ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಿ
Team Udayavani, Nov 28, 2019, 12:46 PM IST
ದಾವಣಗೆರೆ: ಜಿಲ್ಲೆಯಲ್ಲಿ ಗಂಟಲುಮಾರಿ (ಡಿಫ್ತಿರಿಯಾ) ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಡಿ.11 ರಿಂದ 31ರವರೆಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಡಿಫ್ತಿರಿಯಾ ಲಸಿಕಾ ಅಭಿಯಾನ (ಇಂದ್ರಧನುಷ್) ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಡಿಫ್ತಿರಿಯಾ ಲಸಿಕಾ ಅಭಿಯಾನ ಕುರಿತು ಚರ್ಚಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಶೇ.90 ರಷ್ಟು ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲೆಯಲ್ಲಿರುವ ಮತ್ತು ಶಾಲೆಯಿಂದ ಹೊರಗುಳಿದ ಪ್ರತಿ ಮಗುವಿಗೂ ಲಸಿಕೆ ನೀಡಬೇಕು. ಅಭಿಯಾನಕ್ಕೆ ಎಲ್ಲಾ ಇಲಾಖೆಯವರು ಸಹಕಾರ ನೀಡುವುದರ ಮೂಲಕ ಯಶಸ್ವಿಗೊಳಿಸಬೇಕು ಎಂದರು. ಡಿಫ್ತಿರಿಯಾ ಲಸಿಕಾ ಅಭಿಯಾನಕ್ಕೆ ದೇಶದ 270 ಜಿಲ್ಲೆಗಳು ಆಯ್ಕೆಯಾಗಿವೆ. ರಾಜ್ಯದ ದಾವಣಗೆರೆ, ಯಾದಗಿರಿ, ರಾಯಚೂರು ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.
ಲಸಿಕಾ ಅಭಿಯಾನಕ್ಕೆ ಸಂಬಂ ಸಿದಂತೆ ಈಗಾಗಲೇ ಪೂರಕ ತಯಾರಿಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿರುವ 2 ವರ್ಷದಿಂದ 16 ವರ್ಷದ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಡಾ| ಶ್ರೀಧರ್ ತಿಳಿಸಿದರು.
ಜಿಲ್ಲೆಯಲ್ಲಿರುವ ಸ್ಲಂ ಏರಿಯಾ, ಇಟ್ಟಿಗೆ ಭಟ್ಟಿ, ಕೊಳಚೆ ಪ್ರದೇಶ ಹಾಗೂ ಇತರೆ ಸ್ಥಳಗಳಲ್ಲಿ ವಾಸಿಸುವ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ನೀಡಬೇಕೆಂಬ ಕಡ್ಡಾಯ ಗುರಿ ನಿಗದಿಪಡಿಸಲಾಗಿದೆ. ಚುಚ್ಚುಮದ್ದು, ಲಸಿಕೆ ವಂಚಿತ ಮಕ್ಕಳಿಗೆ ಹನ್ನೊಂದು ಮಾರಕ ರೋಗಗಳ ವಿರುದ್ಧ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೂ ಒಟ್ಟು 1. 10 ಲಕ್ಷ ಮಕ್ಕಳನ್ನು ಗುರುತಿಸಿಲಾಗಿದೆ. 5,471 ಕ್ಕೂ ಅಧಿಕ ಶಾಲೆ ಬಿಟ್ಟ ಮಕ್ಕಳಿದ್ದು, ಅಂತಹ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ, ಖಾಸಗಿ, ವಸತಿ ಶಾಲೆಗಳಲ್ಲಿರುವ ಮಕ್ಕಳಿಗೆ ಡಿಫ್ತಿರಿಯಾ ಬರದಂತೆ ಪ್ರತಿಯೊಬ್ಬ ಮಗುವಿಗೂ ಲಸಿಕೆ ನೀಡುವುದರ ಮೂಲಕ ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದರು.
ಆರ್ಸಿಎಚ್ಒ ಡಾ| ಶಿವಕುಮಾರ್ ಮಾತನಾಡಿ, ಶಾಲಾ ಲಸಿಕಾ ಅಭಿಯಾನ…. ಎಂಬ ಹೆಸರಿನೊಂದಿಗೆ ಶಾಲೆಯವರ ಸಹಭಾಗಿತ್ವದಲ್ಲಿ ಅಭಿಯಾನ ನಡೆಸಲಾಗುವುದು. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಸ್ಕಾಂ ಸಹಕಾರ ಅವಶ್ಯವಾಗಿದ್ದು, ಎಲ್ಲಾ ಇಲಾಖೆಯವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಡಿ.11 ರಿಂದ 31ರವರೆಗೆ ಶಾಲಾ ಲಸಿಕಾ ಅಭಿಯಾನ ಸಮಯದಲ್ಲಿ ಪ್ರತಿಯೊಂದು ಶಾಲೆಯವರು ಸಹಕಾರ ನೀಡಬೇಕು. ಶಾಲೆಯ ಇಬ್ಬರು ಶಿಕ್ಷಕರಿಗೆ ಆರೋಗ್ಯ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಶಿಕ್ಷಕರು ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡುವುದರ ಮೂಲಕ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು 5 ವರ್ಷದ ಒಳಗಿನ ಮಕ್ಕಳು ಮತ್ತು ಶಾಲೆ ಬಿಟ್ಟ ಮಕ್ಕಳಿಗೆ ಲಸಿಕೆ ನೀಡಲು ಸಹಕಾರ ನೀಡಬೇಕು. ಹಾಸ್ಟೆಲ್ ಮತ್ತು ವಸತಿ ಶಾಲೆಯಲ್ಲರುವ ಮಕ್ಕಳಿಗೆ ಲಸಿಕೆ ಪಡೆಯುವಂತೆ ಮಾಹಿತಿ ನೀಡಿ ಅಭಿಯಾನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಆಸ್ಪತ್ರಗಳಲ್ಲಿ ಬಯೋ ಮೆಡಿಕಲ್ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆಯೇ ಎಂದು ಜಿಲ್ಲಾಧಿಕಾರಿ ಪ್ರಶ್ನೆಗೆ, 2 ರಿಂದ 3 ತಾಲೂಕುಗಳಲ್ಲಿ ಟೆಂಡರ್ದಾರರು ಸರಿಯಾಗಿ ಬಿಲ್ ಪಾವತಿಸುತ್ತಿಲ್ಲ.
ಅದರಿಂದಾಗಿ ಸಿಬ್ಬಂದಿ ತಾಜ್ಯ ವಿಲೇವಾರಿ ಮಾಡಲು ವಿಳಂಬ ಮಾಡುತ್ತಿದ್ದಾರೆ. ಬಿಲ್ ಪಾವತಿಯ ನಂತರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದರು. ಪ್ರತಿ ತಿಂಗಳು ಸರಿಯಾಗಿ ಬಿಲ್ ಪಾವತಿಸದ ಸುಶೃತ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಏಜೆನ್ಸಿಗೆ ನೋಟಿಸ್ ನೀಡಿ. 48 ಗಂಟೆಗಳಲ್ಲಿ ಕೆಲಸಗಾರರ ಖಾತೆಗೆ ಸಂಬಳ ಪಾವತಿಸಬೇಕು. ಇಲ್ಲವಾದರೆ ಅಂತಹ ಏಜನ್ಸಿಗಳನ್ನು ರದ್ದುಗೊಳಿಸಿ, ಹೊಸ ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್. ಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎ ಚ್.ವಿಜಯ್ ಕುಮಾರ್, ಡಾ|ಪ್ರಕಾಶ್ ಇತರರು ಇದ್ದರು.