ಕೊಲೆ ಯತ್ನ ಆರೋಪಿಗಳ ಶೀಘ್ರ ಬಂಧನ: ಸಚಿವ ಖಾದರ್ ಸೂಚನೆ
Team Udayavani, Jul 7, 2017, 3:30 AM IST
ಮಂಗಳೂರು: ಬಿ.ಸಿ.ರೋಡ್ನಲ್ಲಿ ಮಂಗಳವಾರ ರಾತ್ರಿ ಶರತ್ ಅವರ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ತತ್ಕ್ಷಣವೇ ಬಂದಿಸುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್ಎಸ್ಎಸ್ ಕಾರ್ಯಕರ್ತ ಶರತ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಸಚಿವ ಖಾದರ್ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.
ಶರತ್ ಅವರು ಯಾವುದೇ ಸಂಘಟನೆಯಲ್ಲಿ ಇದ್ದರೂ ಕೂಡ, ಅವರು ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಉತ್ತಮ ಕೆಲಸಗಳ ಮೂಲಕ ಅವರು ಗುರುತಿಸಿಕೊಂಡಿದ್ದರು. ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಆತ ಭಾಗವಹಿಸಿರುವ ಬಗ್ಗೆಯೂ ಉಲ್ಲೇಖವಿಲ್ಲ. ಹೀಗಾಗಿ ಆತನ ಮೇಲೆ ನಡೆದಿರುವ ಹತ್ಯಾಯತ್ನ ಖಂಡನೀಯ ಎಂದರು. ಎಲ್ಲಾ ಸಮಾಜದ ಜನರು ಶಾಂತಿ ಸಾಮರಸ್ಯದಿಂದ ಬದುಕುವ ಬಗ್ಗೆಯೇ ಹೆಚ್ಚಿನ ಮಹತ್ವ ನೀಡಬೇಕು. ಎಲ್ಲಾ ಧರ್ಮಗಳ ಜತೆಗೆ ಉತ್ತಮ ಬಾಂಧವ್ಯ ಹಾಗೂ ಪ್ರೀತಿ ವಾತ್ಸಲ್ಯದಿಂದ ಇರುವಂತೆ ಹೆಜ್ಜೆ ಇಡಬೇಕು. ಇದು ಸಾಧ್ಯವಾದಾಗ ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡಲು ಸಾಧ್ಯವಾಗುತ್ತದೆ. ಎಂದರು. ಮುಖಂಡರಾದ ಸಂತೊಷ್ ಶೆಟ್ಟಿ, ವೈಭವ್ ತಲಪಾಡಿ, ವಿನು, ರಫೀಕ್, ಕರೀಂ, ಬಾಝಿಲ್ ಡಿಸೋಜ ಮುಂತಾದವರು ಜತೆಗಿದ್ದರು.