ಮಂಗಳೂರಿನಲ್ಲಿ ನೀರು ರೇಷನಿಂಗ್ ಅನಿವಾರ್ಯ
Team Udayavani, May 1, 2019, 6:25 AM IST
ಮಂಗಳೂರು: ಮುಂಗಾರು ಪೂರ್ವ ಮಳೆಯ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಇಲ್ಲದಿರುವ ಹಿನ್ನೆಲೆ ಮತ್ತು ಮಳೆಗಾಲ ಆರಂಭವಾಗುವವರೆಗೆ ನೀರಿನ ಸಮಸ್ಯೆ ಗಂಭೀರವಾಗದಿರಲು ರೇಷನಿಂಗ್ಅನಿವಾರ್ಯ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವಾರದಿಂದ ನೀರಿನ
ಪೂರೈಕೆಯಲ್ಲಿ ಎರಡು ದಿನ ಕಡಿತ ಮಾಡಲು ನಿರ್ಧರಿಸಲಾಗಿತ್ತು.
ಮೋಡವಿದ್ದರೂ ಮಳೆಯಾಗದ ಕಾರಣ ರೇಷನಿಂಗ್ ಅನಿವಾರ್ಯ. ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಎದುರಿಸಬಹುದು. ಜನರು ಸಹಕರಿಸಬೇಕು ಎಂದರು.
ನೀರಿನ ವಿಷಯದಲ್ಲಿ ರಾಜಕೀಯ ಬೇಡ. ತುಂಬೆ ಡ್ಯಾಂಗೆ ನಾನು ಹೋಗುವ ಮುನ್ನ ಶಾಸಕರನ್ನು ನಾನು ಕರೆದಿಲ್ಲ ಎಂದು ಅವರು ಆಪಾದಿಸಿದ್ದಾರೆ. ಆದರೆ ಮಂಗಳೂರು ದಕ್ಷಿಣ ಮತ್ತು ಉತ್ತರದ ಶಾಸಕರಿಗೆ ನಾನೇ ಕರೆಮಾಡಿ ಮಾತನಾಡಿದ್ದೇನೆ. ಈ ವಿಚಾರದಲ್ಲಿ ಪರಸ್ಪರ ದೂರುವ ಬದಲು ನೀರು ಒದಗಿಸುವುದು ಆದ್ಯತೆಯಾಗಬೇಕು ಎಂದರು.
ಮಳೆಗಾಗಿ ಪ್ರಾರ್ಥಿಸೋಣ!
ನೀರಿನ ವಿಷಯದಲ್ಲಿ ರಾಜಕೀಯ ಬೇಡ ಶೀಘ್ರ ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ನೀರನ್ನು ಮಿತವ್ಯಯವಾಗಿ ಬಳಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಬಾಡಿಗೆ ನೀಡುವಾಗ ಎಚ್ಚರವಿರಲಿ
ಶ್ರೀಲಂಕಾದಲ್ಲಿನ ಬಾಂಬ್ ದಾಳಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. ಜನರೂ ಎಚ್ಚರವಹಿಸಬೇಕು. ಅಪರಿಚಿತರಿಗೆ ಮನೆ ಅಥವಾ ಕಟ್ಟಡ ಬಾಡಿಗೆ ನೀಡುವ ಸಂದರ್ಭ ಅವರ ಪೂರ್ವಾಪರ ತಿಳಿದುಕೊಂಡು ಮಾಹಿತಿಯನ್ನು ಪೊಲೀಸ್ ಠಾಣೆ ಗಳಿಗೆ ನೀಡಬೇಕು ಎಂದರು.
ಇಂದು, ನಾಳೆ ನೀರಿಲ್ಲ
ತುಂಬೆ ಡ್ಯಾಂನಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ರೇಷನಿಂಗ್ ವ್ಯವಸ್ಥೆ ಮತ್ತೆ ಜಾರಿಗೆ ತರಲಾಗಿದೆ. ಇದರಂತೆ ಮೇ 1 ಮತ್ತು 2ರಂದು ರಂದು ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಬಳಿಕ ಮೇ 3ರಿಂದ ಮೇ 7ರ ಬೆಳಗ್ಗೆ 6 ಗಂಟೆಯವರೆಗೆ ನೀರು ಸರಬರಾಜು ಮಾಡಲಾಗುವುದು. ಬಳಿಕ ಮೇ 9ರ ಬೆಳಗ್ಗೆ 6 ಗಂಟೆಯವರೆಗೆ ಪೂರೈಕೆ ಸ್ಥಗಿತವಾಗಲಿದೆ.