ರೈಲಿನ ಸದ್ದಿಗೆ ಓಡಿದ ಕಾಡು ಕೋಣ ಮರಕ್ಕೆ ಢಿಕ್ಕಿ; ಸಾವು!
Team Udayavani, Jul 26, 2019, 5:14 AM IST
ವಿಟ್ಲ: ಮಾಣಿ ಗ್ರಾಮದ ಸಾಗು ಗಂಗೆಪಾಲುವಿನಲ್ಲಿ ರೈಲುಹಳಿ ದಾಟಲು ಹೊರಟ ಕಾಡು ಕೋಣವೊಂದು ರೈಲು ಬರುವ ಸದ್ದು ಕೇಳಿ ಹೆದರಿ ಓಡಿದಾಗ ಮರಕ್ಕೆ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.
ಸಂಜೆ ಸೊಪ್ಪು ತರಲೆಂದು ಗುಡ್ಡಕ್ಕೆ ತೆರಳಿದ ಸ್ಥಳೀಯರು ಸತ್ತುಬಿದ್ದಿರುವ ಕಾಡುಕೋಣ ಕಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಂಟ್ವಾಳ ಅರಣ್ಯ ಅಧಿಕಾರಿಗಳಾದ ಜಿತೇಶ್, ಯಶೋಧರ, ದಯಾನಂದ, ಕ್ಯಾತಲಿಂಗ, ಪ್ರವೀಣ್, ಯೋಗೀಶ್, ವಾಹನ ಚಾಲಕ ಜಯರಾಮ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು.
ಕತ್ತು ಮುರಿದು ಸಾವು
4 ವರ್ಷದ ಕೋಣ ಇದಾಗಿದ್ದು,ಢಿಕ್ಕಿಯ ರಭಸಕ್ಕೆ ಕತ್ತು ಮುರಿದು, ಕೊಂಬು ತುಂಡಾಗಿ ಸತ್ತಿದೆ ಎಂದು ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ದಹಿಸಿ, ಅವಶೇಷಗಳನ್ನು ಮಣ್ಣಿನಲ್ಲಿ ಹೂಳಲಾಯಿತು.