ಕಾರ್ತಿಕ್ರಾಜ್ ಕೊಲೆ ತನಿಖೆಯಲ್ಲಿ ಸ್ಥಳೀಯ ಪೊಲೀಸರು ವಿಫಲವಾದದ್ದೇಕೆ
Team Udayavani, May 1, 2017, 2:47 PM IST
ಮಂಗಳೂರು: ಕಾರ್ತಿಕ್ರಾಜ್ ಕೊಲೆ ಪ್ರಕರಣವನ್ನು ಸಿಸಿಆರ್ಬಿ ಘಟಕದ ಎಸಿಪಿ ವೆಲೆಂಟೈನ್ ನೇತೃತ್ವದ ವಿಶೇಷ ತನಿಖಾ ತಂಡ 15- 20 ದಿನಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಹಿಂದೆ ತನಿಖೆ ನಡೆಸುತ್ತಿದ್ದ ಸ್ಥಳೀಯ ಕೊಣಾಜೆ ಪೊಲೀಸರು 6 ತಿಂಗಳಾದರೂ ಪತ್ತೆ ಹಚ್ಚಲು ವಿಫಲವಾದದ್ದೇಕೆ ಎಂದು ಸ್ಥಳೀಯ ಶಾಸಕ ಹಾಗೂ ಆಹಾರ ಸಚಿವ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ಈ ವಿಷಯದ ಬಗ್ಗೆ ಪೊಲೀಸ್ ಆಯುಕ್ತರು ತನಿಖೆ ನಡೆಸ ಬೇಕು ಎಂದವರು ರವಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಈ ವಿಷಯವನ್ನು ಗೃಹ ಸಚಿವರ ಗಮನಕ್ಕೂ ತರಲಾಗುವುದು ಎಂದರು.
ಕೊಣಾಜೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅವರು ಮೃತ ಕಾರ್ತಿಕ್ರಾಜ್ ಕುಟುಂಬದ ಸಂಬಂಧಿಕರೂ ಆಗಿರುವ ಕಾರಣಕ್ಕಾಗಿ ಹೀಗಾಯಿತೇ ಎಂಬ ಸಂಶಯವನ್ನು ಸಚಿವರು ವ್ಯಕ್ತ ಪಡಿಸಿದರು.
ಕಾರ್ತಿಕ್ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆತನ ಮನೆಯವರನ್ನು ವಿಚಾರಣೆಗೆ ಒಳ ಪಡಿಸ ಬೇಕೆಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಈಶ್ವರ ಉಳ್ಳಾಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಡಿ.ಎಸ್. ಗಟ್ಟಿ ಮತ್ತಿತರ ನಾಯಕರು ಸುಮಾರು 4 ತಿಂಗಳ ಹಿಂದೆ ಪೊಲೀಸ್ ಆಯುಕ್ತರನ್ನು ಖುದ್ದಾಗಿ ಭೇಟಿಯಾಗಿ ಮನವಿ ಮಾಡಿದ್ದರು. ನನ್ನ ಗಮನಕ್ಕೂ ತಂದಿದ್ದರು. ತನಿಖೆ ನಡೆಸುವಂತೆ ಆಯುಕ್ತರಿಗೆ ಸೂಚಿಸಿದ್ದೆ ಎಂದರು.
ಈ ಪ್ರಕರಣ ಕುರಿತು ಬೇರೆ ಸಣ್ಣ ಪುಟ್ಟ ಪ್ರಕರಣಗಳ ಹಲವು ಆರೋಪಿಗಳನ್ನು ಕರೆದೊಯ್ದು ವಿಚಾರಿಸಿದ್ದರು. ಬೊಂಡ ಮಾರಾಟ ಮಾಡುವಂತಹ ಕೆಲವು ಮಂದಿ ಅಮಾಯಕರ ವಿಚಾರಣೆ ನಡೆಸಿದ್ದರು. ಹೇಗಿದ್ದರೂ ಪ್ರಕರಣ ಪತ್ತೆಯಾಗಲಿ ಎಂದು ಎಲ್ಲವನ್ನೂ ಸಹಿಸಿಕೊಂಡು ಜನ ತನಿಖೆಗೆ ಸಹಕಾರ ನೀಡಿದ್ದರು. ಆಂಬ್ಲಿಮೊಗರು ಪರಿಸರದಲ್ಲಿ ಮುಂಜಾನೆ 3 ಗಂಟೆ ವೇಳೆಗೆ ಮನೆಗಳಿಗೆ ತೆರಳಿ ಪೊಲೀಸರು ಬಾಗಿಲು ಬಡಿದದ್ದಿದೆ. ಊರಿನ ಮುಖಂಡರು ನಿಮಗೆ ಯಾರು ಬೇಕೆಬುದನ್ನು ಹೇಳಿ; ನಾವು ಅವರನ್ನು ಒಪ್ಪಿಸುತ್ತೇವೆ; ಆದರೆ ರಾತ್ರಿ ಬಂದು ಬಾಗಿಲು ಬಡಿಯುವುದು ಬೇಡ ಎಂದು ಹೇಳಿ ಕಳುಹಿಸಿದ್ದರು. ನೈಜ ಆರೋಪಿಗಳನ್ನು ಬಂಧಿಸ ಬೇಕೆಂದು ಹೇಳಿದ್ದೆವು ಎಂದು ಸಚಿವರು ವಿವರಿಸಿದರು.
ಪೊಲೀಸರಿಗೆ ಅಭಿನಂದನೆ
ಫಜೀರ್ನ ಕಾರ್ತಿಕ್ ರಾಜ್ ಮತ್ತು ವಿಟ್ಲ ಕರೋಪಾಡಿಯ ಅಬ್ದುಲ್ ಜಲೀಲ್ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಬಗ್ಗೆ ಮಂಗಳೂರಿನ ಪೊಲೀಸ್ ಆಯುಕ್ತರು, ಪಶ್ಚಿಮ ವಲಯದ ಐಜಿಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಚಿವ ಖಾದರ್ ಅಭಿನಂದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಈಶ್ವರ ಉಳ್ಳಾಲ್, ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಮೆಲ್ವಿನ್ ಡಿ’ಸೋಜಾ, ಹರ್ಷರಾಜ್ ಮುದ್ಯ, ಸೀತಾರಾಮ ಶೆಟ್ಟಿ, ಸುರೇಖಾ, ಯೋಗೇಶ್ ಪ್ರಭು, ಜಬ್ಟಾರ್ಮುಂತಾದವರು ಉಪಸ್ಥಿತರಿದ್ದರು.
ಮಕ್ಕಾ ತೆರಳಿ ಪ್ರಾರ್ಥಿಸಿದ್ದೆನು
ಕಾರ್ತಿಕ್ ರಾಜ್ ಪ್ರಕರಣವನ್ನು ಕೆಲವು ರಾಜಕೀಯ ನಾಯಕರು ಮತ್ತು ಕೆಲವು ಸಂಘಟನೆಗಳು ರಾಜಕೀಕರಣಗೊಳಿಸಿ ಅಶಾಂತಿ ಸೃಷ್ಟಿಸಲು ಹಾಗೂ ಕೆಲವರ ಮೇಲೆ ಗೂಬೆ ಕೂರಿಸಲು ಯತ್ನಿಸಿರುವುದು ಖೇದಕರ ಸಂಗತಿ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದರು. ಮಾನಸಿಕ ಒತ್ತಡಕ್ಕೆ ಒಳಗಾದ ನಾನು ಮಕ್ಕಾಕ್ಕೆ ಹೋಗಿ ಪ್ರಕರಣದ ಸತ್ಯಾಸತ್ಯತೆ ತಿಳಿಸ ಬೇಕೆಂದು ಪ್ರಾರ್ಥಿಸಿದೆ. ನೋವುಗಳನ್ನು ಅಲ್ಲಿ ಹೇಳಿ ಬಂದಿದ್ದೆ. ಅದಕ್ಕೆ ಸೂಕ್ತ ಉತ್ತರ ಸಿಕ್ಕಿದೆ ಎಂದು ಯು.ಟಿ. ಖಾದರ್ ತಿಳಿಸಿದರು. ಸಮಾಜ ಕಟ್ಟುವ ಕೆಲಸ ಮಾಡ ಬೇಕೇ ಹೊರತು ಸಮಾಜ ಒಡೆಯುವ ಕೆಲಸವನ್ನು ಮಾಡ ಬಾರದು ಎಂದರು.
ಯಡಿಯೂರಪ್ಪ ಕ್ಷಮೆ ಯಾಚಿಸಲಿ
ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ತಿಕ್ ರಾಜ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸರ ಮೇಲೆ ಆರೋಪ ಮಾಡಿ ಗೂಬೆ ಕೂರಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದ ಸಚಿವ ಖಾದರ್ ಪುರಾವೆ ಇಲ್ಲದೆ ಪೊಲೀಸ್ ವಿರುದ್ಧ ಆರೋಪ ಮಾಡಿ ನೈಜ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ದಾರಿ ತಪ್ಪಿಸಲು ಯತ್ನಿಸಿದ ಅವರು (ಯಡಿಯೂರಪ್ಪ) ಕ್ಷಮೆ ಯಾಚಿಸ ಬೇಕೆಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ