ಅಂಧರಿಗೆ ನೆರವಾಗುತ್ತದೆ ಈ ಹೊಸ ಕನ್ನಡಕ
Team Udayavani, Aug 4, 2018, 12:17 PM IST
ಮಂಗಳೂರು: ಅಂಧ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಹ್ಯಾದ್ರಿ ಇನ್ನೋವೇಶನ್ ಹಬ್ ಪ್ರಾಯೋಜಿತ ಆರ್ಡಿಎಲ್ ಟೆಕ್ನಾಲಜೀಸ್ ತಂತ್ರಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಸಿದ್ಧಗೊಂಡಿರುವ ವಿ.ಎಲ್. ಗ್ಲಾಸ್ನ ಕಾರ್ಯ ನಿರ್ವಹಣೆ ಬಗ್ಗೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಶುಕ್ರವಾರ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಗ್ಲಾಸ್ ಕುರಿತು ಮಾಹಿತಿ ನೀಡಿದ ಆರ್ಡಿಎಲ್ ಟೆಕ್ನಾಲಜಿಯ ಮುಖ್ಯಸ್ಥ ರಾಘವ ಶೆಟ್ಟಿ, ಇದು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಸರಳ ಕನ್ನಡಕ. ಎರಡು ಗಾಜು, ಅವುಗಳನ್ನು ಜೋಡಿಸಿದ ಚೌಕಟ್ಟಿನ ಒಳಗಿರಿಸಿದ ಪುಟ್ಟ ಸಂವೇದಕವನ್ನು ಇದು ಹೊಂದಿದೆ. ಈ ಸಂವೇದಕವನ್ನು ವಿಐ ಎಲ್ಆರ್ (ವಿಸಿಬಲ್ ಲೈಟ್ ಇನ್ಫ್ರಾರೆಡ್ ರಿಸೀವರ್) ಎನ್ನಲಾಗುತ್ತದೆ. ಇದು ಎಲ್ಐಎಫ್ಐ ತಂತ್ರಜ್ಞಾನದ ಮೂಲಕ ಬೆಳಕಿನ ಅವಗೆಂಪು ಕಿರಣ ಗಳನ್ನು ಗ್ರಹಿಸಿ, ಕನ್ನಡಕದ ಎಡ -ಬಲದ ಚೌಕಟ್ಟುಗಳಲ್ಲಿ ಅಳವಡಿಸಿದ ಕಂಪನಕಾರಕಗಳ ಮೂಲಕ ಧರಿಸಿದ ವ್ಯಕ್ತಿಗೆ ಎಚ್ಚರಿಕೆ ನೀಡುತ್ತದೆ. ಅಲ್ಲದೆ ಚೌಕಟ್ಟಿನ ಕೊನೆಯಲ್ಲಿ ಅಳವಡಿಸಿರುವ ಇಯರ್ ಫೋನ್ ಮೂಲಕ ಸಂದೇಶಗಳನ್ನು ನೀಡುತ್ತದೆ.
ಅಂಧರು ಅಡೆ ತಡೆಗಳನ್ನು ಗ್ರಹಿಸಿ, ಸ್ವತಂತ್ರವಾಗಿ ನಡೆದಾಡಲು ಇದು ಸಹಾಯ ಮಾಡುತ್ತದೆ ಎಂದು ವಿವರಿಸಿದರು.
ಮನೆ, ಕಚೇರಿ ಒಳಾಂಗಣದಲ್ಲಿ ಇದನ್ನು ಬಳಸಿ ಓಡಾಡಬಹುದು. ವ್ಯಕ್ತಿಯು ಬೆಳಕಿನಲ್ಲಿ ನಡೆಯುತ್ತಿರುವಾಗ ಆತ ನಿಂತಿರುವ ಸ್ಥಾನವನ್ನು ಅತಿ ನಿಖರವಾಗಿ ತ್ರೀಡಿ ಪೊಸಿಶನಿಂಗ್ ಮೂಲಕ ಗೊತ್ತುಪಡಿಸುತ್ತದೆ. ಅಲ್ಲದೆ ಪರಿಸರದಲ್ಲಿ ಇರುವ ವಸ್ತುಗಳ ಸ್ಥಾನ, ದೂರ ಇನ್ನಿತರ ಸೂಚನೆಗಳನ್ನು ನಿಖರ ವಾಗಿ ತಿಳಿಸುತ್ತದೆ. ಈ ಗ್ಲಾಸ್ ರಿಯಲ್ ಟೈಮ್ ಆ್ಯಕ್ಟಿವಿಟಿ ಮಾನಿಟರಿಂಗ್ ಮತ್ತು ಅಲರ್ಟ್ ಸಿಸ್ಟಮನ್ನೂ ಒಳಗೊಂಡಿದ್ದು, ಧರಿಸಿದ ವ್ಯಕ್ತಿಗೆ ತೊಂದರೆ ಉಂಟಾದಲ್ಲಿ ತತ್ಕ್ಷಣವೇ ವ್ಯಕ್ತಿಯ ಸಂಬಂಧಿಕರನ್ನು ಸಂಪರ್ಕಿಸುತ್ತದೆ ಎಂದು ಅವರು ತಿಳಿಸಿದರು.
3 ತಿಂಗಳಲ್ಲಿ ತಯಾರಿ
ಈ ಗ್ಲಾಸ್ ಆರ್ಡಿಎಲ್ನ ವಿಎಲ್ಸಿ ಪ್ರಯೋಗಶಾಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ತಯಾರಾಗಿದೆ. ರಾಘವ ಶೆಟ್ಟಿ ಅವರೊಂದಿಗೆ ಕನ್ವಲ್ ಕರ್ಕೇರ, ಡಾ| ಅಶ್ವತ್ ರಾವ್, ಡಾ| ಅನೂಶ್ ಬೇಕಲ್, ವಿಶ್ವನಾಥ್ ಆಚಾರ್ಯ, ಗಣೇಶ್ ಐತಾಳ್, ಪ್ರದೀಪ್ ಅವರ ತಂಡ ಈ ಕನ್ನಡಕ ಆವಿಷ್ಕರಿ ಸಿದ್ದಾರೆ. ಆರ್ಡಿಎಲ್ ತಂಡದ ಡಾ| ಅಶ್ವತ್ ರಾವ್, ಡಾ| ಅನೂಶ್ ಬೇಕಲ್, ಪ್ರೊ| ಮಂಜಪ್ಪ, ಪ್ರೊ| ರವಿಚಂದ್ರ ಉಪಸ್ಥಿತರಿದ್ದರು.