ಖಾಸಗಿ ಹಾಸ್ಟೇಲ್ಗಳ ವಿರುದ್ಧ ತನಿಖೆ
ಜಿಪಂ ಸಾಮಾನ್ಯ ಸಭೆಯಲ್ಲಿ ಒಮ್ಮತದ ಒಪ್ಪಿಗೆ ಸುಳ್ಳು ಲೆಕ್ಕ ತೋರಿಸಿ ಅನುದಾನ ದುರ್ಬಳಕೆ
Team Udayavani, Oct 19, 2019, 11:22 AM IST
ದಾವಣಗೆರೆ: ಕಳೆದ ಹಲವಾರು ವರ್ಷದಿಂದ ಕೇವಲ ಟ್ರಂಕ್ ವ್ಯವಹಾರ.. ಆಧಾರದಲ್ಲಿ ನಡೆದಿದ್ದ ಖಾಸಗಿ ಹಾಸ್ಟೆಲ್ಗಳ ವಿರುದ್ಧ ತನಿಖೆಗೆ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ.
ಶುಕ್ರವಾರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆನಗೋಡು ಕ್ಷೇತ್ರದ ಕಾಂಗ್ರೆಸ್ ಸದಸ್ಯ ಕೆ.ಎಸ್. ಬಸವಂತಪ್ಪ, ಪ್ರಸ್ತಾಪಿಸಿದ ತನಿಖೆ ವಿಚಾರಕ್ಕೆ ಕಾಂಗ್ರೆಸ್ ಸದಸ್ಯರಾದ ಕೆ.ಎಚ್, ಓಬಳೇಶಪ್ಪ ಇತರರು ಧ್ವನಿಗೂಡಿಸಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆ. ಸವಿತಾ, ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ. ಉಪಕಾರ್ಯದರ್ಶಿಬಿ. ಆನಂದ್ ಹಾಗೂ ಆಸಕ್ತ ಸದಸ್ಯರ ಸಮಿತಿ ಮೊದಲಿಗೆ ತನಿಖೆ ನಡೆಸಿ, ನೀಡುವ ವರದಿ ಆಧಾರದಲ್ಲಿ ಪೊಲೀಸ್ ತನಿಖೆಗೆ ಒಪ್ಪಿಸುವ ಬಗ್ಗೆ ಚರ್ಚೆ ಮಾಡಲಾಗುವುದು. ಸಾಮಾನ್ಯ ಸಭೆ ಆಗುವ ತನಕ ಕಾಯದೆ ಸಮಿತಿ ಸಕಾಲದಲ್ಲಿ ತನಿಖೆ ನಡೆಸಿ, ವರದಿ ನೀಡಬೇಕು ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್ ಆದೇಶಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕೆ.ಎಸ್. ಬಸವಂತಪ್ಪ, ಕಳೆದ ಸಾಮಾನ್ಯ ಸಭೆಯಲ್ಲಿ ಬರೀ ಟ್ರಂಕ್ ವ್ಯವಹಾರದಲ್ಲಿ ನಡೆಯುತ್ತಿದ್ದ ಖಾಸಗಿ ಹಾಸ್ಟೆಲ್ನಲ್ಲಿ 100, 80 ವಿದ್ಯಾರ್ಥಿಗಳು ಇದ್ದಾರೆ ಎಂದು ಲೆಕ್ಕ ತೋರಿಸಿ ಅನುದಾನ ಪಡೆಯಲಾಗುತ್ತಿತ್ತು, ಅಸಲಿಗೆ ಅಲ್ಲಿ ವಿದ್ಯಾರ್ಥಿಗಳೇ ಇರುತ್ತಿರಲಿಲ್ಲ. ಅಂತಹವರು ಈಗ ನಾವು ಹಾಸ್ಟೆಲ್ ನಡೆಸುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಆ ರೀತಿ ಬರೆದುಕೊಟ್ಟ ಮಾತ್ರಕ್ಕೆ ಸುಮ್ಮನೆ ಇರುವಂತಿಲ್ಲ. ಇಷ್ಟು ವರ್ಷ ಸರ್ಕಾರದಿಂದ ಪಡೆದ ಅನುದಾನ, ಎಲ್ಲಾ ರೀತಿಯ ಸೌಲಭ್ಯಗಳ ಬಗ್ಗೆ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್. ಮಹೇಶ್ ಮಾತನಾಡಿ, ಈ ಹಿಂದೆಯೂ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ 6 ಕೋಟಿ ಅವ್ಯವಹಾರಗಳ ಬಗ್ಗೆ ಇದೇ ರೀತಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಎಲ್ಲಿದೆ, 6 ಕೋಟಿ ಏನಾಯಿತು ಎಂದು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆ. ಸವಿತಾ, ಸುಮ್ಮನೆ ತನಿಖೆ ನಡೆಸುವುದಕ್ಕೆ ಸಮಿತಿ ನೇಮಕ ಮಾಡುವುದಾದರೆ ಬೇಡ. ಸಮಿತಿಗೆ ನಿರ್ದಿಷ್ಟ ಅಧಿಕಾರ ನೀಡಿದರೆ ಒಳ್ಳೆಯದು ಎಂದರು. ವಿಸ್ತೃತ ಚರ್ಚೆಯ ನಂತರ ಸಮಿತಿ ರಚನೆಗೆ ಸಭೆ ಒಪ್ಪಿಗೆ ನೀಡಿತು.
ಕಡತ ವಿಳಂಬಕ್ಕೆ ಆಕ್ಷೇಪ: ಸಾಮಾನ್ಯ ಸಭೆ ಪ್ರಾರಂಭಕ್ಕೆ ಕೆಲವೇ ಸಮಯದ ಮುನ್ನ ಸದಸ್ಯರ ಆಸನಗಳ ಮುಂದೆ ನಡಾವಳಿ ಕಡತ
ಇಟ್ಟಿದ್ದ ವಿಚಾರಕ್ಕೆ ಸ್ವಪಕ್ಷ ಬಿಜೆಪಿಯವರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭೆ ಪ್ರಾರಂಭಕ್ಕೂ ಕೆಲವೇ ಹೊತ್ತಿನ ಮುಂಚೆ ಕಡತಗಳನ್ನು ಇಡಲಾಗಿದೆ. ಅನುಪಾಲನಾ ವರದಿಯನ್ನೂ ಈಗ ನೀಡಲಾಗಿದೆ. ಅದು ಯಾವ ರೀತಿ ಚರ್ಚೆ ಮಾಡಬೇಕು. ಸ್ಥಾಯಿ ಸಮಿತಿ ಅಧ್ಯಕ್ಷನಾದ ನನಗೆ ಏನಾದರೂ ಪ್ರಶ್ನೆ ಕೇಳಿದರೆ ಯಾವ ಉತ್ತರ ನೀಡಬೇಕು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಸಹಿ ಮಾಡಿಯೇ ಇಲ್ಲ. ಏನಾದರೂ ಸಮಸ್ಯೆಯಾದರೆ ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಒ ಹೊಣೆ ಆಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಭೆ ನಡೆಸುವುದಕ್ಕಿಂತಲೂ ಮುಂದೂಡುವುದೇ ಉತ್ತಮ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್. ಮಹೇಶ್ ಹೇಳಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆ. ಸವಿತಾ, ದೊಣ್ಣೆಹಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯೆ ಕೆ.ವಿ. ಶಾಂತಕುಮಾರಿ, ಮಾಜಿ ಉಪಾಧ್ಯಕ್ಷೆ ಗೀತಾನಾಯ್ಕ ಇತರರು
ಅಸಮಾಧಾನ ವ್ಯಕ್ತಪಡಿಸಿದರು.
ಉಪ ಕಾರ್ಯದರ್ಶಿ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗಾಗಿ ಆ ರೀತಿ ಆಗಿದೆ. ಮುಂದೆ ಈ ರೀತಿ ಆಗದಂತೆ ವ್ಯವಸ್ಥೆ ಮಾಡಲಾಗುವುದು. ಸಾಮಾನ್ಯ ಸಭೆ ಯಾವಾಗಲಾದರೂ ನಡೆಯಲಿ.
ಆಯಾಯ ಸ್ಥಾಯಿ ಸಮಿತಿಗಳ ಸಭೆ ಮುಗಿದ 3 ರಿಂದ 5 ದಿನಗಳ ಒಳಗೆ ಸಭಾ ನಡಾವಳಿ, ಪ್ರಸ್ತಾವನೆಯನ್ನು ಎಲ್ಲಾ ಸದಸ್ಯರಿಗೆ ಟಪಾಲು ಮೂಲಕ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್ ಸಿಇಒ ಪದ್ಮಾ ಬಸವಂತಪ್ಪ, ಉಪ ಕಾರ್ಯದರ್ಶಿ ಬಿ. ಆನಂದ್ಗೆ ಸೂಚಿಸಿದರು.
ಗೈರಾದವರ ವಿರುದ್ಧ ಕ್ರಮ: ಕೆಲ ಅಧಿಕಾರಿಗಳು ಅನಾರೋಗ್ಯ, ಇಲ್ಲವೇ ಅವರ ಕುಟುಂಬದವರ ಅನಾರೋಗ್ಯ, ಮೀಟಿಂಗ್ ನೆಪದಲ್ಲಿ ಸಭೆಗೆ ಹಾಜರಾಗುವುದೇ ಇಲ್ಲ. ಮೂರುವರೆ ವರ್ಷದಿಂದ ಇದೇ ರೀತಿ ನಡೆಯುತ್ತಿದೆ. ನಾವೇನು ಇಲ್ಲಿ ಟೈಮ್ಪಾಸ್ ಗೆ, ಕೊಡುವಂತಹ ಟೀ-ಬಿಸ್ಕತ್ಗೆ ನಮ್ಮ ಕೆಲಸ-ಕಾರ್ಯ ಬಿಟ್ಟು ಬರುವುದಿಲ್ಲ. ಅಭಿವೃದ್ಧಿ ಮಾಡಬೇಕು ಎಂದು ಬರುತ್ತೇವೆ. ಆದರೆ, ಅಧಿಕಾರಿಗಳು ಸಭೆಗೆ ಬರುವುದೇ ಇಲ್ಲ ಎಂದು ಜೆ. ಸವಿತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಲ್ಲೂರು ಕ್ಷೇತ್ರದ ಬಿಜೆಪಿ ಸದಸ್ಯ ಲೋಕೇಶ್ವರಪ್ಪ, ಹಲವಾರು ಸಭೆಯಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ. ಅಧಿಕಾರಿಗಳು ಏನಾದರೂ ಒಂದು ಸಬೂಬು ಹೇಳುತ್ತಾರೆ. ನಾವು ಸುಮ್ಮನಾಗುತ್ತೇವೆ ಎಂದು ಹರಿಹಾಯ್ದರು.
ಯಾವುದೇ ಇಲಾಖೆ ಅಧಿಕಾರಿಗಳೇ ಆಗಿರಲಿ ತೀವ್ರ ತುರ್ತು, ನ್ಯಾಯಾಲಯದ ವಿಚಾರಣೆ, ಸಚಿವರ ಸಭೆ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಗೈರು ಆಗುವಂತೆಯೇ ಇಲ್ಲ. ಆದಾಗ್ಯೂ ಗೈರಾದವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸದಸ್ಯರೇ ಸಲಹೆ ನೀಡಬೇಕು ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್ ಹೇಳಿದರು.
ಸಾಕಷ್ಟು ಚರ್ಚೆ ನಂತರ, ಮುಂದಿನ ಸಭೆಯಲ್ಲಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸುವ… ತೀರ್ಮಾನ ಕೈಗೊಳ್ಳಲಾಯಿತು.