ಮುಂದುವರಿದ ಜಿಟಿಜಿಟಿ ಮಳೆ
ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆ•ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು•ಸಾರಥಿ ಸೇತುವೆ ಮೇಲೆ 4 ಅಡಿ ನೀರು
Team Udayavani, Aug 8, 2019, 9:55 AM IST
ದಾವಣಗೆರೆ: ಪ್ರಮುಖ ರಸ್ತೆಯಲ್ಲಿ ಮಳೆ ನೀರು ರಭಸವಾಗಿ ಹರಿಯುತ್ತಿರುವುದು.
ದಾವಣಗೆರೆ: ಕಳೆದ ಎರಡು ದಿನಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಟಿ ಜಿಟಿ ಮಳೆ ಬುಧವಾರ ಸಹ ಮುಂದುವರಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಭರ್ತಿಯಾದ ತುಂಗಾ ಡ್ಯಾಮ್ನಿಂದ ಅಧಿಕ ಪ್ರಮಾಣದ ನೀರು ಹೊರ ಹರಿಸಿರುವುದರಿಂದ ತುಂಗಭದ್ರಾ ನದಿ ನೀರು ದಾವಣಗೆರೆ ಜಿಲ್ಲೆಯ ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕಿನ ಕೆಲವೆಡೆ ಜನರಿಗೆ ಸಂಕಷ್ಟ ತಂದೊಡ್ಡಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಮೂರ್ನಾಲ್ಕು ದಿನಗಳಿಂದ ಅಕ್ಷರಶಃ ಮಲೆನಾಡಿದ ವಾತಾವರಣ ನಿರ್ಮಾಣವಾಗಿದೆ. ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಕೆಲಮೊಮ್ಮೆ ರಭಸವಾಗಿಯೂ ಮಳೆ ಬೀಳುತ್ತಿದೆ.
ಇನ್ನು ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಹೊನ್ನಾಳಿ ಪಟ್ಟಣ, ನದಿ ಪಾತ್ರದ ಹಳ್ಳಿಗಳಲ್ಲಿನ ವಾಸಿಗಳಿಗೆ ಮನೆಗಳ ತೆರವಿಗೆ ಸೂಚಿಸಲಾಗಿದೆ. ಹೊನ್ನಾಳಿಯ ಬಾಲರಾಜ್ ಘಾಟ್ ಕೇರಿಯ ಮನೆಗಳಿಗೆ ನದಿ ನೀರು ನುಗ್ಗಿದ್ದು, ಅಲ್ಲಿನ ವಾಸಿಗಳಿಗೆ ಪಕ್ಕದಲ್ಲಿರುವ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ನದಿ ಪಾತ್ರದ ಒಟ್ಟು 30 ಕುಟುಂಬಗಳಿಗೆ ಗಂಜಿಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಇನ್ನು ಹರಿಹರ ಪಟ್ಟಣದ ಗಂಗಾನಗರದಲ್ಲೂ ನದಿ ನೀರು ನುಗ್ಗಿದೆ. ಹಾಲಿವಾಣ, ಬೆಳ್ಳೂಡಿಯಲ್ಲಿ ತಲಾ ಎರಡು, ಹಾಗೂ ಕೊಮ್ಮಾರನಹಳ್ಳಿಯಲ್ಲಿ ಮನೆಯೊಂದು ಭಾಗಶಃ ಹಾನಿಗೊಳಗಾಗಿವೆ. ಹರಿಹರ ತಾಲೂಕಿನ ಶ್ರೀಕ್ಷೇತ್ರ ಉಕ್ಕಡಗಾತ್ರಿಯಲ್ಲೂ ನೀರು ನುಗ್ಗಿದೆ. ಸಾರಥಿ-ಚಿಕ್ಕಬಿದರಿ ರಸ್ತೆಯ ಸೇತುವೆ ಮೇಲೆ ನಾಲ್ಕು ಅಡಿ ನೀರು ಹರಿಯುತ್ತಿರುವುದರಿಂದ ಜನಸಂಚಾರಕ್ಕೆ ಬೋಟ್ ಬಳಸಲಾಗುತ್ತಿದೆ. ಹರಿಹರದ ಎಪಿಎಂಸಿಯಲ್ಲಿ ಗಂಜಿಕೇಂದ್ರ ತೆರಯಲಾಗಿದೆ.
ದಾವಣಗೆರೆ ನಗರ ಸೇರಿದಂತೆ ತಾಲೂಕಿನಾದ್ಯಂತ ಕಳೆದ 48 ಗಂಟೆಗಳಿಂದ ಸತತವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.
ದಾವಣಗೆರೆ ತಾಲೂಕಲ್ಲಿ 2.3 ಎಂ.ಎಂ. ವಾಡಿಕೆಗೆ 14.1 ಎಂ.ಎಂ.ನಷ್ಟು ವಾಸ್ತವ ಮಳೆ ಆಗಿದೆ. ಹರಿಹರ 2.0 ಮಿ.ಮೀ. ವಾಡಿಕೆಗೆ 20.1 ಮಿಮೀ ವಾಸ್ತವ ಮಳೆ ಸುರಿದಿದೆ. ಹೊನ್ನಾಳಿ 35.6 ಮಿಮೀ, ಚನ್ನಗಿರಿ 35, ಜಗಳೂರು 4.8 ಮಿಮೀ. ಒಟ್ಟು ಸರಾಸರಿ 3.4 ಮಿಮೀ ವಾಡಿಕೆಗೆ 22.5ರಷ್ಟು ವಾಸ್ತವ ಮಳೆ ಸುರಿದಿದೆ.
ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆಗಳು ಭಾಗಶ: ಹಾನಿಯಾಗಿದ್ದು, ಅಂದಾಜು 64 ಸಾವಿರ ರೂ. ನಷ್ಟವಾಗಿದೆ. ಹರಿಹರ ತಾಲೂಕಲ್ಲಿ 2 ಕಚ್ಚಾ ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಅಲ್ಲೂ ಸಹ 64 ಸಾವಿರದಷ್ಟು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 8 ಕಚ್ಚಾ ಹಾಗೂ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 7 ಪಕ್ಕಾ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಜಗಳೂರು ಮತ್ತು ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.