ಬಾವಿ,ತೋಡುಗಳಲ್ಲಿ ನೀರಿಂಗಿಸಿ ಕೃಷಿಗೆ ಬಳಸಲು ಚಿಂತನೆ
ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Sep 9, 2019, 5:42 AM IST
ಮೂರು ತಿಂಗಳಲ್ಲೇ ನೀರು ಹೆಚ್ಚಳ
ಕಾಸರಗೋಡಿನ ಬಾಯಾರು ಕೊಡ್ಯಡ್ಕದಲ್ಲಿ ಗೋವಿಂದ-ಪಾರ್ವತಿ ದಂಪತಿ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ಮಳೆಕೊಯ್ಲು ಅಳವಡಿಸಿ ಮೂರು ತಿಂಗಳುಗಳಲ್ಲೇ ಬಾವಿ ಮತ್ತು ಪಕ್ಕದಲ್ಲಿರುವ ಬೋರ್ವೆಲ್ನಲ್ಲಿ ನೀರು ಹೆಚ್ಚಳವಾಗಿರುವುದನ್ನು ಗಮನಿಸಿದ್ದಾರೆ.
ಪೈವಳಿಕೆ ಪಂಚಾಯತ್ ಅನುದಾನದಲ್ಲಿ ಎಂಜಿನಿಯರ್ ಶ್ರೀರಾಮ್ ಅವರ ನೇತೃತ್ವದಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಬಾವಿ ಸನಿಹದಲ್ಲಿ ಟ್ಯಾಂಕಿ ಮಾಡಿ, ಅದಕ್ಕೆ ವೈಜ್ಞಾನಿಕ ರೀತಿಯಲ್ಲಿ ಜಲ್ಲಿ, ಮರಳು, ಇದ್ದಿಲು ಹಾಕಿ ಛಾವಣಿ ನೀರನ್ನು ಟ್ಯಾಂಕಿಗೆ ಬಿಡಲಾಗುತ್ತಿದೆ. ಅಲ್ಲಿ ಶುದ್ಧೀಕರಣಗೊಂಡ ನೀರು ಬಾವಿಗೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ.
ಹಿಂದೆಂದಿಗಿಂತಲೂ ಹೆಚ್ಚು ಅಂದರೆ ಸುಮಾರು 5 ಕೋಲಿನಷ್ಟು ಜಾಸ್ತಿ ನೀರು ಪ್ರಸ್ತುತ ಬಾವಿಯಲ್ಲಿ ಸಂಗ್ರಹವಾಗಿದೆ. ಮನೆ ಸನಿಹದಲ್ಲೇ ಹೊಸದಾಗಿ ಕೊರೆಯಲಾಗಿರುವ ಬೋರ್ವೆಲ್ನಲ್ಲಿ ಅರ್ಧ ಇಂಚಿನಷ್ಟು ನೀರು ಸಿಕ್ಕಿದ್ದು, ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಮಾಡಿದ ಅನಂತರ ಬೋರ್ವೆಲ್ನಲ್ಲಿಯೂ ನೀರು ಹೆಚ್ಚಳವಾಗಿದೆ ಎನ್ನುತ್ತಾರೆ ಮನೆಯ ಸದಸ್ಯ ಆನಂದ್ ಕೆ. ಮುಂದಿನ ಬೇಸಗೆಯಲ್ಲಿ ನಮಗೆ ಕುಡಿಯುವ ನೀರಿನ ಸಮಸ್ಯೆಯಾಗದು ಎಂದು ವಿಶ್ವಾಸದಿಂದ ಹೇಳುತ್ತಾರೆ ಅವರು.
ತೋಡಿನ ನೀರನ್ನು ಇಂಗಿಸುವ ಪ್ರಯತ್ನ
ತೋಡಿನಲ್ಲಿ ಹರಿದು ಹೋಗುವ ನೀರನ್ನು ನಿಲ್ಲಿಸಿ ಇಂಗಿಸುವ ಮತ್ತು ಆ ಮೂಲಕ ಭವಿಷ್ಯದಲ್ಲಿ ಕೃಷಿ ಭೂಮಿಗೆ ನೀರು ಪಡೆಯುವ ಪ್ರಯತ್ನವನ್ನು ಬೊಂಡಂತಿಲ ವಾಸುದೇವ ರಾವ್ ಮಾಡಿದ್ದಾರೆ.
10 ಅಡಿ ಅಗಲ ಇರುವ ತೋಡಿನಲ್ಲಿ 100 ಅಡಿ ನೀರು ನಿಲ್ಲುವಂತೆ ವ್ಯವಸ್ಥೆ ಮಾಡಲಾಗಿದೆ. ತೋಡಿಗೆ ಕಟ್ಟ ಕಟ್ಟಿ ನೀರನ್ನು ನಿಲ್ಲಿಸಲಾಗಿದೆ. ಇದರಿಂದ ತಿಳಿಯಾದ ನೀರು ತೋಡಿನಲ್ಲಿ ನಿಲುಗಡೆಯಾಗಿದ್ದು, ಅದು ಇಂಗುವ ಬಗ್ಗೆ ವಾಸುದೇವ ರಾವ್ ಅವರು ವಿಶ್ವಾಸ ಹೊಂದಿದ್ದಾರೆ. ತೋಟದಲ್ಲಿ ಬಾವಿ ಇರುವುದರಿಂದ ಇಂಗಿದ ನೀರು ಬಾವಿಯಲ್ಲಿ ನೀರು ಹೆಚ್ಚಳವಾಗುವಂತೆ ಮಾಡುವಲ್ಲಿ ಸಹಕಾರಿಯಾಗಬಹುದು ಮತ್ತು ಅದರಿಂದ ತೋಟದ ಅಗತ್ಯಗಳಿಗೆ ನೀರು ಹೆಚ್ಚು ಸಿಗಬಹುದು ಎಂಬ ಯೋಚನೆಯೊಂದಿಗೆ ಅವರು ನೀರಿಂಗಿಸುವ ಪ್ರಯತ್ನ ಮಾಡಿದ್ದಾರೆ.
ನೀವೂ ಅಳವಡಿಸಿ,
ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ.
“ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000