ಹಗಲಲ್ಲೇ ನಾಡಿಗಿಳಿದ ಕಾಡಾನೆಗಳು
Team Udayavani, Feb 9, 2018, 1:14 PM IST
ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನತ್ತೂರು ನೆಯ್ಯಂಗಯಕ್ಕೆ ಆನೆಗಳ ಹಿಂಡು ದಾಳಿಯಿಟ್ಟಿದ್ದು, ಪರಿಸರದಲ್ಲಿ ಬೀಡುಬಿಟ್ಟಿದೆ. ಈ ತನಕ ರಾತ್ರಿ ಹೊತ್ತಿನಲ್ಲಷ್ಟೇ ಇಲ್ಲಿನ ಜನರ ನಿದ್ದೆಗೆಡಿಸುತ್ತಿದ್ದ ಆನೆಗಳು ಸಂಜೆ ಹೊತ್ತಿನಲ್ಲೇ ನಾಡಿಗಿಳಿದು ಭಾರೀ ಆತಂಕ ಸೃಷ್ಟಿಸಿವೆ.
2 ಮರಿಯಾನೆಗಳು, 6 ದೊಡ್ಡ ಆನೆಗಳು ಹಿಂಡಿನಲ್ಲಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಯಸ್ವಿನಿ ನದಿಯ ನೆಯ್ಯಂಗಯದಲ್ಲಿ ಆನೆಗಳ ಹಿಂಡು ನೀರು ಕುಡಿದು, ಸ್ನಾನ ಮಾಡುತ್ತಿರುವುದನ್ನು ಸ್ಥಳೀಯರು ವೀಕ್ಷಿಸಿದ್ದಾರೆ.
ಒಳಿಯತ್ತಡ್ಕ, ಕಾನತ್ತೂರು, ಕುಂಡುಚ್ಚಿ ಮೊದಲಾದ ಪ್ರದೇಶಗಳಲ್ಲಿ ಮತ್ತೆ ಆನೆಗಳ ಹಿಂಡು ವ್ಯಾಪಕ ಕೃಷಿ ನಾಶ ಮಾಡಿದೆ. ಬುಧವಾರ ರಾತ್ರಿ ಎರಿಂಜಿಪುಯ ಮುರಳೀಧರನ್ ಅವರ ತೋಟಕ್ಕಿಳಿದ ಆನೆಗಳು ಅಡಿಕೆ ಮರಗಳು, ಬಾಳೆ ಕೃಷಿ ನಾಶ ಮಾಡಿವೆ. ಬೆಂಕಿ ಹಾಕಿ ಆನೆಗಳನ್ನು ಓಡಿಸಲು ಯತ್ನಿಸಿದರೂ ಆನೆಗಳು ಹಿಂಜರಿಯುತ್ತಿಲ್ಲ.