ಶಾಲಾ ಬಿಸಿಯೂಟಕ್ಕೆ ನೀರಿನ ಕೊರತೆ
Team Udayavani, Jun 4, 2019, 6:00 AM IST
ನೆರಿಯ ಸರಕಾರಿ ಹಿ.ಪ್ರಾ. ಶಾಲೆಗೆ ಪಿಕಪ್ ಮೂಲಕ ನೀರು ಸರಬರಾಜು.
ಬೆಳ್ತಂಗಡಿ: ಹಿಂದೆಂದೂ ಕಂಡಿರದ ಬರದ ಛಾಯೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ತಟ್ಟಿದ್ದು, ಜಿಲ್ಲಾದ್ಯಂತ ಶಾಲಾ ಪ್ರಾರಂಭೋತ್ಸವದ ಹರ್ಷದಲ್ಲಿದ್ದ ಮಕ್ಕಳಿಗೆ ಬಿಸಿಯೂಟ ಸಿದ್ಧ ಪಡಿಸಲು ನೀರಿಲ್ಲದೆ ಶಿಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಶಾಲೆಗಳಲ್ಲಿ ಪಂಚಾಯತ್ ನೀರಿನ ಸಂಪರ್ಕವಿಲ್ಲದಿರುವುದರಿಂದ ಶಿಕ್ಷಕರು ಚಿಂತೆಗೀಡಾಗಿದ್ದಾರೆ. ಇನ್ನು ಕೆಲವು ಶಾಲೆಗಳು ಎತ್ತರದ ಪ್ರದೇಶದಲ್ಲಿರುವುದರಿಂದ ನೀರು ತಲುಪದ ಪರಿಸ್ಥಿತಿ ಇದೆ.
ದ.ಕ.ದಲ್ಲಿ 3,805 ಶಾಲೆ
ದ.ಕ. ಜಿಲ್ಲೆಯಲ್ಲಿ ಒಟ್ಟು 3,805 ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಲಕ್ಷಕ್ಕೂ ಅಧಿಕ ಮಕ್ಕಳ ವ್ಯಾಸಂಗಕ್ಕೆ ಬೇಸಗೆ ಬಿಸಿ ಕಾಡಿದೆ. ಈಗಾಗಲೇ ತೀರಾ ಸಮಸ್ಯೆ ಇರುವ ಶಾಲೆಗಳು ತಿಳಿಸಿದಲ್ಲಿ ಒಂದು ತಾಸಿನ ಒಳಗಾಗಿ ಸ್ಥಳಕ್ಕೆ ಟ್ಯಾಂಕರ್ ನೀರು ಪೂರೈಸಲು ಜಿಲ್ಲಾಡಳಿತವು ಆಯಾ ತಾಲೂ ಕು ಬಿಇಒ ಕಚೇರಿಗೆ ಸೂಚಿಸಿದೆ. ಪಟ್ಟಣ, ಅರೆನಗರ ಪ್ರದೇಶಗಳಲ್ಲಿ ಟ್ಯಾಂಕರ್ ನೀರು ಪೂರೈಸಬಹುದಾದರೂ ಗ್ರಾಮೀಣ ಪ್ರದೇಶದಲ್ಲಿ ಇದು ಸಾಕಾರಗೊಳ್ಳುತ್ತಿಲ್ಲ.
ಶೌಚಾಲಯದ್ದೇ ಸಮಸ್ಯೆ
100ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಶುದ್ಧ ನೀರಿನ ಕೊರತೆ ಕಾಡುತ್ತಿದೆ. ಪಂಚಾಯತ್ನಿಂದ ನೀರಿನ ಸಂಪರ್ಕವಿಲ್ಲದ ಶಾಲೆಗಳಿದ್ದು, ಅಲ್ಲಿಗೆ ನೀರು ಪೂರೈಕೆಗೆ ಕ್ರಮ ಅತ್ಯವಶ್ಯವಾಗಿದೆ. ಶೌಚಾಲಯ ಬಳಕೆಗೂ ನೀರಿಲ್ಲದೆ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಮಂಗಳೂರು ಸೇರಿದಂತೆ ಹಲವೆಡೆ ರೇಷನಿಂಗ್ ಮೂಲಕ ನೀರು ಒದಗಿಸಲಾಗುತ್ತಿದೆಯಾದರೂ ಗ್ರಾಮೀಣ ಶಾಲೆಗಳ ಪರಿಸ್ಥಿತಿ ಕೊಂಚ ಗಮನಹರಿಸುವ ಅನಿವಾರ್ಯತೆ ಇದೆ.
ಜವಾಬ್ದಾರಿ
ಎತ್ತರದಲ್ಲಿರುವ ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಬಂಟ್ವಾಳದಲ್ಲಿ ಕೆಲವೆಡೆ ಸಮಸ್ಯೆ ಇದ್ದು, ಈ ಕುರಿತು ಜಿಲ್ಲಾಡಳಿತ ಈಗಾಗಲೇ ಬಿಇಒ ಮತ್ತು ಶಾಲಾ ಮುಖ್ಯೋಪಾದ್ಯಾಯರಿಗೆ ಟ್ಯಾಂಕರ್ ನೀರು ಪೂರೈಸಲು ಸೂಚಿಸಿದೆ. ಅಗತ್ಯವಿದ್ದಲ್ಲಿ ಶಾಲಾ ಎಸ್ಡಿಎಂಸಿ ನೀರಿನ ಪೂರೈಕೆ ಮಾಡುವ ಜವಾಬ್ದಾರಿ ವಹಿಸಿದೆ.
– ಶಶಿಕಾಂತ ಸೆಂಥಿಲ್ದ.ಕ. ಜಿಲ್ಲಾಧಿಕಾರಿ
- ಚೈತ್ರೇಶ್ ಇಳಂತಿಲ