ಬಿಗಿ ಪೊಲೀಸ್ ಬಂದೋಬಸ್ತ್; ವಾಹನ ಸಂಚಾರದಲ್ಲಿ ವ್ಯತ್ಯಯ
Team Udayavani, May 6, 2018, 6:00 AM IST
ಮಂಗಳೂರು: ಮಂಗಳೂರು ನಗರದಲ್ಲಿ ಮಧ್ಯಾಹ್ನ 2 ಗಂಟೆಯ ಬಳಿಕ ಸಂಜೆ ಪ್ರಧಾನಿ ಮೋದಿ ಬಂದು ಹೋಗುವ ತನಕ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು.
3 ಗಂಟೆಯ ಬಳಿಕ ನಗರದ ಕೆಲವು ರಸ್ತೆಗಳಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಮಂಗಳೂರಿಗೆ ಬರುವ ಮತ್ತು ಇಲ್ಲಿಂದ ಹೊರಡುವ ಬಸ್ಸುಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು.
ಕೆಲವು ಮಾರ್ಗಗಳಲ್ಲಿ ಬಸ್ಸುಗಳು ಸಂಚಾರವನ್ನು ಅರ್ಧದಲ್ಲಿ ಮೊಟಕುಗೊಳಿಸಿದ್ದವು. ಪ್ರಯಾಣಿಕರ ಕೊರತೆಯಿಂದಾಗಿ ಕೆಲವು ಬಸ್ಸುಗಳು ಸಂಚಾರ ನಿಲ್ಲಿಸಿದ್ದವು.
ಕಾರ್ಯಕ್ರಮ ನಡೆದ ನೆಹರೂ ಮೈದಾನ ಸುತ್ತಲಿನ 500 ಮೀ. ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿತ್ತು. ಮೈದಾನ ಸುತ್ತ ಮುತ್ತಲ 500 ಮೀ. ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಜನರ ಓಡಾಟ ಮತ್ತು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು, ಆದರೆ ಜನ- ವಾಹನ ಸಂಚಾರ ವಿರಳವಾಗಿತ್ತು.
ಕದ್ರಿ ಮಲ್ಲಿಕಟ್ಟೆಯಿಂದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ಬಸ್ ಸಂಚಾರವನ್ನು ನಿಷೇಧಿಸಲಾಗಿತ್ತು.
ಕಾಸರಗೋಡು ಮತ್ತು ಬಿ.ಸಿ. ರೋಡ್ ಕಡೆಯಿಂದ ಬರುವ ಕೆಎಸ್ಆರ್ಟಿಸಿ ಬಸ್ಸುಗಳು ಪಂಪ್ವೆಲ್- ನಂತೂರು- ಕೆಪಿಟಿ – ಕುಂಟಿಕಾನ್ ಮಾರ್ಗವಾಗಿ ಬಿಜೈ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸಂಚರಿಸಿದವು.
ಪೊಲೀಸರಿಂದ ಯಶಸ್ವೀ ಸಂಚಾರ ನಿರ್ವಹಣೆ
ಮೋದಿ ಕಾರ್ಯಕ್ರಮ ನಡೆದ ನೆಹರೂ ಮೈದಾನ ಹೊರತು ಪಡಿಸಿ ನಗರದ ಇತರ ಬಹುತೇಕ ಎಲ್ಲ ಭಾಗಗಳಲ್ಲಿ ವಾಹನ ಸಂಚಾರ ಸಾಮಾನ್ಯ ಸ್ಥಿತಿಯಲ್ಲಿತ್ತು. ಸಿಟಿ ಬಸ್ ಸಂಚಾರವೂ ಇದ್ದು, ಪೊಲೀಸರು ಯಶಸ್ವಿಯಾಗಿ ಸಂಚಾರ ನಿರ್ವಹಣೆ ಮಾಡಿದರು.
ವಿಮಾನ ನಿಲ್ದಾಣ ಇರುವ ಕೆಂಜಾರಿನಿಂದ ಮಂಗಳೂರಿನ ತನಕ ಏರ್ಪೋರ್ಟ್ ರಸ್ತೆಯ ಎರಡೂ ಬದಿ ಅಲ್ಲಲ್ಲಿ ಇರುವ ಗಿಡ ಪೊದೆಗಳೆಡೆಯಲ್ಲಿ ದೊಡ್ಡ ಗಾತ್ರದ ಎಲ್ಇಡಿ ಲೈಟ್ ಅಳವಡಿಸಲಾಗಿತ್ತು. ಮರವೂರಿನಲ್ಲಿ ನೀರು ತುಂಬಿದ ನದಿಯ ದಡದಲ್ಲಿಯೂ ಬೆಳಕು ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗಿನಿಂದಲೇ ರಸ್ತೆಯುದ್ದಕ್ಕೂ ಟ್ರಾಫಿಕ್ಮತ್ತು ಇತರ ಪೊಲೀಸರು ಓಡಾಟ ನಡೆಸುತ್ತಾ ಕಣ್ಗಾವಲು ಇರಿಸಿದ್ದರು. ರಸ್ತೆ ಬದಿಯ ಗೂಡಂಗಡಿಗಳನ್ನು ತೆರವು ಮಾಡಲಾಗಿತ್ತು. ಅನವಶ್ಯಕವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ವಾಹನ ನಿಲುಗಡೆ ಮಾಡದಂತೆ ರಸ್ತೆ ಬದಿ ಪ್ಲಾಸ್ಟಿಕ್ ಹಗ್ಗಗಳನ್ನು ಕಟ್ಟಲಾಗಿತ್ತು. ನಗರದ ಸಕೀಟ್ ಹೌಸ್ ಆವರಣದಲ್ಲಿ ಕೂಡ ಅನಧಿಕೃತ ವಾಹನ ನಿಲುಗಡೆ ನಿಷೇಧಿಸಲಾಗಿತ್ತು.
ರಸ್ತೆಗಳು ಕೂಡುವಲ್ಲಿ ಪೊಲೀಸರನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ವಿಮಾನ ನಿಲ್ದಾಣದಲ್ಲಿ ಮೋದಿ ಅವರು ಆಗಮಿಸುವ ಅರ್ಧ ಗಂಟೆ ಮೊದಲು ವಿಐಪಿ ಅಲರ್ಟ್ ಘೋಷಿಸಲಾಗಿತ್ತು.
ಸಂಜೆ 6.15ಕ್ಕೆ ಆಗಮನ ಮೋದಿ ಅವರು ಶಿವಮೊಗ್ಗದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಂಜೆ
5.20ಕ್ಕೆ ಹೊರಟು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿ ಸಂಜೆ 6.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಬಳಿಕ ಅಲ್ಲಿಂದ ಕಾರಿನಲ್ಲಿ ಹೊರಟು ರಸ್ತೆಯಲ್ಲಿ ಪ್ರಯಾಣಿಸಿ 6.54ಕ್ಕೆಮಂಗಳೂರು ನೆಹರು ಮೈದಾನ ತಲುಪಿದರು.
*ಕಾರಿನಲ್ಲಿ ಪ್ರಯಾಣಿಸಿದ ಮೋದಿ ಅವರನ್ನು ನೋಡಲು ವಿಮಾನ ನಿಲ್ದಾಣದಿಂದ ಮಂಗಳೂರು ನಗರದ ಹಂಪನಕಟ್ಟೆ ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ನಿಂತಿದ್ದರು. ಪ್ರಧಾನಿ ಮೋದಿ ಕೈಬೀಸಿ ಜನರಿಗೆ ವಂದನೆ ಸಲ್ಲಿಸಿದರು.
*ನೆಹರು ಮೈದಾನದ ಕಾರ್ಯಕ್ರಮವನ್ನು ಮುಗಿಸಿ ರಾತ್ರಿ 7.55ಕ್ಕೆ ಹೊರಟು 8. 25ಕ್ಕೆ ವಿಮಾನ ನಿಲ್ದಾಣ ತಲುಪಿದರು. 8.35ಕ್ಕೆ ವಾಯು ಪಡೆಯ ವಿಶೇಷ ವಿಮಾನದಲ್ಲಿ ಮೈಸೂರಿಗೆ ನಿರ್ಗಮಿಸಿದರು.
ಬಂದೋಬಸ್ತು ವ್ಯವಸ್ಥೆ
ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಮಂಗಳೂರಿನ ಪೊಲೀಸರು, ಚುನಾವಣ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಹೆಚ್ಚುವರಿ ಪೊಲೀಸರು ಮತ್ತು ಅರೆ ಸೈನಿಕ ಪಡೆಯ ಜತೆಗೆ ಪಕ್ಕದ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಿಂದ 250ಕ್ಕೂ ಅಧಿಕ ಹೆಚ್ಚುವರಿ ಪೊಲಿಸರನ್ನು ಕರೆಸಲಾಗಿತ್ತು. ಎಸ್ಪಿಜಿ ತಂಡ ವಿಶೇಷ ವಿಐಪಿ ಭದ್ರತೆ ಒದಗಿಸಿತ್ತು.
ಝೀರೋ ಟ್ರಾಫಿಕ್
ಮೋದಿ ಅವರು ವಿಮಾನ ನಿಲ್ದಾಣದಿಂದ ನೆಹರು ಮೈದಾನಕ್ಕೆ ಬರುವ ಮತ್ತು ವಾಪಸಾಗುವ ಸಂದರ್ಭದಲ್ಲಿ (ವಿಮಾನ ನಿಲ್ದಾಣ ರಸ್ತೆ- ಕೆಪಿಟಿ- ಬಿಜೈ ಬಟ್ಟಗುಡ್ಡ- ಕದ್ರಿ ಕಂಬಳ ರಸ್ತೆ- ಬಂಟ್ಸ್ ಹಾಸ್ಟೆಲ್ ಜಂಕ್ಷನ್- ಜ್ಯೋತಿ ಜಂಕ್ಷನ್- ಹಂಪನಕಟ್ಟೆ ರಸ್ತೆ ) ಅವರು ಸಂಚರಿಸುವ ಮಾರ್ಗದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!