ಶಿಕ್ಷಕರಿಗೆ “ಮೃದು ಕೌಶಲ’ ಕುರಿತ ತರಬೇತಿ
Team Udayavani, May 28, 2019, 6:00 AM IST
ಮಹಾನಗರ: ತರಗತಿ ಪಠ್ಯಬೋಧನೆಯಲ್ಲಿ “ಮೃದು ಕೌಶಲಗಳು’ ಎಂಬ ವಿಷಯದಲ್ಲಿ ಶಿಕ್ಷಕರಿಗೆ ಎರಡು ದಿನಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಶಾಲೆ ಹಾಗೂ ರತ್ನ ಸಾಗರ್ ಪ್ರೈವೇಟ್ ಲಿಮಿಟೆಡ್ ಇವುಗಳ ಆಶ್ರಯದಲ್ಲಿ ಭುವನೇಂದ್ರ ಸಭಾಭವನದಲ್ಲಿ ಹಮ್ಮಿ ಕೊಳ್ಳಲಾಯಿತು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ನ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಮುಖ್ಯ ಅತಿಥಿಯಾಗಿದ್ದರು. ಕೆನರಾ ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲ ಜೋಯ್ ಜೆ. ರೈ, ರತ್ನ ಸಾಗರ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ಪಾಲುದಾರ ಪ್ರೀತಮ್ ಕೋಟ್ಯಾನ್, ಕೆನರಾ ಉರ್ವ ಶಾಲೆಯ ಮುಖ್ಯೋಪಾಧ್ಯಾಯಿನಿ ಲಲನಾ ಶೆಣೈ, ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ ಮೌರ್ಯ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಸಮೀರ್ ಕೋತ್ವಾಲ್ ಅವರು ತರಗತಿ ಪಠ್ಯ ಬೋಧನೆಯಲ್ಲಿ ಮೃದು ಕೌಶಲ ಎಂಬ ವಿಚಾರದಡಿ ಶಿಕ್ಷಕರಿಗಾಗಿ ವಸ್ತ್ರ ಸಂಹಿತೆ, ಶಿಸ್ತುಪಾಲನೆ, ದೇಹ ಭಾಷೆ ಹಾಗೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ, ಪಾಲಕರೊಂದಿಗೆ ಹಾಗೂ ಉದ್ಯೋಗಿಗಳೊಂದಿಗೆ ಪ್ರಮಾಣಬದ್ಧವಾಗಿ ಸಂವಹನ ಮಾಡುವುದರ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಒಟ್ಟು 4 ಕೆನರಾ ಸಮೂಹ ಸಂಸ್ಥೆಗಳ ಸುಮಾರು 160 ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಪದ್ಮಿನಿ ಸ್ವಾಗತಿಸಿದರು. ಶೋಭಾ ಕೂಳೂರು ವಂದಿಸಿದರು.