ಬೇಸಗೆ ಆರಂಭದಲ್ಲೇ ಕಾಡಿದೆ ನೀರಿನ ಸಮಸ್ಯೆ
Team Udayavani, Mar 22, 2018, 10:49 AM IST
ಕಿನ್ನಿಗೋಳಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳತ್ತೂರು, ನೆಲಗುಡ್ಡೆ, ತಾಳಿಪಾಡಿ ಗುತ್ತು ಹತ್ತಿರ ಹಿಲ್ ಟಾಪ್, ಪುನರೂರಿನ ಕೆಲವು ಭಾಗದಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭವಾಗಿದೆ. ವಾರದಲ್ಲಿ ಎರಡರಿಂದ ಮೂರು ಬಾರಿ ಮಾತ್ರ ನೀರು ಸರಬರಾಜು ಆಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 8,200 ಜನಸಂಖ್ಯೆ ಇದ್ದು, 1,002 ಕುಡಿಯುವ ನೀರಿನ ಸಂಪರ್ಕ ಇದೆ. 2 ತೆರೆದ ಬಾವಿ, 14 ಕೊಳವೆ ಬಾವಿ ಇದೆ.
ಪೈಪ್ಲೈನ್ ಸಮಸ್ಯೆ
ಕೊಳವೆ ಬಾವಿ ಮೂಲಕ ನೀರು ಸರಬರಾಜು ಆಗುತ್ತಿದ್ದು, ತೆರೆದ ಬಾವಿಗಳು ಸಂಖ್ಯೆ ಕಡಿಮೆ ಇದೆ. ಬಳ್ಕುಂಜೆಯ ಬಹುಗ್ರಾಮ ನೀರಿನ ಯೋಜನೆ ಮೂಲಕ 4 ಓವರ್ಹೆಡ್ ಟ್ಯಾಂಕ್ಗಳಿಗೆ ನೀರು ತುಂಬಿಸಿ ಸರಬ ರಾಜು ನಡೆಯುತ್ತಿದೆ. ಆದರೇ ಪೈಪ್ಲೈನ್ ಪದೇ ಪದೇ ಒಡೆದು ಹಾಳಾಗುವುದರಿಂದ ಸಮಸ್ಯೆ ಆಗುತ್ತಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸದ್ಯಕ್ಕೆ ವಾರಕ್ಕೆ ಮೂರು ಬಾರಿ ನೀರು ಬರುತ್ತಿದ್ದು, ಕಿನ್ನಿಗೋಳಿ ಗ್ರಾ. ಪಂ. ಹತ್ತಿರದ ಟ್ಯಾಂಕ್ ಸಹಿತ 3ಓವರ್ ಹೆಡ್ ಟ್ಯಾಂಕ್ಗಳಿಗೆ ಬರುತ್ತಿದೆ. ಉಳಿದ ಟ್ಯಾಂಕ್ಗಳಿಗೆ ಪಂಚಾಯತ್ ಕೊಳವೆ ಬಾವಿ ಹಾಗೂ 2 ತರೆದ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಟ್ಯಾಂಕರ್ ಮೂಲಕ ನೀರು ಸರಬರಾಜು
ಎಳತ್ತೂರು ನೆಲಗುಡ್ಡೆ ಎತ್ತರದ ಪ್ರದೇಶವಾಗಿದ್ದು, ಡಿಸೆಂಬರ್ ಅಂತ್ಯದವರೆಗೆ ಕೊಳವೆ ಬಾವಿ ಮೂಲಕ ನೀರು ಸರಬರಾಜು ಆಗುತ್ತಿದೆ. ಜನವರಿ ಬಳಿಕ ಕೊಳವೆ ಬಾವಿಯಲ್ಲೂ ನೀರು ಇರುವುದಿಲ್ಲ. ಆದುದರಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕಾಗುತ್ತೆ ಎಂದು ಗ್ರಾಮ ಪಂಚಾಯತ್ ಮೂಲಗಳು ತಿಳಿಸಿದೆ.
ಮಳೆಕೊಯ್ಲು ಯೋಜನೆ
ಗ್ರಾ. ಪಂ. ನಲ್ಲಿ 10 ಕೊಳವೆಬಾವಿ ಮಳೆಕೊಯ್ಲು ಯೋಜ ನೆ ಸಿದ್ಧವಾಗಿದೆ. ಕಿನ್ನಿಗೋಳಿ ಗ್ರಾ.ಪಂ. ನಲ್ಲಿ ಕೊಳವೆಬಾವಿ ಮರುಪೂರಣದ ನೀರು ಇಂಗಿಸುವ ಅನುಷ್ಠಾನದ ಕೆಲಸವೂ ನಡೆದಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಒಂದು ವಾರದಿಂದ ಆರಂಭವಾಗಿದೆ. ಇದರಿಂದ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು.
– ಅರುಣ್ ಪ್ರದೀಪ್ ಡಿ’ಸೋಜಾ, ಪಿಡಿಒ
ಸಮರ್ಪಕ ಸರಬರಾಜು
ರಾಜ್ಯ ಹೆದ್ದಾರಿ ಕಾಮಗಾರಿ ಆರಂಭದಲ್ಲಿ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪೈಪ್ ಲೈನ್ ಹಾಳಾಗಿತ್ತು. ಸದ್ಯದ ಸ್ಥಿತಿಯಲ್ಲಿ ದುರಸ್ತಿ ಹಾಗೂ ಹೊಸ ಪೈಪ್ ಲೈನ್ ಮೂಲಕವಾಗಿ ಇದ್ದ ನೀರಿನಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.
-ಫಿಲೋಮಿನಾ ಸಿಕ್ವೇರ,ಅಧ್ಯಕ್ಷರು.
ಕಿನ್ನಿಗೋಳಿ ಗ್ರಾ.ಪಂ.
ರಘುನಾಥ ಕಾಮತ್ ಕೆಂಚನಕೆರೆ