ಬೆಳ್ತಂಗಡಿ: ಹಸಿರು ಹೊದಿಕೆ ವನಮಹೋತ್ಸವ
Team Udayavani, Jul 10, 2018, 2:25 AM IST
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿಯ ನಾವೂರಿನ ಕಾಸರವಳ್ಳಿ ಅರಣ್ಯದಲ್ಲಿ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಬೆಳ್ತಂಗಡಿ ಅರಣ್ಯ ವನ್ಯಜೀವಿ ವಲಯ ಸಹಯೋಗದಲ್ಲಿ ಸುಮಾರು 318 ಗಿಡಗಳನ್ನು ನೆಡುವ ಮೂಲಕ ಹಸಿರು ಹೊದಿಕೆ ವನಮಹೋತ್ಸವ ಕಾರ್ಯಕ್ರಮವನ್ನು ರವಿವಾರ ನಡೆಸಲಾಯಿತು. ಸುಮಾರು 59 ಮಂದಿ ಪರಿಸರಾಸ್ತರು ಗಿಡಗಳನ್ನು ನೆಟ್ಟಿದ್ದು, ವನಪಾಲಕ ರಾಜು ಜಿ.ಎನ್. ಅವರು ಗಿಡಗಳನ್ನು ಪೋಷಣೆ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗಿಡಗಳನ್ನು ನೆಡಲಾಗಿತ್ತು.
ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ಅರಣ್ಯ ಇಲಾಖೆಯವರು ಪರಿಹಾರ ನೀಡಿ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿದೆ. ಅಲ್ಲಿನ ಖಾಲಿ ಸ್ಥಳಗಳಲ್ಲಿ ಹಲಸು, ಹೆಬ್ಬಲಸು, ಪುನರ್ ಪುಳಿ ಗಿಡಗಳನ್ನು ನೆಡಲಾಯಿತು. ಮುಖ್ಯವಾಗಿ ಕಾಡುಪ್ರಾಣಿಗಳು ಆಹಾರಕ್ಕಾಗಿ ರೈತರ ತೋಟಗಳಿಗೆ ನುಗ್ಗುತ್ತಿದ್ದು, ಇಲ್ಲಿ ಹಣ್ಣುಗಳು ಬೆಳೆದರೆ ಪ್ರಾಣಿಗಳಿಗೆ ಅಲ್ಲೇ ಆಹಾರ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿತ್ತು.
ಪರಿಸರವಾದಿಗಳಾದ ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ, ನವೀನ್ ನಾಯಕ್, ಸಚಿನ್ ಬಿಢೆ, ಅವಿನಾಶ್, ಜೀತ್ ಮಿಲನ್, ಪ್ರವೀಣ್ ಮೊದಲಾದವರು ಭಾಗವಹಿಸಿದ್ದರು.