ಗಡಿಭಾಗದಲ್ಲಿ ಕಾಡಾನೆ ದಾಳಿ: ಬಾಳೆ ಬೆಳೆ ನಾಶ
Team Udayavani, Jun 10, 2019, 6:10 AM IST
ಈಶ್ವರಮಂಗಲ: ಇಲ್ಲಿನ ದೇಲಂಪಾಡಿ ಮತ್ತು ನೆಟ್ಟಣಿಗೆಮುಟ್ನೂರು ಗ್ರಾ.ಪಂ. ವ್ಯಾಪ್ತಿಯ ಗಡಿಭಾಗದಲ್ಲಿ ಕಾಡಾನೆಗಳ ಹಿಂಡು ದಿನನಿತ್ಯ ಸಂಚರಿಸುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಎರಡು ದಿನಗಳ ಹಿಂದೆ ಪಳ್ಳತ್ತೂರು ಮುಳುಗು ಸೇತುವೆಯ ಬಳಿಯಲ್ಲಿರುವ ಕಮಲ್ದ್ದೀನ್ ಎಂಬವರ ಬಾಳೆ ತೋಟಕ್ಕೆ ದಾಳಿ ಮಾಡಿ ಬೆಳೆಯನ್ನು ನಾಶ ಮಾಡಿದೆ. ಕಾಡಾನೆ ಹಿಂಡಿನಲ್ಲಿ 10ಕ್ಕಿಂತಲೂ ಹೆಚ್ಚು ಆನೆಗಳಿದ್ದು, ಕರ್ನಾಟಕದ ಗಡಿ ಕೊಟ್ಯಾಡಿ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ರಾತ್ರಿ ಹೊತ್ತಿನಲ್ಲಿ ಕೃಷಿ ತೋಟಗಳಿಗೆ ದಾಳಿ ಮಾಡುತ್ತಿವೆ. ಕಾಡಾನೆ ದಾಳಿಯ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು ಗಡಿಭಾಗದ ಜನರು ಭಯಭೀತರಾಗಿದ್ದಾರೆ.
ಈ ಪ್ರದೇಶದಲ್ಲಿ ದಿನನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಕರ್ನಾಟಕದ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಸಿಬಂದಿ ನೇಮಕ ಮಾಡುವಂತೆ ಮತ್ತು ಕಾಡಾನೆಗಳನ್ನು ಕಾಡಿಗೆ ಅಟ್ಟಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.