ಅನೇಕತೆಯಲ್ಲಿ ಏಕತೆ ತುಳುವಿನ ವೈಶಿಷ್ಟ್ಯ: ರೈ
Team Udayavani, Dec 11, 2017, 9:17 AM IST
ಬಂಟ್ವಾಳ: ಅನೇಕತೆಯಲ್ಲಿ ಏಕತೆ ಹೊಂದಿರುವುದು ತುಳು ಭಾಷೆಯ ವೈಶಿಷ್ಟ್ಯ. ಸಮ್ಮೇಳನದಲ್ಲಿ ವಿಚಾರಗಳ ಮಂಥನ ನಡೆದು ಉತ್ತಮ ನಿರ್ಣಯಗಳು ಹೊರಹೊಮ್ಮಬೇಕು. ಎಲ್ಲರೂ ಸಮಯಪ್ರಜ್ಞೆ ಹೊಂದುವುದು ಅವಶ್ಯ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಆಶ್ರಯದಲ್ಲಿ ರವಿವಾರ ಬಿ.ಸಿ.ರೋಡ್ ಸ್ಪಶಾ ಕಲಾ ಮಂದಿರದಲ್ಲಿ ನಡೆದ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಬಂಟ್ವಾಳದಲ್ಲಿ ಪ್ರಥಮ ತುಳು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಸಮ್ಮೇಳನದಲ್ಲಿ ಹೊಸ ವಿಚಾರಗಳು ಹೊರ
ಹೊಮ್ಮಲಿ ಎಂದು ಹಾರೈಸಿದರು.
ಹಿರಿಯ ಸಾಹಿತಿ, ಪತ್ರಕರ್ತ ಮಲಾರು ಜಯರಾಮ ರೈ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಮಾನ್ಯತೆಗೆ ಆಗ್ರಹ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ತುಳು ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ ನಮ್ಮ ಕನಸು ನನಸಾಗಿದೆ. ತುಳುನಾಡಿನ ವಿವಿಧ ಮಾತೃಭಾಷೆಯ ಜನರಿದ್ದರೂ ಮನೆ ಬಿಟ್ಟು ಹೊರ ಬಂದಾಗ ತುಳುವಿನಲ್ಲೇ ವ್ಯವಹರಿಸುತ್ತಾರೆ. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಲಭಿಸಲೇ ಬೇಕು ಎಂದು ಆಗ್ರಹಿಸಿದರು.
ಫೆ. 5ರೊಳಗೆ ಶೇಣಿ, ಅಡಿಗ, ಕಯ್ನಾರ, ಅಳಿಕೆ, ಬೋಳಾರ ಅವರ ಸಂಸ್ಮರಣೆ ನಡೆಸುವ ಯೋಜನೆ ಇದೆ. ನಾಟಕ, ಸಿನೆಮಾ, ಯಕ್ಷಗಾನ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಗೌರವ ಸಲ್ಲಿಸುವ ಕೆಲಸ ಅಕಾಡೆಮಿಯಿಂದ ನಡೆಯುತ್ತಿದೆ. ತುಳು ಭವನ ನಿರ್ಮಿಸಲಾಗುವುದು. ತುಳು ಪುಸ್ತಕಗಳನ್ನು ಕೊಂಡು ಓದುವುದಕ್ಕಾಗಿ ಅಕಾಡೆಮಿ ಪುಸ್ತಕದ ಮೇಲೆ ಶೇ. 40 ಸಹಾಯಧನ ನೀಡುತ್ತದೆ ಎಂದು ಅವರು ತಿಳಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ತಾ.ಪಂ. ಅಧ್ಯಕ್ಷ
ಚಂದ್ರಹಾಸ ಕರ್ಕೇರ ಮಾತನಾಡಿದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಸುಧಾ ನಾಗೇಶ, ತಾರಾನಾಥ ಗಟ್ಟಿ ಕಾಪಿಕಾಡು, ವಿದ್ಯಾಶ್ರೀ ಎನ್., ದುರ್ಗಾ ಮೆನನ್, ನಿರಂಜನ ರೈ ಮಠಂತಬೆಟ್ಟು, ಎ. ಗೋಪಾಲ ಅಂಚನ್, ಶಿವಾನಂದ ಕರ್ಕೇರ, ಬೆನಟ್ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು, ಡಾ| ವಾಸುದೇವ ಬೆಳ್ಳೆ, ವಿಜಯ ಶೆಟ್ಟಿ ಸಾಲೆತ್ತೂರು, ಡಾ| ವೈ.ಎನ್. ಶೆಟ್ಟಿ, ನರೇಶ ಸಸಿಹಿತ್ಲು, ಪುರುಷೋತ್ತಮ ಚೇಂಡ್ಲ, ಪ್ರಭಾಕರ ನೀರುಮಾರ್ಗ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ, ಅಕಾಡೆಮಿ ಸದಸ್ಯ ಗೋಪಾಲ ಅಂಚನ್ ಪ್ರಸ್ತಾವನೆಗೈದರು. ಸಮಿತಿ ಕಾರ್ಯದರ್ಶಿ ಡಿ.ಎಂ. ಕುಲಾಲ್ ವಂದಿಸಿದರು. ಎಚ್ಕೆ ನಯನಾಡು ಮತ್ತು ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ತುಳು ಸಂಸ್ಕೃತಿ ಮೇಲೆ ಆಂಗ್ಲ ಭಾಷೆಯ ದಾಳಿ
ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪಂಚ ದ್ರಾವಿಡ ಭಾಷೆಗಳ ಪೈಕಿ ತುಳು ಅತ್ಯಂತ ಪ್ರಬುದ್ಧ, ಶಕ್ತಿವಂತ ಭಾಷೆ. ಕ್ರಿ.ಶ. ಮೂರನೇ ಶತಮಾನದಲ್ಲಿ ಗ್ರೀಕ್ ಭಾಷೆಯಲ್ಲಿ ತುಳು ಶಬ್ದಗಳು ದೊರೆತಿದ್ದು, ಅದು ಗ್ರಾಂಥಿಕ ಭಾಷೆ ಎಂಬುದರಲ್ಲಿ ಅನುಮಾನವಿಲ್ಲ ಎಂದರು. ಆಂಗ್ಲ ಭಾಷೆ ಇಂದು ಅಡುಗೆ ಕೋಣೆಯನ್ನು ಹೊಕ್ಕಿದ್ದು, ನಮ್ಮೆಲ್ಲಾ ಭಾಷೆ, ಬದುಕು, ಸಂಸ್ಕೃತಿ ಕಸಿದುಕೊಂಡಿದೆ ಎಂದು ಹೇಳಿದರು.