ಸಾಕುಪ್ರಾಣಿಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ
Team Udayavani, Feb 24, 2019, 4:17 AM IST
ಮಹಾನಗರ : ಅನಾರೋಗ್ಯಕ್ಕೊಳಗಾದ ಸಾಕು ಪ್ರಾಣಿಗಳಿಗೆ ಎಲ್ಲ ರೀತಿಯ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯ ವಾಗುವ ನಿಟ್ಟಿನಲ್ಲಿ ಸುಸಜ್ಜಿತ ಪಶು ಪಾಲಿಕ್ಲಿನಿಕ್ ಆಸ್ಪತ್ರೆ ನಗರದಲ್ಲಿ ನಿರ್ಮಾಣವಾಗಲಿದೆ. ಆ ಮೂಲಕ, ಪಶು ಚಿಕಿತ್ಸೆಗೆ ಬೇಕಾದ ಸೌಲಭ್ಯಗಳ ಕೊರತೆ ನಿವಾರಣೆಯಾಗಲಿದೆ.
ಕರ್ನಾಟಕ ಗೃಹ ಮಂಡಳಿ ಮುಖಾಂತರ ಕೊಡಿಯಾಲಬೈಲ್ನ ಜೈಲ್ ರಸ್ತೆಯಲ್ಲಿ ಅಂದಾಜು 2.1 ಕೋಟಿ ರೂ. ಗಳಲ್ಲಿ ಪಾಲಿಕ್ಲಿನಿಕ್ ನಿರ್ಮಾಣವಾಗಲಿದ್ದು, ಮುಂದಿನ ವಾರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ಕೊಡಿಯಾಲಬೈಲ್ನಲ್ಲಿ ಈಗಾಗಲೇ ಪಶು ಆಸ್ಪತ್ರೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಗುಣಮಟ್ಟದ ಚಿಕಿತ್ಸೆ ನೀಡುವುದು ಇಲ್ಲಿ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹಳೆ ಆಸ್ಪತ್ರೆಯ ಆವರಣದಲ್ಲಿರುವ ಹಳೆಯ ಎಂಟು ಶೆಡ್ಗಳನ್ನು ನೆಲ ಸಮಗೊಳಿಸಿ ಅಲ್ಲಿ ಸುಸಜ್ಜಿತ ಪಾಲಿ ಕ್ಲಿನಿಕ್ ನಿರ್ಮಾಣವಾಗಲಿದೆ. ಬಳಿಕ ಈಗಿರುವ ಆಸ್ಪತ್ರೆಯನ್ನು ಹೊಸ ಕಟ್ಟ ಡಕ್ಕೆ ಸ್ಥಳಾಂತರಿಸಲಾಗುತ್ತದೆ. ಶೆಡ್ ನೆಲಸಮಗೊಳಿಸಲು ಈಗಾಗಲೇ ದ.ಕ. ಜಿ.ಪಂ.ನಿಂದ ಅನುಮತಿ ದೊರೆತಿದ್ದು, ಪ್ರಕ್ರಿಯೆ ಆರಂಭಗೊಂಡಿದೆ ಎಂದು ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ| ರಘುರಾಮ್ ಭಟ್ ‘ಉದಯ ವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.
ಒಟ್ಟು 810 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಕಟ್ಟಡದಲ್ಲಿ ಎಕ್ಸ್ರೇ ಸೌಲಭ್ಯ, ಸ್ಕ್ಕ್ಯಾನಿಂಗ್ ಸೌಲಭ್ಯ, ದೊಡ್ಡ ಮತ್ತು ಸಣ್ಣ ಪ್ರಾಣಿಗಳಿಗೆ ಪ್ರತ್ಯೇಕ ಶಸ್ತ್ರಚಿಕಿತ್ಸಾ ಕೊಠಡಿ, ಕ್ಲಿನಿಕಲ್ ಡಯಾಗ್ನಾಸ್ಟಿಕ್ ಲ್ಯಾಬ್, ವಾರ್ಡ್, ಸ್ಟೋರ್ ರೂಂ, ರಿಸೆಪ್ಶನ್ ಸೌಲಭ್ಯಗಳಿರಲಿವೆ. ಪ್ರಾಣಿಗಳಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ತಪಾಸಣೆ, ಚಿಕಿತ್ಸೆಗೆ ಈವರೆಗೆ ಗೈನಕಾಲಜಿಸ್ಟ್ ಇರಲಿಲ್ಲ. ಆದರೆ ಇದೀಗ ಗೈನಕಾಲಜಿಸ್ಟ್ ಸಹಿತ ತಜ್ಞ ಪಶುವೈದ್ಯರು, ಎಕ್ಸ್ರೇ ಟೆಕ್ನೀಶಿಯನ್, ಪ್ರಥಮ ದರ್ಜೆ ಸಹಾಯಕರು, ಡಿ ದರ್ಜೆ ನೌಕರರ ಹುದ್ದೆ ಮಂಜೂರಾಗಿದೆ. ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಾಹನ ವ್ಯವಸ್ಥೆ
ತುರ್ತು ಶಸ್ತ್ರಚಿಕಿತ್ಸೆಯಂತಹ ಸಂದರ್ಭಗಳು ಎದುರಾದರೆ, ಸುಸಜ್ಜಿತ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳು ಇರುವುದಿಲ್ಲ. ಈ ಸಂದರ್ಭ ಜಿಲ್ಲಾಸ್ಪತ್ರೆಗೆ ರೆಫರಲ್ ಮಾಡಿದರೆ, ಇಲ್ಲಿಂದ ವೈದ್ಯಾಧಿಕಾರಿಗಳು ತೆರಳಿ ಶಸ್ತ್ರಚಿಕಿತ್ಸೆ ನಡೆಸುತ್ತಾರೆ ಅಥವಾ ವಿಶೇಷ ವಾಹನಗಳ ಮುಖಾಂತರ ಪ್ರಾಣಿಗಳನ್ನು ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆ ನಡೆಸಲಾಗುತ್ತದೆ. ಈಗಾಗಲೇ ಮೊಬೈಲ್ ವೆಟರ್ನರಿ ಕ್ಲಿನಿಕ್ ವಾಹನವೊಂದು ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ನಿರ್ಮಾಣದ ಬಳಿಕ ಇನ್ನಷ್ಟು ವಾಹನಗಳು ಆಸ್ಪತ್ರೆಗೆ ಲಭ್ಯವಾಗಲಿದೆ.
ಮುಂದಿನ ವಾರ ಶಂಕು ಸ್ಥಾಪನೆ
ನಗರ ಪಶು ಆಸ್ಪತ್ರೆ ಆವರಣದಲ್ಲಿ ಪಾಲಿಕ್ಲಿನಿಕ್ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಸ್ಥಳ ಗುರುತಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಪ್ರಸ್ತಾವಿತ ಸ್ಥಳದಲ್ಲಿರುವ ಹಳೆಯ ಶೆಡ್ಗಳನ್ನು ನೆಲಸಮಗೊಳಿಸುವ ಪ್ರಕ್ರಿಯೆಯೂ ಆರಂಭವಾಗಿದ್ದು, ಇನ್ನೊಂದು ವಾರದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ವಾರದೊಳಗೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.
– ಡಿ. ವೇದವ್ಯಾಸ
ಕಾಮತ್, ಶಾಸಕರು
ಎಲ್ಲ ರೀತಿಯ ಚಿಕಿತ್ಸೆ
ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಪಶು ಪಾಲಿಕ್ಲಿನಿಕ್ ಆಸ್ಪತ್ರೆ ಇರಬೇಕೆಂಬುದು ಸರಕಾರಿ ಆದೇಶ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಈ ಹಿಂದೆ ಆಸ್ಪತ್ರೆಗೆ ಪ್ರಾಣಿಗಳನ್ನು ತಂದಲ್ಲಿ ಔಷಧ ನೀಡಲಾಗುತ್ತಿತ್ತು. ಇನ್ನು ಮುಂದೆ ಎಲ್ಲ ರೀತಿಯ ಚಿಕಿತ್ಸೆಗಳೂ ಲಭ್ಯವಾಗಲಿವೆ.
– ಡಾ| ಎಸ್.ಮೋಹನ್,
ಉಪ ನಿರ್ದೇಶಕರು, ಪಶು ಸಂಗೋಪನ ಇಲಾಖೆ
(ಆಡಳಿತ) ದ.ಕ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ