ಪ್ರತೀ ಠಾಣೆಯಲ್ಲೂ ಎಸ್ಜೆಪಿಯು ಪುನಶ್ಚೇತನ
"ಮಕ್ಕಳ ಸ್ನೇಹಿ ಪೊಲೀಸ್ ಠಾಣೆ' ಪರಿಕಲ್ಪನೆಗೆ ಕಾಯಕಲ್ಪ
Team Udayavani, Oct 16, 2021, 6:50 AM IST
ಮಂಗಳೂರು: ಮಕ್ಕಳಿಗೆ ಸಂಬಂಧಿಸಿದ ಪ್ರಕರಣ ಗಳನ್ನು ಮಕ್ಕಳ ಸ್ನೇಹಿಯಾಗಿ ನಿಭಾಯಿಸಲು ಪ್ರತೀ ಪೊಲೀಸ್ ಠಾಣೆಯಲ್ಲೂ “ಎಸ್ಜೆಪಿಯು’ (ಸ್ಪೆಶಲ್ ಜುವೆನೈಲ್ ಪೊಲೀಸ್ ಯೂನಿಟ್-ಮಕ್ಕಳ ವಿಶೇಷ ಪೊಲೀಸ್ ಘಟಕ) ಇರಬೇಕೆಂಬ ನಿಯಮ ವನ್ನು ಪರಿಪೂರ್ಣ ರೀತಿಯಲ್ಲಿ ಅನುಷ್ಠಾನ ಗೊಳಿಸಲು ಇಲಾಖೆ ಮುಂದಾಗಿದೆ.
ಮಕ್ಕಳಿಗೆ ಸಂಬಂಧಿಸಿದ ಅಪರಾಧ ಗಳನ್ನು ಬಾಲನ್ಯಾಯ ಕಾಯಿದೆಯ ಮಾರ್ಗಸೂಚಿಯಂತೆ ನಿಭಾಯಿಸಬೇಕಾಗಿದ್ದು, ಇದಕ್ಕಾಗಿ ಎಸ್ಜೆಪಿಯು ಕಡ್ಡಾಯಗೊಳಿಸಲಾಗಿತ್ತು. ಆದರೆ ಪೊಲೀಸ್ ಇಲಾಖೆಯ ದಾಖಲೆಗಳಲ್ಲಿ ಇದರ ಬಗ್ಗೆ ಉಲ್ಲೇಖ ಇದೆಯೇ ವಿನಾ ವಾಸ್ತವದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.
ಜತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವುಗಳ ನಿರ್ವಹಣೆಗೆ ಪರಿಪೂರ್ಣವಾದ ಎಸ್ಜೆಪಿಯು ಅಗತ್ಯ ಎಂಬ ಹಿನ್ನೆಲೆಯಲ್ಲಿ ಇಲಾಖೆ ಇದಕ್ಕೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ವಿಶೇಷ ಘಟಕ ಹೀಗಿರಬೇಕು
ವಿಶೇಷ ಘಟಕವು ಓರ್ವ ಎಎಸ್ಐ, ಮಹಿಳಾ ಹೆಡ್ಕಾನ್ಸ್ಟೆಬಲ್/ಮಹಿಳಾ ಕಾನ್ಸ್ಟೆಬಲ್ಗಳನ್ನು ಒಳಗೊಂಡಿರುತ್ತದೆ. ಮಕ್ಕಳು ಭಾಗಿಯಾಗಿರುವ (ಸಂತ್ರಸ್ತರು/ ಆರೋಪಿಗಳು) ಪ್ರಕರಣಗಳನ್ನು ಈ ಘಟಕವೇ ನಿರ್ವಹಿಸಬೇಕು. ಘಟಕದಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿ (ಸಿಡಬ್ಲ್ಯೂಒ) ಇರಬೇಕು. ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಸಂಸ್ಥೆಗಳ ಜತೆಗೆ ಸಮನ್ವಯ ಸಾಧಿಸುವುದು ಕೂಡ ಈ ಘಟಕದ ಜವಾಬ್ದಾರಿ.
ಚಿಲ್ಡ್ರನ್ ಕಾರ್ನರ್
ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಸಂದರ್ಭ ಪೊಲೀಸರು (ಎಸ್ಜೆಪಿಇಯು) ಮಕ್ಕಳ ವಿಚಾರಣೆಗಾಗಿ ಅವರ ಮನೆ, ಆಸ್ಪತ್ರೆಗೆ ತೆರಳುವಾಗ ಸಮವಸ್ತ್ರ ಧರಿಸಿರಬಾರದು. ಮಾತ್ರವಲ್ಲದೆ ಮಕ್ಕಳು ಠಾಣೆಗೆ ಬಂದಾಗ ಅವರನ್ನು ವಿಚಾ ರಿ ಸಲು ಪ್ರತ್ಯೇಕವಾದ ಚಿಲ್ಡ್ರನ್ ಕಾರ್ನರ್ ಇರಬೇಕು ಎಂಬ ನಿಯಮವೂ ಇದೆ.
ಇದನ್ನೂ ಓದಿ:ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಜೆಜೆಎ ಪ್ರಕಾರವೇ ನಿರ್ವಹಣೆ
“ಪೊಲೀಸರು ಸಾಮಾನ್ಯವಾಗಿ ಐಪಿಸಿ, ಸಿಆರ್ಪಿಸಿ ಪ್ರಕಾರ ಪ್ರಕರಣಗಳನ್ನು ನಿಭಾಯಿಸುತ್ತಾರೆ. ಆದರೆ ಮಕ್ಕಳಿಗೆ ಸಂಬಂಧಿಸಿ ಜೆಜೆಎ (ಬಾಲನ್ಯಾಯ ಕಾಯಿದೆ) ಇದೆ. ಅದರಂತೆಯೇ ಮಕ್ಕಳ ಪ್ರಕರಣ ನಿರ್ವಹಿಸಬೇಕು. ಇದು ಸಮ ರ್ಪಕವಾಗಿ ಅನುಷ್ಠಾನವಾಗಬೇಕಾದರೆ ಎಸ್ಜೆಪಿಯು ಪರಿಪೂರ್ಣವಾಗಿರಬೇಕು. ಇಲ್ಲವಾದರೆ ಪೊಲೀಸ್ ಠಾಣೆಗಳು, ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ನಿರ್ವಹಣೆ ಮಕ್ಕಳ ಸ್ನೇಹಿ ಯಾಗಿರುವುದಿಲ್ಲ’ ಎನ್ನುತ್ತಾರೆ ಮಕ್ಕಳ ರಕ್ಷಣೆ, ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳ ಪ್ರಮುಖರು.
150ಕ್ಕೂ ಅಧಿಕ ಪ್ರಕರಣ
ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಮಕ್ಕಳಿಗೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿ ನವರು) ಸಂಬಂಧಿಸಿದ ದೌರ್ಜನ್ಯ, ಅಪರಾಧಕ್ಕೆ ಸಂಬಂಧಿಸಿ 150ಕ್ಕೂ ಅಧಿಕ ಪ್ರಕರಣ ನಿಭಾಯಿಸಲಾಗಿದೆ. 16ಕ್ಕೂ ಅಧಿಕ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. 12ಕ್ಕೂ ಅಧಿಕ ಮಕ್ಕಳಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ.
ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಜಾಗೃತಿ ಹೆಚ್ಚಿದೆ. ಹಾಗಾಗಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಸ್ಜೆಪಿಯುವನ್ನು ಕೂಡ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.
-ಡಾ| ಗಾನಾ ಪಿ. ಕುಮಾರ್, ಸೀನಿಯರ್ ಚೈಲ್ಡ್ ವೆಲ್ಫೇರ್ ಆಫೀಸರ್,
ದ.ಕ., ಡಿಎಸ್ಪಿ ಪುತ್ತೂರು
ಉಡುಪಿ ಜಿಲ್ಲೆಯ
ಪೊಲೀಸ್ ಠಾಣೆಗಳಲ್ಲಿಯೂ ಎಸ್ಜೆಪಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಯಮಿತವಾಗಿ ಸಭೆ ನಡೆಸಿ ಸಲಹೆ-ಸೂಚನೆ ಗಳನ್ನು ನೀಡಲಾಗುತ್ತಿದೆ.
–ಎನ್. ವಿಷ್ಣುವರ್ಧನ್,ಎಸ್ಪಿ, ಉಡುಪಿ
- ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಮಾ. 20 – 24 ಕೆಲವೆಡೆ ಸಾಮಾನ್ಯ ಮಳೆ ಸಾಧ್ಯತೆ
Lok Sabha Election 2024: ಗಡಿ ಭಾಗಗಳಲ್ಲಿ ತಪಾಸಣೆ ಬಿರುಸು
ಜೆಡಿಎಸ್ನಲ್ಲಿದ್ದು ಬಿಜೆಪಿಗೆ ಬೆಂಬಲ, ಸ್ವತಂತ್ರ ಸ್ಪರ್ಧೆ ಶೀಘ್ರ ನಿರ್ಧಾರ: ಮೊದಿನ್ ಬಾವಾ
ಕಲಾವಿದರ ಮೇಲೆ ದಬ್ಬಾಳಿಕೆಗೆ ಖಂಡನೆ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ
“ಬಿಜೆಪಿಯಲ್ಲಿರುವವರ ಮೇಲೆ ಐಟಿ ದಾಳಿ ಯಾಕಿಲ್ಲ’: ನಟ ಪ್ರಕಾಶ್ ರಾಜ್