ಕೂಳೂರು ಸೇತುವೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್
Team Udayavani, Aug 27, 2018, 1:22 PM IST
ಪಣಂಬೂರು: ಕೂಳೂರಿನ ಫಲ್ಗುಣಿ ನದಿಯ ಹಳೆಯ ಸೇತುವೆಯ ಮೇಲಿನ ಡಾಮರು ಕಿತ್ತು ಹೋಗಿ ಸೇತುವೆಯ ತಳ ಕಾಣುವಂತೆ ಹೊಂಡಗಳು ಎದ್ದಿವೆ. ರಸ್ತೆಯಿಂದ ಎದ್ದ ಪುಡಿ ಒಂದೆಡೆ ಸೇರಿ ದಿಣ್ಣೆಗಳಾಗಿದ್ದು, ವಾಹನ ಓಡಾಟ ದುಸ್ತರವಾಗಿದೆ. ಶಾಲೆ, ಕಾಲೇಜು, ಕಚೇರಿ ಬಿಡುವ ಸಮಯದಲ್ಲಿ ನಿತ್ಯ ಸೇತುವೆ ದಾಟಲು ಕನಿಷ್ಠ ಒಂದೆರಡು ತಾಸು ಬೇಕು. ಉಡುಪಿ ಕಡೆಯಿಂದ ಬರುವ ವಾಹನಗಳು ಪಣಂಬೂರು, ಎಂಸಿಎಫ್ ಮುಂಭಾಗದಿಂದಲೇ ಸರತಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಮಳೆ ನೀರು ನಿಂತು ಹೊಂಡದ ಆಳ ತಿಳಿಯದೆ ದ್ವಿಚಕ್ರ ಸವಾರರು ಎದ್ದು ಬಿದ್ದು ಸಂಚರಿಸುವ ಸ್ಥಿತಿಯಾದರೆ, ಘನ ವಾಹನಗಳು ಆಮೆಗತಿಯಲ್ಲಿ ಸೇತುವೆ ದಾಟುತ್ತಿವೆ. ಸದ್ಯ ಮಳೆ ತನ್ನ ಆರ್ಭಟವನ್ನು ಕೊಂಚ ಸಡಿಲಿಸಿದ್ದರೂ ತಾತ್ಕಾಲಿಕ ದುರಸ್ತಿಗೂ ಇಲಾಖೆ ಮುಂದಾಗಿಲ್ಲ. ಮಳೆಗಾಲದ ಕೆಲವೇ ತಿಂಗಳ ಮೊದಲು ಪೇವರ್ ಫಿನಿಶ್ನೊಂದಿಗೆ ಕಂಗೊಳಿಸುವ ಕೂಳೂರು ಸೇತುವೆ ಹಾಗೂ ಪಣಂಬೂರು ಸುರತ್ಕಲ್ ಹೆದ್ದಾರಿ ಒಂದು ಮಳೆ ಬಂದರೆ ತನ್ನ ನೈಜ ರೂಪ ತೋರಿಸುತ್ತದೆ. ಪೇವರ್ ಫಿನಿಶ್ ಎದ್ದು ಹೋಗಿ ಅಲ್ಲಲ್ಲಿ ಹೊಂಡ, ಇನ್ನು ಕೆಲವೆಡೆ ಡಾಮರಿನ ದಿಣ್ಣೆ ಎದ್ದು ನಿಲ್ಲುತ್ತದೆ. ಆ್ಯಂಬುಲೆನ್ಸ್ನಂಥ ತುರ್ತು ಸೇವೆಯ ವಾಹನಗಳು ಈ ಟ್ರಾಫಿಕ್ ಬ್ಲಾಕ್ನಲ್ಲಿ ಸಿಲುಕಿದರೆ ಅಸಹಾಯವಾಗಿ ನಿಲ್ಲುವುದನ್ನು ಬಿಟ್ಟರೆ ಬೇರೇನೂ ಮಾಡಲಾಗದು. ವಿಮಾನ ರೈಲು ಯಾನಿಗಳು ಒಂದೆರಡು ತಾಸು ಬೇಗನೇ ಮನೆ ಬಿಡದಿದ್ದರೆ ನಿಗದಿತ ಪ್ರಯಾಣ ಕೈ ತಪ್ಪುವುದು ಖಚಿತ.
ಇನ್ನೆಷ್ಟು ಸಮಯ ಬೇಕು?
ಸೇತುವೆಯಲ್ಲಿ ಇಂತಹ ಅವಾಂತರ ಪ್ರತೀ ವರ್ಷ ಸೃಷ್ಟಿಯಾಗುತ್ತಿದ್ದರೂ ಶಾಶ್ವತ ಪರಿಹಾರ ಇನ್ನೂ ಕನಸು. ಸೇತುವೆಗಳ ಇಕ್ಕೆಲಗಳಲ್ಲಿ ಇರುವ ತಡೆಗೋಡೆ ಈಗಾಗಲೇ ಫಲ್ಗುಣಿ ಒಡಲು ಸೇರಿ ಹಲವು ತಿಂಗಳುಗಳೇ ಕಳೆದಿದ್ದರೂ ದುರಸ್ತಿಯಾಗಿಲ್ಲ. ಈ ರಸ್ತೆ ಶಾಶ್ವತವಾಗಿ ದುರಸ್ತಿಯಾಗಲು ಇನ್ನೆಷ್ಟು ಸಮಯ ಬೇಕು ಎಂಬುದೇ ಯಕ್ಷ ಪ್ರಶ್ನೆ.
ಅಪಾಯಕ್ಕೆ ಆಹ್ವಾನ
ಫಲ್ಗುಣಿ ನದಿಯ ಸೇತುವೆ ತಡೆಗೋಡೆ ಕೂಡ ದುರ್ಬಲವಾಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಹಿಂದೆ ಅಪಾಯಕಾರಿ ತಿರುವು ಇರುವಲ್ಲಿ ಒಂದು ಕಾರು ಹಾಗೂ ಸಿಮೆಂಟು ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದು ಚಾಲಕರು ಹಾಗೂ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದು, ರಾತ್ರಿ ವೇಳೆ ಅಪಘಾತ ನಡೆದರೂ ತಿಳಿಯದ ಸ್ಥಿತಿ ಇದೆ.
ಉಡುಪಿಯಿಂದ ಮಂಗಳೂರು ಕಡೆ ಬರುವಲ್ಲಿ ಸೇತುವೆ ಬಳಿ ಕಡಿದಾದ ತಿರುವು ಇದ್ದು, ಕೆಲವು ವಾಹನಗಳು ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಢಿಕ್ಕಿ ಹೊಡೆಯುತ್ತವೆ. ಈ ಭಾಗದಲ್ಲಿ ಸುಮಾರು 15-20 ಅಡಿ ಆಳವಿದ್ದು, ಈ ಕಡಿದಾದ ತಿರುವು ಬಹಳ ಅಪಾಯಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ