ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ: ಹತ್ಯೆಗೈದವರ ಮಾಹಿತಿ ಸಿಕ್ಕಿದೆ ಎಂದ SP
Team Udayavani, Aug 2, 2022, 11:47 AM IST
ಮಂಗಳೂರು: ರಾಜ್ಯಾದ್ಯಂತ ಸದ್ದು ಮಾಡಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ಳಾರೆ ಪಳ್ಳಿಮಜಲು ನಿವಾಸಿಗಳಾದ 32 ವರ್ಷದ ಸದ್ದಾಂ ಮತ್ತು 42 ವರ್ಷದ ಹ್ಯಾರಿಸ್ ಬಂಧಿತ ಆರೋಪಿಗಳು.
ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಈ ಹಿಂದೆ ಶಫಿಕ್ ಮತ್ತು ಜಾಕಿರ್ ನನ್ನು ಪೊಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿಯಂತೆ ಇದೀಗ ಸದ್ದಾಂ ಮತ್ತು ಹ್ಯಾರಿಸ್ ನನ್ನು ಸೆರೆ ಹಿಡಿಯಲಾಗಿದೆ.
ಶಂಕಿತ ಸಂಚುಕೋರರು ಮತ್ತು ದಾಳಿ ಮಾಡಿವರನ್ನು ನಾವು ಗುರುತಿಸಿದ್ದೇವೆ. ಅವರು ತಲೆಮರೆಸಿಕೊಂಡಿದ್ದಾರೆ. ಹುಡುಕಾಟ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಹೃಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಶಕ್ಕೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಮೂವರನ್ನು ಬೆಂಗಳೂರು ನಗರದಿಂದ ಸೋಮವಾರ ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೂರ್ವ ವಿಭಾಗದ ಗೋವಿಂದಪುರ ಠಾಣೆ ವ್ಯಾಪ್ತಿಯ ನಾಗವಾರ ಬಳಿಯ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಬೇಕರಿ ಮತ್ತು ಕಾಫಿ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದ ಸಯ್ಯದ್ ಇರ್ಫಾನ್, ಮೊಹಮ್ಮದ್ ಅಲ್ತಾಫ್ ಹಾಗೂ ಹೆಸರು ತಿಳಿದು ಬಾರದ ಮತ್ತೊಬ್ಬನನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ:ರಾಜ್ಯಕ್ಕೆ ಅಮಿತ್ ಶಾ: ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ಸಾಧ್ಯತೆ
ಹತ್ಯೆಗೆ ಒಂದೆರಡು ದಿನ ಮೊದಲು ಊರಿಗೆ ಹೋಗಿದ್ದರು ಇವರು ಕೆಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ಬೇಕರಿ ಮತ್ತು ಕಾಫಿ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರವೀಣ್ ಹತ್ಯೆಗೆ ಒಂದೆರಡು ದಿನಗಳ ಹಿಂದಷ್ಟೇ ಮೂವರೂ ಬೆಳ್ಳಾರೆಗೆ ಹೋಗಿದ್ದರು ಹಾಗೂ ಕೃತ್ಯದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿರುವ ಶಫೀಕ್ ಮತ್ತು ಜಾಕೀರ್ ಜತೆ ಸಂಪರ್ಕದಲ್ಲಿದ್ದರು. ಕೃತ್ಯ ನಡೆದ ಬಳಿಕ ಬೆಂಗಳೂರಿಗೆ ಮರಳಿದ್ದಾರೆ ಎಂದು ಹೇಳಲಾಗಿದೆ.