ಪುತ್ತೂರು: ಭಾರೀ ಮಳೆಗೆ ಗೋಡೆ ಕುಸಿದು ಅಜ್ಜಿ , ಮೊಮ್ಮಗ ಬಲಿ
Team Udayavani, Jul 7, 2018, 9:57 AM IST
ಪುತ್ತೂರು: ಭಾರೀ ಮಳೆಗೆ ತಡೆಗೋಡೆ ಮನೆಯ ಮೇಲೆ ಕುಸಿದು ಬಿದ್ದು ವೃದ್ದೆ ಮತ್ತು ಮೊಮ್ಮಗ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಹೆಬ್ಬಾರಬೈಲಿನಲ್ಲಿ ಶನಿವಾರ ನಸುಕಿನ ಸುಮಾರು 2.30ಕ್ಕೆ ನಡೆದಿದೆ.
ಮೃತರು ಹೆಬ್ಬಾರಬೈಲು ನಿವಾಸಿ ಪಾರ್ವತಿ(65ವ) ಮತ್ತು ಅವರ ಮೊಮ್ಮಗ ಧನುಷ್ (11) ಎನ್ನುವವರಾಗಿದ್ದಾರೆ.
ಧನುಷ್ ಪಾರ್ವತಿ ಅವರ ಮಗ ಮಹೇಶ್ ಅವರ ಪುತ್ರನಾಗಿದ್ದು, ಸುದಾನ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದ.
ಪಾರ್ವತಿ ಅವರ ಪತಿ ಕೊಡಿಪ್ಪಾಡಿಯಲ್ಲಿ ವಿಶ್ವಾಸ್ ಹೊಟೇಲ್ ನಡೆಸಿಕೊಂಡಿದ್ದ ವಿಶ್ವನಾಥ್ ಸಾಲಿಯಾನ್ ಅವರು ಮೇ ತಿಂಗಳಿನಲ್ಲಿ ವಿಧಿವವಶರಾಗಿದ್ದರು.
ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಪಕ್ಕದ ಭಾರಿ ಎತ್ತರದ ತಡೆಗೋಡೆ ಕುಸಿದು ಮನೆಯ ಮೇಲೆ ಬಿದ್ದಿದೆ. ಈ ಸಂದರ್ಭ ಮನೆಯ ಒಂದು ಕೊಠಡಿಯಲ್ಲಿ ಪಾರ್ವತಿ ಮತ್ತು ಧನುಷ್ ಮಲಗಿದ್ದರು. ತಡೆಗೋಡೆ ಮಲಗಿದ್ದ ಪಾರ್ವತಿ ಮತ್ತು ಅವರ ಮೊಮ್ಮಗನ ಮೇಲೆ ಬಿದ್ದು ಸಂಪೂರ್ಣ ಮಣ್ಣಿನಲ್ಲಿ ಹೂತುಹೋಗಿದ್ದರು. ಅವರಿಬ್ಬರನ್ನು ತಕ್ಷಣ ಮನೆ ಮಂದಿ,ಸ್ಥಳೀಯರು ಹಾಗೂ ನಗರಸಭೆ ಸಿಬಂದಿಗಳು ಕಾರ್ಯಾಚರಣೆ ನಡೆಸಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಕೂಡಲೆ ನಗರಸಭೆ ವಾಹನದಲ್ಲೇ ಅವರನ್ನು ಪಕ್ಕದ ಆದರ್ಶ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದರು. .
ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ.
ಮೃತ ಪಾರ್ವತಿಯವರು ಪುತ್ರರಾದ ಮಹೇಶ್, ಯೋಗೀಶ್, ಪುತ್ರಿಯರಾದ ಗಾಯತ್ರಿ, ರಾಜೇಶ್ವರಿಯವರನ್ನು ಅಗಲಿದ್ದಾರೆ.
ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.