ರಾಷ್ಟ್ರೀಯ ಹೆದ್ದಾರಿಗೆ ಸಿಗಲಿದೆ ಬೆಳಕು!
ಕಾಮಗಾರಿ ಕೆಲವು ದೂರದ ವರೆಗೆ ಕತ್ತಲ ಪಯಣದಿಂದ ಮುಕ್ತಿ ನೀಡಲಿದೆ.
Team Udayavani, Dec 7, 2022, 6:15 PM IST
ಮಹಾನಗರ: ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್ನಲ್ಲಿ ಡಿವೈಡರ್ ಮಧ್ಯೆ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಪಾಲಿಕೆ ವತಿಯಿಂದ ಕೆಲಸ ನಡೆಯುತ್ತಿದ್ದು, ಪಡೀಲ್ನಿಂದ ಕಣ್ಣೂರು ವರೆಗೆ ಹೆದ್ದಾರಿ ಬೆಳಕು ಕಾಣಲಿದೆ.
ಆರಂಭದಲ್ಲಿ ದ್ವಿಪಥವಾಗಿದ್ದ ಹೆದ್ದಾರಿ ಚತುಷ್ಪಥಕ್ಕೆ ಬದಲಾಗಿ ದಶಕಗಳೇ ಕಳೆದರೂ ಬೀದಿದೀಪಗಳನ್ನು ಅಳವಡಿಸದ ಕಾರಣ ರಾತ್ರಿ ವೇಳೆ ಕತ್ತಲಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಈಗಲೂ ಇದೆ. ಇದರಿಂದ ರಾತ್ರಿ ವೇಳೆ ಅಪಘಾತ, ಅವಘಡಗಳಿಗೂ ಸಾಮಾನ್ಯವಾಗಿದೆ. ಹೆದ್ದಾರಿ ಇಲಾಖೆಗೆ ಈ ಕುರಿತು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.
ಇದೀಗ ಮಹಾನಗರ ಪಾಲಿಕೆ ವತಿಯಿಂದ 15ನೇ ಹಣಕಾಸು ನಿಧಿಯಲ್ಲಿ ಸುಮಾರು 16.37 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಪಡೀಲ್ನ ಅಂಡರ್ಪಾಸ್ ಬಳಿಯಿಂದ ಕಾಮಗಾರಿ ಆರಂಭವಾಗಿದೆ. ಕಂಬಗಳನ್ನು ಅಳವಡಿಸಲು ಕಣ್ಣೂರು ವರೆಗೆ 32 ದೀಪಕಂಬಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಕೇಬಲ್ ಜೋಡಿಸುವ ಕೆಲಸ ಮುಂದುವರಿದಿದೆ. ಒಂದೇ ಹಂತದಲ್ಲಿ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತಾದರೂ, ಮೊತ್ತ ಕಡಿಮೆಯಾದ ಹಿನ್ನೆಲೆಯಲ್ಲಿ, ಎರಡನೇ ಹಂತದಲ್ಲಿ ಕಾರ್ಪೋರೇಷನ್ ವ್ಯಾಪ್ತಿ ಅಂತ್ಯವಾಗುವ ವರೆಗೆ (ಕಣ್ಣೂರು ಮಸೀದಿ ವರೆಗೆ) ಕಾಮಗಾರಿ ನಡೆಯಲಿದೆ ಎಂದು ಪಾಲಿಕೆ ಎಂಜಿನಿಯರ್ ಮೊಹಮ್ಮದ್ ಶಕೀರ್ ತಿಳಿಸಿದ್ದಾರೆ.
ನಂತೂರಿನಿಂದ ಆರಂಭವಾಗುವ ಹೆದ್ದಾರಿಯಲ್ಲಿ ಸದ್ಯ ಪಡೀಲ್ ರೈಲ್ವೇ ಕೆಳಸೇತುವೆ ವರೆಗೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಕೆಲವು ಜಂಕ್ಷನ್ ಗಳಲ್ಲಿ ಹೈಮಾಸ್ಟ್ ದೀಪಗಳನ್ನು ಸ್ಥಳೀಯವಾಗಿ ಅಳವಡಿಸಿದ್ದಾರೆ. ಇನ್ನು ಪಾದಚಾರಿಗಳಿಗಾಗಿ ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದರೂ, ಅವುಗಳೂ ಉರಿಯುವುದು ಅಷ್ಟಕ್ಕಷ್ಟೇ. ವಾಹನ ಚಾಲಕರಿಗೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸದ್ಯ ನಡೆಯುತ್ತಿರುವ ಕಾಮಗಾರಿ ಕೆಲವು ದೂರದ ವರೆಗೆ ಕತ್ತಲ ಪಯಣದಿಂದ ಮುಕ್ತಿ ನೀಡಲಿದೆ.
ಕಂಬ ಹಾಕಿದರೂ ಲೈಟ್ ಉರಿಯದು?
ಇನ್ನೊಂದು 10-15 ದಿನದಲ್ಲಿ ಕಂಬವೂ ಅಳವಡಿಸುವ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಲೈಟ್ ಉರಿಯುವುದು ಮಾತ್ರ ಸದ್ಯ ಅನುಮಾನವಾಗಿದೆ. ಕಾರಣ, ಮಂಗಳೂರು ನಗರ ವ್ಯಾಪ್ತಿಗೆ ಎಲ್ಇಡಿ ದೀಪಗಳನ್ನು ಅಳವಡಿಸಲು ಸ್ಮಾರ್ಟ್ ಸಿಟಿಯಿಂದ ಟೆಂಡರ್ ಆಗಿದೆ. ಪರಿಣಾಮವಾಗಿ ಮಹಾನಗರ ಪಾಲಿಕೆಗೆ ದೀಪಗಳನ್ನು ಅಳವಡಿಸಲು ಅವಕಾಶವಿಲ್ಲ. ಈ ಕಾಮಗಾರಿ ಟೆಂಡರ್ನಲ್ಲಿಯೂ ದೀಪ ಅಳವಡಿಸುವ ಕುರಿತು ಉಲ್ಲೇಖವಿಲ್ಲ. ಇನ್ನು ಸ್ಮಾರ್ಟ್ಸಿಟಿಯಿಂದ ಟೆಂಡರ್ ಪಡೆದಿರುವ ಏಜೆನ್ಸಿ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ದೀಪ ಯಾವಾಗ ಉರಿಯಲಿದೆ ಎಂದು ಕಾದು ನೋಡಬೇಕಿದೆ.
ಬಹುಬೇಡಿಕೆಯ ಕಾಮಗಾರಿ
ಪಡೀಲ್ ಭಾಗದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಹೆದ್ದಾರಿ ಮಧ್ಯದಲ್ಲಿ ಲೈಟ್ ಅಳವಡಿಸುವ ಕೆಲಸ ಆರಂಭವಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆದು ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ಶೀಘ್ರದಲ್ಲಿ ಹೆದ್ದಾರಿಗೆ ಬೆಳಕು ಸಿಗಲಿದೆ.
-ಜಯಾನಂದ ಅಂಚನ್, ಮೇಯರ್
*ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ