ಕುವೆಂಪು ಜನ್ಮ ದಿನಾಚರಣೆಗೆ ಜನಪ್ರತಿನಿಧಿಗಳೇ ಇಲ್ಲ
Team Udayavani, Dec 30, 2017, 10:19 AM IST
ಬಂಟ್ಸ್ಹಾಸ್ಟೆಲ್ : ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ವಿಶ್ವ ಮಾನವ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯಲ್ಲಿ ನಮೂದಾಗಿದ್ದ 15 ಮಂದಿ ಪೈಕಿ ಒಬ್ಬರೇ ಒಬ್ಬ ಜನಪ್ರತಿನಿಧಿಯೂ ಭಾಗವಹಿಸಿಲ್ಲ ಎನ್ನುವುದು ಗಮ ನಾರ್ಹ ವಿಚಾರ.
ರಾಷ್ಟ್ರಕವಿಯೊಬ್ಬರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯಲ್ಲಿ ನಮೂದಾಗಿದ್ದ ಎಲ್ಲ ಜನಪ್ರತಿ ನಿಧಿಗಳು ಗೈರು ಹಾಜರಾಗಿದ್ದು, ಸಹಜವಾಗಿಯೇ ಕುವೆಂಪು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಬಂಟ್ಸ್ ಹಾಸ್ಟೆಲ್ನ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಆವರಣದ ಗೀತಾ ಎಸ್.ಎಂ. ಶೆಟ್ಟಿ ಸಭಾ ಭವನದಲ್ಲಿ ‘ವಿಶ್ವ ಮಾನವ ದಿನಾಚರಣೆ’ ಎಂಬ ಹೆಸರಿನಲ್ಲಿ ಕುವೆಂಪು ಅವರ 113ನೇ ಜನ್ಮದಿನೋತ್ಸವವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ 10.30ಕ್ಕೆ ನಿಗದಿಯಾಗಿದ್ದರೂ, ಅರ್ಧ ತಾಸು ತನಕ ಜನಪ್ರತಿನಿಧಿಗಳ ಬರುವಿಕೆಗಾಗಿ ಕಾಯಲಾಯಿತಾದರೂ, ಯಾವೊಬ್ಬ ಜನಪ್ರತಿನಿಧಿಗಳೂ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಕೊನೆಗೆ 11 ಗಂಟೆ ಸುಮಾರಿಗೆ ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲೇ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಗೈರಾದ ಜನಪ್ರತಿನಿಧಿಗಳು
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಬೇಕಿತ್ತು. ಅಲ್ಲದೇ ಸಚಿವ ಯು. ಟಿ. ಖಾದರ್, ಶಾಸಕರಾದ ಜೆ. ಆರ್. ಲೋಬೋ, ಕೆ. ವಸಂತ ಬಂಗೇರ, ಕೆ. ಅಭಯಚಂದ್ರ ಜೈನ್, ಕೋಟ
ಶ್ರೀನಿವಾಸ ಪೂಜಾರಿ, ಶಕುಂತಳಾ ಶೆಟ್ಟಿ, ಎಸ್. ಅಂಗಾರ, ಬಿ.ಎ. ಮೊದಿನ್ ಬಾವಾ, ಕೆ. ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಕವಿತಾ ಸನಿಲ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಲಾಗಿತ್ತು. ಆದರೆ ಇಷ್ಟೂ ಜನಪ್ರತಿನಿಧಿಗಳ ಪೈಕಿ ಯಾವೊಬ್ಬರೂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.
ಅಧಿಕಾರಿಗಳೂ ಬರಲಿಲ್ಲ!
ಕಾರ್ಯಕ್ರಮ ಆಯೋಜಿಸಿದ ಜಿಲ್ಲಾಡಳಿತದಿಂದಾಗಲೀ, ಜಿಲ್ಲಾ ಪಂಚಾಯತ್ನಿಂದಾಗಲೀ ಯಾರೊಬ್ಬ ಅಧಿಕಾರಿಯೂ ಕಾರ್ಯಕ್ರಮಕ್ಕೆ ಬಂದು ರಾಷ್ಟ್ರಕವಿಗೆ ನಮನ ಸಲ್ಲಿಸಿಲ್ಲ. ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಎಚ್. ಸುಧೀರ್ ಕುಮಾರ್ ರೆಡ್ಡಿ, ಜಿಪಂ ಸಿಇಓ ಡಾ| ಎಂ. ಆರ್. ರವಿ, ಮನಪಾ ಆಯುಕ್ತ ಮಹಮ್ಮದ್ ನಝೀರ್, ಮಂಗಳೂರು ತಹಶೀಲ್ದಾರ ಟಿ. ಜಿ. ಗುರುಪ್ರಸಾದ್ ಅವರ
ಹೆಸರು ಆಮಂತ್ರಣ ಪತ್ರಿಕೆಯಲ್ಲಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ
ರೈ ಬಿ. ಅವರನ್ನು ಹೊರತುಪಡಿಸಿದರೆ ಇತರ ಯಾವುದೇ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ. ಈ
ಪೈಕಿ ಉಸ್ತುವಾರಿ ಸಚಿವರು ಹಾಗೂ ಶಾಸಕ ಜೆ. ಆರ್. ಲೋಬೊ ಅವರು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದರೂ, ಕೊನೆಯ ಕ್ಷಣದಲ್ಲಿ ಯಾವುದೋ ತುರ್ತು ಕಾರ್ಯದ ಹಿನ್ನೆಲೆಯಲ್ಲಿ ಬರಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಕೆಲವರು ಊರಲ್ಲಿ ಇಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ಸಂಘಟಕರು ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.
ವಿಪರ್ಯಾಸದ ಸಂಗತಿ
ಗೂಗಲ್ನಂತಹ ವಿದೇಶಿ ಸಂಸ್ಥೆಯೇ ತನ್ನ ಡೂಡಲ್ ನಲ್ಲಿ ಶುಕ್ರವಾರ ಕವಿ ಕುವೆಂಪು ಅವರ ಭಾವಚಿತ್ರವನ್ನು
ಹಾಕಿದ್ದಲ್ಲದೆ, ಕನ್ನಡದಲ್ಲೇ ಗೂಗಲ್ ಎಂದು ಬರೆದು ಕನ್ನಡದ ರಾಷ್ಟ್ರಕವಿಗೆ ವಿಶೇಷ ಗೌರವ ನೀಡಿದೆ. ಗೂಗಲ್
ಕಂಪೆನಿಯು ಈ ರೀತಿ ಕನ್ನಡ ಸಾಹಿತಿಯೊಬ್ಬರ ಜನ್ಮದಿನಾಚರಣೆಯನ್ನು ಗೌರವಿಸಿರುವುದಕ್ಕೆ ಎಲ್ಲೆಡೆ
ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಆದರೆ ಕನ್ನಡಿಗರೇ ಆದ ಇಲ್ಲಿನ ಜನಪ್ರತಿನಿಧಿಗಳಿಗೆ ಮಾತ್ರ ಮಹಾನ್ ಕವಿಯೊಬ್ಬರ ಜನ್ಮ ದಿನ ಬೇಡವಾಗಿ ಹೋಗಿದ್ದು ನಿಜಕ್ಕೂ ವಿಪರ್ಯಾಸ.
ಎಲ್ಲರಿಗೂ ಆಮಂತ್ರಣ ನೀಡಲಾಗಿತ್ತು
‘ವಿಶ್ವ ಮಾನವ ದಿನಾಚರಣೆಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಆಮಂತ್ರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರಿಗೆ ಬರಲು ಸಾಧ್ಯವಾಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಇತರ ಕಾರ್ಯಕ್ರಮಗಳಿದ್ದ ಹಿನ್ನೆಲೆಯಲ್ಲಿ ಬರಲು ಆಗದೇ ಇರಬಹುದು. ಆದಾಗ್ಯೂ ರಾಮಕೃಷ್ಣ ವಿದ್ಯಾಸಂಸ್ಥೆಯ ಪ್ರಮುಖರು ಮತ್ತು ಇಲಾಖೆ ಸೇರಿ ಕಾರ್ಯಕ್ರಮವನ್ನು ಉತ್ತಮವಾಗಿಯೇ ನಡೆಸಲಾಗಿದೆ.
– ಚಂದ್ರಹಾಸ್ ರೈ ಬಿ.,
ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ