ಮನೆಗಳಿಗೆ ರಸ್ತೆಯಿಲ್ಲ, ಇರುವ ಕಾಲುದಾರಿಯೂ ಸರಿಯಿಲ್ಲ
Team Udayavani, Jul 16, 2018, 10:02 AM IST
ವಿಟ್ಲ : ಇಲ್ಲಿ ಮೊಬೈಲ್ ಸಿಗ್ನಲ್ ಇದೆ. ಡಾಟಾ ಸಿಗುತ್ತದೆ. ಆಧುನಿಕ ತಂತ್ರಜ್ಞಾನ ತಲುಪಿದೆ. ಆದರೆ ಮೂಲ ಆವಶ್ಯಕತೆ ಇನ್ನೂ ತಲುಪಿಲ್ಲ. ರಸ್ತೆಯೂ ಇಲ್ಲದೆ, ಕಾಲುದಾರಿಯೂ ಸಮರ್ಪಕವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ಪಾಡು ಹೇಳತೀರದು. ನಡೆದಾಡಲಾಗದ ಅಥವಾ ಅನಾರೋಗ್ಯ ಪೀಡಿತ ವೃದ್ಧರನ್ನು ಹೊತ್ತು ಕೊಂಡೇ ಸಾಗುವ ಇಲ್ಲಿನ ಮಂದಿ, ಆವಶ್ಯಕ ಸಾಮಗ್ರಿಗಳನ್ನೂ ಹೊತ್ತು ಸರ್ಕಸ್ ಮಾಡುತ್ತಲೇ ಸಾಗಬೇಕಾಗಿದೆ. ಈ ಅಪಾಯಕಾರಿ ಕಾಲು ದಾರಿಯಲ್ಲಿ ಸ್ಥಳೀಯರು ಜೀವ ಭಯದಿಂದಲೇ ನಡೆದಾಡುತ್ತಿದ್ದಾರೆ.
ಪಡ್ಪು ಕಾಲು ದಾರಿ
ಇದು ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿಂದ ಪಡ್ಪು ಮೂಲಕ ಸಾಲೆತ್ತೂರು ಗ್ರಾಮದ ಮಲಾರು ಎಂಬಲ್ಲಿಗೆ ತೆರಳುವ ಕಾಲುದಾರಿಯ ಕಥೆ. ಸುಮಾರು ಒಂದೂವರೆ ಕಿ.ಮೀ. ದೂರದ ಪಂ. ದಾರಿ. ಮಳೆಗಾಲದಲ್ಲಿ ಈ ಕಾಲುದಾರಿ ಬಳಕೆ ಭಾರೀ ಕಷ್ಟ. ಪಕ್ಕದ ಭೂಮಿಯೂ ಕುಸಿಯುತ್ತಿದೆ. ಅದಕ್ಕಾಗಿ ಅಡಿಕೆ ಮರ ಹಾಕಿ ಕುಸಿಯದಂತೆ ತಡೆ ಒಡ್ಡಲಾಗಿದೆ. ಇದೇ ಕಾಲುದಾರಿಯಲ್ಲಿ ಚಿಕ್ಕ ತೋಡಿದೆ. ಅದಕ್ಕೆ 10 ವರ್ಷಗಳ ಹಿಂದೆ ಕಾಲುಸಂಕ ಹಾಕಲಾ ಗಿದೆ. ಆನೆಕಲ್ಲು ನದಿಯಲ್ಲಿ ನೀರು ತುಂಬಿದರೆ ತೋಡು ತುಂಬಿ ಕಾಲು ಸಂಕ ನಿಷ್ಪ್ರ ಯೋಜಕವಾಗುತ್ತದೆ.
ಅಣೆಕಟ್ಟೆ ಸಮಸ್ಯೆ
ಕೇರಳ ಸರಕಾರ ಕೇರಳದ ಭಾಗದಲ್ಲಿ ಈ ನದಿಗೆ ಬೃಹತ್ ಅಣೆಕಟ್ಟೆ ನಿರ್ಮಿಸಿದೆ. ಮಳೆಗಾಲದಲ್ಲಿ ನೀರಿನೊಂದಿಗೆ ತೇಲಿ ಬರುವ ಕಸ, ಗಿಡ, ಮರಗಳು ಈ ಅಣೆಕಟ್ಟೆಯಲ್ಲಿ ಸಿಲುಕಿ ನೀರಿನ ಮಟ್ಟ ಏರುತ್ತದೆ. ಹತ್ತಿರದ ಕೃಷಿಭೂಮಿಯೂ ಕೊಚ್ಚಿಕೊಂಡು ಹೋಗುತ್ತಿದೆ. ಜತೆಗೆ ಈ ಕಾಲುದಾರಿಯಲ್ಲಿ ನೀರು ಮೇಲೇರುತ್ತದೆ. ಆಗ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಾರೆ.
ವಿದ್ಯುತ್ ತಂತಿ ಜೋತಾಡುತ್ತಿದೆ
ಇವರಿಗೆ ವಿದ್ಯುತ್ ಇರುವುದೇ ಇಲ್ಲ. ವಿದ್ಯುತ್ ತಂತಿ ಜೋತಾಡುತ್ತಿದೆ. ಆ ಬಗ್ಗೆ ಇಲಾಖೆಗೆ ದೂರನ್ನು ನೀಡಿದರೂ ಪ್ರಯೋಜನವಿಲ್ಲ.
ಸಮಸ್ಯೆ ಪರಿಹರಿಸಬೇಕು
ಈ ಹತ್ತು ಕುಟುಂಬಗಳ ಗೋಳು ಇಂದು ನಿನ್ನೆಯದಲ್ಲ. ಚುನಾವಣೆ ಸಂದರ್ಭ ಇವರಿಗೆ ಭರವಸೆ, ಆಶ್ವಾಸನೆ ಸಿಕ್ಕಿದೆ. ಗೆದ್ದ ಬಳಿಕ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಆಮೇಲೆ ಮರೆತುಬಿಡುತ್ತಾರೆ. ನಾವು ಬಡವರು. ನಮಗೆ ಕೂಲಿ ಮಾಡಿ ಬದುಕು ಸಾಗಿಸಬೇಕು. ಜನಪ್ರತಿನಿಧಿಗಳ ಹಿಂದೆ ಓಡಾಡಿದರೆ ನಮ್ಮ ಸಂಸಾರದ ಹೊಟ್ಟೆ ತುಂಬುವುದಿಲ್ಲ. ಹಲವು ಬಾರಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೇವೆ. ಆದರೆ ಪರಿಹಾರವಾಗಿಲ್ಲ. ಶೀಘ್ರ ನಮ್ಮ ಸಂಕಷ್ಟ ಪರಿಹರಿಸಬೇಕು ಎಂದು ಈ ಕಾಲುದಾರಿ ಫಲಾನುಭವಿಗಳು ಆಗ್ರಹಿಸಿದ್ದಾರೆ.
ಹತ್ತು ಕುಟುಂಬಗಳಿಗೆ ಅನ್ಯ ಮಾರ್ಗವಿಲ್ಲ
ಈ ಕಾಲುದಾರಿಯನ್ನು ಹಿಂದೆ ಹಲವರು ಅವಲಂಬಿಸಿದ್ದರು. ಸುತ್ತಲೂ ರಸ್ತೆ ನಿರ್ಮಾಣವಾಗಿರುವುದರಿಂದ ಈಗ ಬೇರೆ ಮಾರ್ಗವಿಲ್ಲದೇ ಸಿಕ್ಕಿಬೀಳುವ ಕುಟುಂಬಗಳು 10. ಇವರಿಗೆ ರಸ್ತೆಯೂ ಇಲ್ಲ. ಇರುವ ಕಾಲುದಾರಿ ನಡೆದಾಡಲು ಅಯೋಗ್ಯವಾಗಿದೆ. ವೃದ್ಧರ ಆರೋಗ್ಯ ಕೆಟ್ಟರೆ ಯುವಕರು ಹೊತ್ತುಕೊಂಡು ರಸ್ತೆ ಬದಿಗೆ ಆಗಮಿಸುತ್ತಾರೆ. ಈ ಹತ್ತು ಕುಟುಂಬಗಳಿಗೆ ಅನ್ಯ ಮಾರ್ಗವಿಲ್ಲದೆ ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅನುದಾನ ಬೇಕು
ಹಲವು ಬಾರಿ ಸ್ಥಳಕ್ಕೆ ತೆರಳಿ ಚರ್ಚಿಸಿದ್ದೇವೆ. ಆನೆಕಲ್ಲು ನದಿಗೆ ಕೇರಳ ಸರಕಾರ ನಿರ್ಮಿಸಿದ ಅಣೆಕಟ್ಟೆಯಲ್ಲಿ ಕಸ ಸಿಕ್ಕಿ, ಸುತ್ತಮುತ್ತ ನೀರು ತುಂಬಿಕೊಳ್ಳುತ್ತದೆ. ಆಗ ಕಾಲುದಾರಿ ಬಳಕೆ ಕಷ್ಟ. ಕಾಲುದಾರಿಯ ಎರಡೂ ಬದಿಯಲ್ಲಿ ಅಡಿಕೆ ತೋಟಗಳಿವೆ. ಅಲ್ಲಿ ಕಾಲುದಾರಿಗೆ 3 ಅಡಿ ಜಾಗವೂ ಸಿಗುತ್ತಿಲ್ಲ. ಸಾಕಷ್ಟು ಜಾಗ ಸಿಕ್ಕಿದಲ್ಲಿ ಕಾಲುದಾರಿಗೆ ಕಾಂಕ್ರೀಟ್ ಹಾಕಿಸಿಕೊಡಬಹುದಿತ್ತು. ಆದರೆ ಪಂ. ವತಿಯಿಂದ 50ರಿಂದ 60 ಸಾವಿರ ರೂ. ಅನುದಾನ ಬಿಡುಗಡೆ ಮಾಡಿ, ಆ ಕಾಲುದಾರಿಯನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.
- ಬೇಬಿ ಆರ್. ಶೆಟ್ಟಿ ಅಧ್ಯಕ್ಷರು, ಕರೋಪಾಡಿ ಗ್ರಾ.ಪಂ.
ಉದಯಶಂಕರ್ ನೀರ್ಪಾಜೆ