಿವಿದು ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ. ಸಲಗಗಳ ನಡುವಿನ ಕಾಳಗದಲ್ಲಿ ಗಾಯಗೊಂಡಿದ್ದ ಈ ಆನೆಗೆ ಮತ್ತಷ್ಟು ಗಾಯಗಳಾಗಿವೆ.
ಬಾಳುಗೋಡು ಮೀಸಲು ಅರಣ್ಯದಲ್ಲಿ ಮುಂಗಾಲಿಗೆ ಗಾಯಗಳಾಗಿದ್ದ ಸ್ಥಿತಿಯಲ್ಲಿ ಕಾಡಾನೆಯೊಂದು ಐದು ದಿನಗಳ ಹಿಂದೆ ಪತ್ತೆಯಾಗಿತ್ತು. ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ದೊರಕಿತ್ತು. ಅರಣ್ಯಾಧಿಕಾರಿಗಳು ನಾಗರಹೊಳೆಯ ವನ್ಯಜೀವಿ ವಿಭಾಗದ ವೈದ್ಯರನ್ನು ಕರೆಸಿ ಮೇ 10ರಂದು ಕಾಡಿನಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಆನೆ ಚೇತರಿಸಿಕೊಳ್ಳುತ್ತಿರುವ ಹಂತದಲ್ಲೆ ಶನಿವಾರ ನಡುರಾತ್ರಿಯಿಂದ ರವಿವಾರ ಬೆಳಗ್ಗಿನ ಅವಧಿಯಲ್ಲಿ ಮತ್ತೂಂದು ಕಾಡಾನೆ ಬಂದು ಕಾಳಗಕ್ಕೆ ಇಳಿದಿದೆ. ಆನೆಗಳ ನಡುವೆ ರಾತ್ರಿ ಕಾದಾಟ ನಡೆಯುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಬೆಳಗ್ಗೆ ಸ್ಥಳೀಯರು ಕಾಡಿಗೆ ತೆರಳಿ ನೋಡಿದಾಗಲೂ ಆನೆಗಳ ಮಧ್ಯೆ ಘರ್ಷಣೆ ನಡೆಯುತ್ತಿತ್ತು. ಗಾಯಾಳು ಆನೆಗೆ ಮತ್ತೂಂದು ಬೃಹತ್ ಗಾತ್ರದ ದಂತವಿರುವ ಆನೆ ತಿವಿಯುತ್ತಿತ್ತು.
ಸ್ಥಳೀಯರು ಶಬ್ದ ಮಾಡಿ, ಮದ್ದಾನೆಯನ್ನು ಓಡಿಸಿ, ಗಾಯ ಗೊಂಡಿರುವ ಆನೆಯನ್ನು ರಕ್ಷಿಸಲು ಪ್ರಯತ್ನಿಸಿದರು. ಆಗ ಸಿಟ್ಟಿಗೆದ್ದ ಆನೆ ಸ್ಥಳೀಯರನ್ನೇ ಬೆನ್ನಟ್ಟಿ ಬಂದಿದೆ. ಗಾಯಗೊಂಡ ಆನೆಯ ದೇಹದಿಂದ ಸಾಕಷ್ಟು ರಕ್ತ ಸುರಿದಿದೆ. ದಾಳಿಯಿಂದ ಅದು ಬೆದರಿದ್ದು, ಮತ್ತೆ ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿದೆ. ಜನವಸತಿ ಪ್ರದೇಶದತ್ತ ಬರಲು ಹವಣಿಸುತ್ತಿದೆ. ದಾಳಿ ಹಾಗೂ ಅನಾರೋಗ್ಯದಿಂದ ತೀವ್ರವಾಗಿ ಬಳಲಿಸುವ ಆನೆಯ ಸ್ವರ ಕ್ಷೀಣಿಸಿದೆ. ಸ್ಥಳೀಯರು ಮೂರು ದಿನಗಳಿಂದ ಅದಕ್ಕೆ ಬೈನೆ ಮರದ ಮೇವು ಹಾಗೂ ನೀರು ನೀಡಿ, ಪ್ರೀತಿ ತೋರಿಸುತ್ತಿದ್ದಾರೆ. ಕೆಎಸ್ಎಸ್ ಕಾಲೇಜಿನ ವಿದ್ಯಾರ್ಥಿ ದೀಪಕ್ ಆನೆಯ ಆರೈಕೆಯಲ್ಲಿ ತೊಡಗಿದ್ದು, ಸ್ಥಳೀಯರ ಶ್ಲಾಘನೆಗೆ ಪಾತ್ರವಾಗಿದೆ.
ಆನೆಯನ್ನು ರಕ್ಷಿಸಿ ಸ್ಥಳಾಂತರಿಸಿ
ಚಿಕಿತ್ಸೆ ಪಡೆದು ಚೇತರಿಕೆ ಹಂತದಲ್ಲಿರುವ ಕಾಡಾನೆ ಮತ್ತೂಂದು ದಾಳಿಯಿಂದ ಗಾಯಗೊಂಡಿದೆ. ಅದರ ಮೇಲೆ ಇನ್ನಷ್ಟು ದಾಳಿ ನಡೆಯುವ ಸಾಧ್ಯತೆ ಇದೆ. ಜೀವ ಭಯದಿಂದ ಆನೆ ಜನವಸತಿ ಪ್ರದೇಶದತ್ತ ಬರುತ್ತಿದೆ. ಕಾಡಿಗೆ ತೆರಳಲು ಹಿಂದೇಟು ಹಾಕುತ್ತಿದೆ. ಹೀಗಾಗಿ, ಆನೆಯನ್ನು ಸ್ಥಳಾಂತರಿಸಿ, ಚಿಕಿತ್ಸೆ ಮುಂದುವರಿಸುವುದು ಸೂಕ್ತ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ಬೀಡಿಬಿಟ್ಟಿದ್ದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಶನಿವಾರ ಬಾಳುಗೋಡು ನಿವಾಸಿ ಕೆ.ವಿ. ಸುಧೀರ್ ಅವರ ಕೃಷಿ ತೋಟಕ್ಕೆ ಆನೆ ಧಾಳಿ ನಡೆಸಿದೆ. ಇದೇ ಪರಿಸರದ ಕಾಡಿನಲ್ಲಿ ಐದು ಆನೆಗಳಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಸುಬ್ರಹ್ಮಣ್ಯ ಸಮೀಪದ ದೇವರಗದ್ದೆ, ಮಾನಾಡು ಪರಿಸರದಲ್ಲಿ ಶನಿವಾರ ರಾತ್ರಿ ಸ್ಥಳೀಯರಿಗೆ ಆನೆಗಳು ಕಾಣಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ