ತ್ಯಾಜ್ಯ ಆಸ್ಪತ್ರೆಯ ಒಳಗೆ: ಬಂದ್ ಮಾಡಿ ವೈದ್ಯರಿಂದ ಪ್ರತಿಭಟನೆ
Team Udayavani, May 9, 2018, 1:08 PM IST
ಸುರತ್ಕಲ್ : ಸುರತ್ಕಲ್ ಮಾರುಕಟ್ಟೆ ಹಿಂಬದಿ ಇರುವ ಮಾರುಕಟ್ಟೆಯ ತ್ಯಾಜ್ಯ, ಮಳೆಯ ಜತೆಗೆ ಕೊಳಚೆ ನೀರು ವೀನಸ್ ಆಸ್ಪತ್ರೆಯ ಒಳಗೆ ನುಗ್ಗುತ್ತಿದ್ದು ಇದನ್ನು ಸರಿಪಡಿಸಲು ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಅನ್ನದ ಪಾಲಿಕೆ ವಿರುದ್ಧ ಅಸಮಾಧಾನಗೊಂಡು ಆಸ್ಪತ್ರೆಯನ್ನೇ ಬಂದ್ ಮಾಡಿದ್ದಾರೆ.
ಸೋಮವಾರ ರಾತ್ರಿ ಸುರಿದ ಮಳೆಗೆ ತ್ಯಾಜ್ಯ ನೀರು ಆಸ್ಪತ್ರೆಯ ಒಳಗೆ ತುಂಬಿ ರೋಗಿಗಳು ಸಮಸ್ಯೆ ಎದುರಿಸಬೇಕಾಯಿತು. ರಾತ್ರಿ ಮಳೆ ನೀರು ಹೊರ ಹಾಕಿ ಸುಸ್ತಾದ ವೀನಸ್ ಆಸ್ಪತ್ರೆಯ ಮಾಲಕರೂ ಆದ ಡಾ| ವೇಣುಗೋಪಾಲ ರಾವ್ ಮಂಗಳವಾರದಿಂದ ಆಸ್ಪತ್ರೆಯನ್ನೇ ಬಂದ್ ಮಾಡಿದ್ದಾರೆ.
ಬೆಳಗ್ಗೆ ಐವತ್ತಕ್ಕೂ ಮಿಕ್ಕಿ ರೋಗಿಗಳು ಚಿಕಿತ್ಸೆಗೆ ಆಗಮಿಸಿದರೂ ಚಿಕಿತ್ಸೆ ನೀಡಲು ಅನನುಕೂಲ ಎಂದು ತಿಳಿಸಿ ವೈದ್ಯರು ಹಿಂದಕ್ಕೆ ಕಳಿಸಿದರು.
ಪ್ರತಿಭಟನೆ ಎಚ್ಚರಿಕೆ
ಆಸ್ಪತ್ರೆಗೆ ಮೂಲ ಸೌಕರ್ಯ ನೀಡಲು ಪಾಲಿಕೆ ನಿರ್ಲಕ್ಷ್ಯ ತಾಳುತ್ತಿದೆ. ತತ್ ಕ್ಷಣ ಸೂಕ್ತಕ್ರಮಕ್ಕೆ ಮುಂದಾಗದಿದ್ದಲ್ಲಿ ಆಪತ್ಬಾಂಧವ ಸಂಸ್ಥೆಯು ಪ್ರತಿಭಟನೆ ನಡೆಸಲಿದೆ ಎಂದು ಸುರತ್ಕಲ್ ಆಪತ್ಬಾಂಧವ ಸಂಸ್ಥೆ ಸ್ಥಾಪಕ ಉಮೇಶ್ ದೇವಾಡಿಗ ತಿಳಿಸಿದ್ದಾರೆ.