ಸಸಿಹಿತ್ಲು ಪರಿಸರ: ಯಾರು ಗೆದ್ದರೂ ಸರಿ, ನಮ್ಮ ಆಶೋತ್ತರ ಈಡೇರಲಿ
Team Udayavani, May 5, 2018, 1:18 PM IST
ಮೂಡಬಿದಿರೆ: ಸಸಿಹಿತ್ಲು, ಹಳೆಯಂಗಡಿ, ಚೇಳಾಯಿರು, ಮಧ್ಯ ಪ್ರದೇಶದಲ್ಲಿ ಚುನಾವಣ ಕಾವು ರಂಗೇರ ತೊಡಗಿದೆ. ಹೊಟೇಲ್, ಬಸ್ಸ್ಟಾಂಡ್, ಆಟೋ ನಿಲ್ದಾಣಗಳಲ್ಲಿ ಜನರು ಚುನಾವಣೆ ಬಗ್ಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಿದ್ದಾರೆ. ಕೆಲವು ಅಭ್ಯರ್ಥಿಗಳ ಬಗ್ಗೆ ಅನುಕಂಪವೂ ಇನ್ನು ಕೆಲ ಅಭ್ಯರ್ಥಿಗಳ ಬಗ್ಗೆ ಆಕ್ರೋಶದ ಮಾತುಗಳೂ ಜನರ ಬಾಯಿಯಿಂದ ಹೊರಬರುತ್ತಿವೆ.ಸಸಿಹಿತ್ಲು, ಹಳೆಯಂಗಡಿ ಭಾಗದ ಜನತೆ ಸಮಸ್ಯೆಗಳ ಸರಮಾಲೆಯನ್ನೇ ಮುಂದಿಡುತ್ತಾರೆ. ಕುಡಿಯುವ ನೀರಿಗೆ ಸಮಸ್ಯೆಗೆ ಯಾವುದೇ ಮಹತ್ವ ನೀಡದಿರುವುದು ಇಲ್ಲಿನವರ
ಅಸಮಾಧಾನಕ್ಕೆ ಕಾರಣ. ನಮಗೆ ಯಾರು ಗೆದ್ದರೂ ಸರಿ ನಮ್ಮ ಬೇಡಿಕೆ ಈಡೇರಬೇಕಷ್ಟೇ ಎನ್ನುತ್ತಾರೆ ಸಸಿಹಿತ್ಲುವಿನ ಉದಯ ಸುವರ್ಣ ಅವರು.
ಪಕ್ಷಕ್ಕಿಂತಲೂ ಕೆಲಸ ಮುಖ್ಯ
ಇದು ನನ್ನ ಎರಡನೇ ಮತದಾನ. ನನಗೆ ಪಕ್ಷಕ್ಕಿಂತಲೂ ನಮ್ಮ ಊರಿನ ಅಭಿವೃದ್ಧಿ ಮುಖ್ಯ. ಮತ ಚಲಾಯಿಸಿ ಅನಂತರ ಅಭಿವೃದ್ಧಿ ಕಾಮಗಾರಿಗಳಾಗಲಿಲ್ಲ ಎಂದು ಕೊರಗುವ ಬದಲು ಈಗಲೇ ಚಿಂತಿಸಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಚೇಳಾಯಿರಿನ ಭರತ್ರಾಜ್.
ಮಧ್ಯ ಜಂಕ್ಷನ್ ಭಾಗದ ಕೆಲವು ಮಂದಿಯಲ್ಲಿ ಮಾತನಾಡಿಸಿದಾಗ ‘ಈ ಸರ್ತಿ ಉಂದುವೇ ಪಕ್ಷ ಬರ್ಪುಂಡು ತೂಲೆ’ ಎಂದು ಗ್ಯಾರಂಟಿಯೊಂದಿಗೆ ನಿರ್ದಿಷ್ಟ ಪಕ್ಷವನ್ನು ಸೂಚಿಸುತ್ತಾರೆ!
ಇನ್ನು ಇಂದಿರಾನಗರ, ತೋಕೂರು, ಎಸ್ ಕೋಡಿ, ಪಂಜ, ಕೊಯಿಕುಡೆ, ಬಲವಿನಗುಡ್ಡೆ, ನಡುಗೋಡು, ಸುರಗಿರಿ ಪ್ರದೇಶದಲ್ಲೂ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯಬೇಕಾಗಿದ್ದು, ನಡು ಗೋಡು ಸಮೀಪದ ಹೊಂಡ-ಗುಂಡಿ ಬಿದ್ದ ರಸ್ತೆಯ ಬಗ್ಗೆ ಕೇಳಿದರೆ ‘ರೋಡ್ ರಿಪೇರಿ ಮಲ್ಪುಲೇ ಪಂದ್ ಕೆಲವು ಸಮಯೊರ್ದಿಂಚಿ ಪನೊಂದುಲ್ಲ. ಓಟು ಬನ್ನಗ ಪೂರಾ ಪನ್ಪೆರ್. ಬೊಕ್ಕ ಅಕಲ್ನ ಸುದ್ದಿ ಉಪ್ಪುಜಿ’ ಎಂದು ತಮ್ಮ ಅಸಮಾಧಾನ ತೋಡಿಕೊಂಡವರು ನಡುಗೋಡುವಿನ ಬಾಲಕೃಷ್ಣ.
ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಆಶಯ
ಒಟ್ಟಿನಲ್ಲಿ ಪಕ್ಷದ ಪರ-ವಿರೋಧಕ್ಕಿಂತಲೂ ಹೆಚ್ಚಾಗಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬುವುದು ಬಹುತೇಕ ಮಂದಿಯ ಆಶಯ. ಜನರು ಮತ ಚಲಾಯಿಸಲು ಈ ಹಿಂದೆ ನಡೆದ ಅಭಿವೃದ್ಧಿ ಕಾಮಗಾರಿಗಳು, ತಮ್ಮ ಬೇಡಿಕೆ ಈಡೇರಿಕೆ, ಜನಪ್ರತಿನಿಧಿಗಳ ಗೆಲವು ಸೋಲಿನ ಬಳಿಕದ ಸ್ಪಂದನೆ ಆಲೋಚಿಸಿ, ಅವಲೋಕಿಸಿಯೇ ಸೂಕ್ತ ನಾಯಕರ ಆರಿಸುವ ಹಂಬಲದಲ್ಲಿರುವುದಂತೂ ನಿಜ.
ಕೇಂದ್ರ, ರಾಜ್ಯ ಸರಕಾರದ ಗುಣಗಾನ
ಇನ್ನು ಕೆಲವರು ತಮ್ಮ ಕ್ಷೇತ್ರ, ಊರಿನ ಅಭಿವೃದ್ಧಿ ಬಿಟ್ಟು ಕೇಂದ್ರ, ರಾಜ್ಯ ಸರಕಾರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೇ ಗುಣಗಾನ ಮಾಡುತ್ತಿದ್ದಾರೆ. ಎಲ್ಲ ಪಕ್ಷಗಳ ಅಭಿವೃದ್ಧಿ ಕಾಮಗಾರಿಗಳ ಗುಣಗಾನ ಮಾಡಿದ ಅನಂತರ ‘ತೂಲೇ ನಮಕ್ ನಮ್ಮ ಬೇಲೆ ಆಂಡ ಆಂಡ್. ಏರ್ ನಮ್ಮ ಊರ್ದ ಬೇಲೆ ಎಡ್ಡೆಡ್ ಮಲ್ಪುವೆರಾ ಅಕ್ಲೆಗೇ ಓಟು ಪಾಡುನ, ಸರಿಯತೇ’ ಎಂಬುದು ಆಟೋಚಾಲಕ ಮೊಯಿದ್ದಿನ್ ಅವರ ಮಾತು.
ಪುನೀತ್ ಸಾಲ್ಯಾನ್