ನಗರದ ಮುಖ್ಯ ರಸ್ತೆಗಳಲ್ಲೇ ಗುಂಡಿಗಳಿವೆ..ಎಚ್ಚರ!
Team Udayavani, Jul 4, 2017, 3:50 AM IST
ಮಹಾನಗರ: ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ದಿನಕ್ಕೊಂದಷ್ಟು ಮಂದಿ ಬೀಳುವುದು, ದ್ವಿಚಕ್ರ ವಾಹನಗಳು ಸ್ಕಿಡ್ ಆಗುವುದು ಇಲ್ಲಿ ಸಾಮಾನ್ಯ. ಜತೆಗೆ ಹೊಂಡಗುಂಡಿಗಳಲ್ಲೇ ಪಯಣಿಸಬೇಕಾದ ಅನಿವಾರ್ಯತೆ ನಾಗರಿಕರಿಗೆ. ಇದು ಯಾವುದೋ ಒಳ ರಸ್ತೆಗಳ ದುಃಸ್ಥಿತಿಯಲ್ಲ. ನಗರದ ಮುಖ್ಯ ರಸ್ತೆಗಳೇ ಹೀಗೆ.
ವಿವಿಧ ಮುಖ್ಯರಸ್ತೆಗಳ ತುಂಬೆಲ್ಲಾ ಹೊಂಡಗುಂಡಿಗಳೇ ತುಂಬಿಕೊಂಡಿವೆ. ಕೆಲವೆಡೆ ಇಂಟರ್ಲಾಕ್, ಕಾಂಕ್ರೀಟ್ ರಸ್ತೆಗಳೇ ಕುಸಿದಿದ್ದರೆ, ಇನ್ನು ಕೆಲವೆಡೆ ಮ್ಯಾನ್ಹೋಲ್ಗಳೂ ರಸ್ತೆಯ ಸಮತಟ್ಟಿನಿಂದ ಕೆಳಭಾಗಕ್ಕೆ ಕುಸಿದಿವೆ. ಇದರಿಂದ ಮಳೆಗಾಲದಲ್ಲಿ ಇಲ್ಲಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಸವಾರರು ಬೀಳುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಬೀಳುವುದು ನಿರಂತರ
ಬಂಟ್ಸ್ಹಾಸ್ಟೆಲ್ ಸರ್ಕಲ್ನಿಂದ ಪಿವಿಎಸ್ ಕಡೆಗೆ ಬರುವಾಗ ಕರಂಗಲ್ಪಾಡಿ ರಸ್ತೆಯ ಮುಂಭಾಗದಲ್ಲಿ ರಸ್ತೆಯ ಎಡಬದಿ ಸಂಪೂರ್ಣ ಹಾಳಾಗಿದೆ. ಇಲ್ಲಿ ಮ್ಯಾನ್ಹೋಲ್ ಇರುವಲ್ಲೇ ರಸ್ತೆಯೂ ಕುಸಿದಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಮಳೆ ನೀರು ಹೊಂಡದ ಮೇಲೆ ತುಂಬಿಕೊಂಡಾಗ ಅದರ ಅರಿವಿಲ್ಲದೇ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಸರ್ಕಲ್ ಬಳಿಯ ತಿರುವಿನಲ್ಲಿಯೂ ಹೊಂಡ ಉಂಟಾಗಿದ್ದು, ವಾಹನ ಸವಾರರಿಗೆ ಸಮಸ್ಯೆ ಒಡ್ಡುತ್ತಿದೆ.
ಇಂಟರ್ಲಾಕ್ ರಸ್ತೆ ಕುಸಿತ
ಜಿಎಚ್ಎಸ್ ರಸ್ತೆಯಲ್ಲೂ ಇದೇ ಸಮಸ್ಯೆ ಯಿದ್ದು, ಉದ್ದಕ್ಕೆ ಹೊಂಡಗಳು ನಿರ್ಮಾಣ ವಾಗಿವೆ. ಮಿಲಾಗ್ರಿಸ್ನಿಂದ ಜ್ಯೋತಿಗೆ ಬರಲು ತಿರುವು ಪಡೆದು ಕೊಳ್ಳುವಲ್ಲೂ ಹೊಂಡಗಳಿವೆ. ಜ್ಯೋತಿ ಸರ್ಕಲ್ ಬಳಿ ಇಂಟರ್ಲಾಕ್ ರಸ್ತೆ ಕುಸಿದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಕುಸಿದ ಮ್ಯಾನ್ಹೋಲ್
ವಿವಿಧೆಡೆ ಮ್ಯಾನ್ಹೋಲ್ಗಳು ರಸ್ತೆಯ ಸಮವಾಗಿ ಉಳಿದುಕೊಳ್ಳದೇ ಸ್ವಲ್ಪ ಕೆಳಕ್ಕೆ ಕುಸಿದಿದೆ. ಇದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗುವ ಸಂಭವ ಹೆಚ್ಚಾಗಿದೆ. ಕುಸಿದ ಮ್ಯಾನ್ಹೋಲ್ಗಳ ಸುತ್ತಲೂ ಗುಂಡಿ ನಿರ್ಮಾಣವಾಗಿ ಮಳೆ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.