ವಿವಿಧೆಡೆಯ ಅಗ್ನಿ ಶಾಮಕ ವಾಹನ ಮಂಗಳೂರಿನಲ್ಲಿ
Team Udayavani, May 31, 2018, 10:02 AM IST
ಮಹಾನಗರ: ಯಾವುದೇ ಸಮಯದಲ್ಲಿ ಮಳೆ ಬಂದು ಮತ್ತೆ ಕೃತಕ ನೆರೆ ಸೃಷ್ಟಿಯಾಗಬಹುದು ಎಂಬ ಕಾರಣದಿಂದ ತುರ್ತು ಕಾರ್ಯಾಚರಣೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಅಗ್ನಿಶಾಮಕ ವಾಹನ ಹಾಗೂ ಸಿಬಂದಿ ಆಗಮಿಸಿದ್ದಾರೆ.
ಮೇ 29ರ ರಾತ್ರಿ ರಾಜ್ಯದ ಬೇರೆ ಬೇರೆ ಅಗ್ನಿಶಾಮಕ ವಾಹನಗಳು ಮಂಗಳೂರಿಗೆ ಬಂದಿದ್ದು, ಜತೆಗೆ ರಾಜ್ಯ ಆಗ್ನಿಶಾಮಕ ಇಲಾಖೆಯ ಉಪನಿರ್ದೇಶಕ (ಆಡಳಿತ) ಎಚ್.ಎಸ್. ವರದರಾಜನ್ ಅವರು ಕೂಡ ನಗರಕ್ಕೆ ಭೇಟಿ ನೀಡಿದ್ದು, ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲನೆ ನಡೆಸಿದ್ದಾರೆ. ನಗರದ ಕೊಡಿಯಾಲ್ಬೈಲ್, ಕೊಟ್ಟಾರ, ಎಕ್ಕೂರು, ಅಳಕೆ, ಸುರತ್ಕಲ್ ಮೊದಲಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರವಾಹದ ಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಬುಧವಾರವೂ ಒಂದೊಂದು ವಾಹನಗಳು ನಿಂತಿವೆ. ಈ ವಾಹನಗಳಲ್ಲಿ ನಿರ್ದಿಷ್ಟ ಸಿಬಂದಿ, ಬೋಟ್, ಜತೆಗೆ ಇತರ ತುರ್ತು ಕಾರ್ಯಾಚರಣೆಯ ಪರಿಕರಗಳಿವೆ.
ಎಲ್ಲಿಂದ; ಎಷ್ಟು?
ಹಾಸನದಿಂದ 20 ಸಿಬಂದಿ, 2 ವಾಹನ, ಶಿವಮೊಗ್ಗದಿಂದ 1 ವಾಹನ, 8 ಮಂದಿ ಸಿಬಂದಿ, ಪುತ್ತೂರಿನಿಂದ 1 ವಾಹನ 10 ಸಿಬಂದಿ, ಬೆಳ್ತಂಗಡಿಯಿಂದ 1 ವಾಹನ, 6 ಸಿಬಂದಿ, ಮಡಿಕೇರಿಯಿಂದ 1 ವಾಹನ, 10 ಮಂದಿ ಸಿಬಂದಿ ಆಗಮಿಸಿದ್ದಾರೆ. ಇದರ ಜತೆಗೆ ಮಂಗಳೂರಿನ 6 ತುರ್ತು ಕಾರ್ಯಾಚರಣಾ ವಾಹನಗಳು ಹಾಗೂ 50 ಮಂದಿ ಇದ್ದಾರೆ.