ಅತ್ಯಾಚಾರ ಯತ್ನ ಆರೋಪಿ ಬಂಧನಕ್ಕೆ ಉಗ್ರ ಹೋರಾಟ: ವಿಹಿಂಪ
Team Udayavani, Feb 9, 2018, 11:34 AM IST
ಮಂಗಳೂರು: ಬೆಳ್ತಂಗಡಿಯ ಕಲ್ಮಂಜದಲ್ಲಿ ಜ. 31ರಂದು ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಯನ್ನು ಫೆ. 12ರ ಒಳಗೆ ಬಂಧಿಸದಿದ್ದರೆ ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಎಚ್ಪಿ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಧರ್ಮಸ್ಥಳ-ಮುಂಡಾಜೆ ರಸ್ತೆಯ ಕೊಲೆಂಜಿರೋಡಿ ಯಲ್ಲಿ ಆಟೋ ರಿಕ್ಷಾದಲ್ಲಿ ಬಂದ ಸ್ಥಳೀಯ ನಿವಾಸಿ ರಿಜೀಶ್ (26) 8ನೇ ತರಗತಿಯ ವಿದ್ಯಾರ್ಥಿನಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಆತನನ್ನು ಬಂಧಿಸಿಲ್ಲ. ಪೊಲೀಸರನ್ನು ಪ್ರಶ್ನಿಸಿದಾಗ ದರ್ಪದ ಮಾತುಗಳನ್ನಾಡುತ್ತಿದ್ದಾರೆ ಎಂದವರು ಆರೋಪಿಸಿದರು.
ಆರೋಪಿಗೇ ರಕ್ಷಣೆ: ಈ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕನನ್ನು ಬಂಧಿಸಿದ್ದು, ಮುಖ್ಯ ಆರೋಪಿ ರಿಜೀಶ್ ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಆತನನ್ನು ಬಂಧಿಸಿಲ್ಲ ಎಂದ ಅವರು, ಕೆಲವು ಪೊಲೀಸರು ಆತನಿಗೆ ರಕ್ಷಣೆ ನೀಡುತ್ತಿದ್ದಾರೆ ಎನ್ನುವ ಅನುಮಾನ ಉಂಟಾಗಿದೆ ಎಂದು ಆರೋಪಿಸಿದರು. ಆರೋಪಿಗೆ ಸಹಕರಿಸಿದ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಬಾಲಕಿಗೆ ನ್ಯಾಯ ಒದಗಿಸಬೇಕು ಎಂದವರು ಆಗ್ರಹಿಸಿದರು.
ವಿಹಿಂಪ ಮುಖಂಡರಾದ ಪ್ರವೀಣ್ ಕುತ್ತಾರು, ಭುಜಂಗ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.