ಕಾರ್ಯಾಗಾರ, ಪ್ರಾತ್ಯಕ್ಷಿಕೆ, ವಿವಿಧೆಡೆ ಮಳೆಕೊಯ್ಲು ಅಳವಡಿಕೆ
"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Aug 11, 2019, 5:00 AM IST
ಯೆಯ್ನಾಡಿ: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಕೈಗಾರಿಕಾ ವಸಾಹತು ಮಹಿಳಾ ವಿಭಾಗದ ವತಿಯಿಂದ ಆಟಿಕೂಟ ಆಚರಣೆ ಹಾಗೂ ಮಳೆಕೊಯ್ಲು ಬಗ್ಗೆ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಮಳೆ ಕೊಯ್ಲಿನ ಬಗ್ಗೆ ರಾಜೇಂದ್ರ ಕಲಾºವಿ ಮಾತನಾಡಿದರು. ನೀರಿಂಗಿಸುವಿಕೆ ಮತ್ತು ನೀರುಳಿತಾಯದ ಆವಶ್ಯಕತೆ, ನೀರಿಂಗಿಸುವಿಕೆಯಿಂದ ಭವಿಷ್ಯಕ್ಕಾಗುವ ಪ್ರಯೋಜನಗಳು, ಮಳೆಕೊಯ್ಲು ಅಳವಡಿಕೆಯ ಅಗತ್ಯ, ಮಳೆಕೊಯ್ಲು ಅಳವಡಿಸುವ ಸರಳ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಅಲ್ಲದೆ, ನೆರೆದಿದ್ದ ಜನರಿಗೆ ಮಳೆಕೊಯ್ಲು ಬಗ್ಗೆ ಇದ್ದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದರು.
ಲಯನ್ಸ್ ನ್ಪೋಟ್ಸ್ ಡಿಸಿ ನೀತಾ ಪಕ್ಕಳ, ಆಟಿಯ ಆಚಾರ ವಿಚಾರದ ಬಗ್ಗೆ ಮಾತನಾಡಿದರು. ವಂಡರ್ ಬುಕ್ಆಫ್ ವಲ್ಡ್ ರೆಕಾರ್ಡ್ ಸಂಸ್ಥೆಯಿಂದ ತುಳುವಿನ ಮೊದಲ ವಿಶ್ವ ದಾಖಲೆಗೆ ಅರ್ಹರಾಗಿರುವ ತಕ್ಷಿಲ್ ಎಂ. ದೇವಾಡಿಗ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಅಣ್ಣಪ್ಪ ಪೈ, ಉಪಾಧ್ಯಕ್ಷೆ ಕುಸುಮಾ ದೇವಾಡಿಗ, ಶ್ರೀನಿವಾಸ್ ಆಚಾರ್, ಅರುಣ್ ಡಿ’ಸೋಜಾ, ಜಯರಾಜ್ ಪೈ, ಮಹಿಳಾ ವಿಭಾಗದ ಚೇರ್ ಪರ್ಸನ್ ಹರಿಣಾ ಜೆ. ರಾವ್ ಉಪಸ್ಥಿತರಿದ್ದರು. ಶಾರದಾ ವಸಂತ್ ವಂದಿಸಿದರು. ವಿನಯಾ ಪ್ರಭು ನಿರೂಪಿಸಿದರು.
ಮಣ್ಣಗುಡ್ಡ ನಿವಾಸಿ ದಿನಕರ ಶೆಟ್ಟಿ ಅವರ ಮನೆಯಲ್ಲಿ ಮಳೆಕೊಯ್ಲು ಅಳವಡಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮನೆಯ ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಮೂಲಕ ಮಳೆನೀರು ಕೊಂಡೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಛಾವಣಿ ನೀರನ್ನು ಪೈಪ್ ಮುಖಾಂತರ ಇಳಿಬಿಟ್ಟು ಬಾವಿಗೆ ಹಾಯಿಸಲಾಗಿದೆ. ನಡುವೆ ನೀರು ಶುದ್ಧೀಕರಣಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. “ಉದಯವಾಣಿ’ಯಲ್ಲಿ ಪ್ರಕಟವಾಗುವ ಮಳೆಕೊಯ್ಲು ಅಭಿಯಾನವನ್ನು ನೋಡಿ ಪ್ರೇರೇಪಣೆಗೊಂಡು ಅವರು ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.
ನೀರಿನ ಸಮಸ್ಯೆಯ ಆತಂಕವಿಲ್ಲ
ಹಳೆಯಂಗಡಿ ತೋಕೂರು ನಿವಾಸಿ ನಾರಾಯಣ್ ಜಿ. ಕೆ. ಅವರು ಕಳೆದ ಒಂದು ತಿಂಗಳ ಹಿಂದೆ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ದೊಡ್ಡ ಸ್ಲಾಬ್ನಿಂದ ಸಿಟೌಟ್ ಸ್ಲಾಬ್ಗ ನೀರು ಹಾಯಿಸಿ ಅಲ್ಲಿಂದ ಟ್ಯಾಂಕ್ಗೆ ನೀರು ಬಿಟ್ಟು, ಶುದ್ಧೀಕೃತ ನೀರನ್ನು ಬಾವಿಗೆ ಬೀಳುವಂತೆ ನೋಡಿಕೊಂಡಿದ್ದಾರೆ. “ಉದಯವಾಣಿ ಮಳೆಕೊಯ್ಲು ಅಭಿಯಾನ ಮಳೆಕೊಯ್ಲು ಅಳವಡಿಕೆಗೆ ಸಹಕಾರಿಯಾಯಿತು. ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಆತಂಕ ಎದುರಾಗುವುದಿಲ್ಲ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ.
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000