ಮಂಗಳೂರು -ಮೀರಜ್ ರೈಲು ಮರು ಆರಂಭಕ್ಕೆ ಯತ್ನ: ನಳಿನ್
Team Udayavani, Jun 24, 2019, 10:21 AM IST
ಪುತ್ತೂರು: ಮಂಗಳೂರು – ಮೀರಜ್ ಪ್ರಯಾಣಿಕ ರೈಲಿನ ಮರು ಆರಂಭಕ್ಕೆ ಪ್ರಯತ್ನ ನಡೆಸಲಾಗುತ್ತಿದ್ದು, ಓಡಾಟ ಪುನರಾರಂಭ ಆಗುವ ನಿರೀಕ್ಷೆ ಇದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ರವಿವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಜಿಲ್ಲೆಯ ರೈಲ್ವೇ ಸಂಪರ್ಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಮಂಗಳೂರು – ಗುರುವಾಯೂರು, ಸುಬ್ರಹ್ಮಣ್ಯ – ಕೊಲ್ಲೂರು, ಮಂಗಳೂರು – ತಿರುಪತಿ ನಡುವೆ ನೂತನ ರೈಲುಗಳ ಆರಂಭಕ್ಕೆ ಸಂಬಂಧಿಸಿದ ಬೇಡಿಕೆಗ ಳನ್ನು ರೈಲ್ವೇ ಸಚಿವರಿಗೆ ಪ್ರಸ್ತಾವನೆ ರೂಪದಲ್ಲಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಗೇಟ್ಗೆ ಪರ್ಯಾಯವಾಗಿ ತಳ ಸೇತುವೆ ನಿರ್ಮಾಣವಾಗಲಿದೆ. ವಿವೇಕಾನಂದ ಕಾಲೇಜು ರಸ್ತೆಯ ಅಗಲ ಕಿರಿದಾದ ರೈಲ್ವೇ ಮೇಲ್ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಿ ಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷ ಗಳ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸ ಲಾಗುವುದು. ರೈಲ್ವೇ ಸಚಿವರು ರಾಜ್ಯದ ಕುರಿತ ಸಭೆ ಕರೆಯಲಿದ್ದು, ಆ ಸಂದರ್ಭ ಬೇಡಿಕೆಗಳ ಕುರಿತು ತಿಳಿಸಲಾಗುವುದು ಎಂದರು.
ಬಾಳೆಲೆ ಅಭಿಯಾನ: ಮನವಿ
ಹೊಟೇಲ್ಗಳಲ್ಲಿ ಪ್ಲಾಸ್ಟಿಕ್ ಬದಲು ಬಾಳೆ ಎಲೆಯನ್ನು ಬಳಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರಂಭಿಸಿದ ಆಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಅಂಗಡಿ ವ್ಯಾಪಾರ ನಡೆಸುವವರಿಗೆ 60ರ ಹರೆಯದ ಬಳಿಕ 3 ಸಾವಿರ ರೂ.ಗಳಂತೆ ಸಹಾಯಧನ ನೀಡುವ ಯೋಜನೆ ಕೇಂದ್ರ ಸರಕಾರದಿಂದ ಆರಂಭವಾಗಲಿದ್ದು, ಇದರಿಂದ ಹಲವು ಬಡ ವ್ಯಾಪಾರಸ್ಥರಿಗೆ ಪ್ರಯೋಜನವಾಗಲಿದೆ ಎಂದರು.
ಶಬರಿಮಲೆ ನಂಬಿಕೆಗೆ ಬದ್ಧ
ಶಬರಿಮಲೆಗೆ ಹತ್ತಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಮತ್ತು 50 ವಯಸ್ಸು ದಾಟಿದ ಮಹಿಳೆಯರು ಪ್ರವೇಶಿಸಲು ಹಿಂದಿನಿಂದಲೂ ಅವಕಾಶವಿದೆ. ಬಿಜೆಪಿ ಈ ನಂಬಿಕೆಗೆ ಬದ್ಧವಾಗಿದೆೆ. ಆಚರಣೆ, ಸಂಪ್ರದಾಯಕ್ಕೆ ಅಡ್ಡಿಪಡಿಸುವುದು, ಧರ್ಮಾತೀತ ರಾಜಕಾರಣ ಅಲ್ಲ ಎಂದರು.
ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಮಾಧ್ಯಮ ವಕ್ತಾರ ಆರ್.ಸಿ. ನಾರಾಯಣ ಉಪಸ್ಥಿತರಿದ್ದರು.