ಉತ್ತಮ ಭವಿಷ್ಯಕ್ಕಾಗಿ ಮತ ಚಲಾಯಿಸಿ
ಸರ್ಕಾರದ ಆಯ್ಕೆಗೆ ಮತದಾನ ನಮಗಿರುವ ಪರಮೋಚ್ಚ ಅಧಿಕಾರ: ಮುರುಘಾ ಶರಣರು
Team Udayavani, Apr 13, 2019, 12:29 PM IST
ದಾವಣಗೆರೆ: ಮುರುಘಾ ಶರಣರ ನೇತೃತ್ವದಲ್ಲಿ ಮತದಾನ ಜಾಗೃತಿ ನಡೆಯಿತು.
ದಾವಣಗೆರೆ: ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಉಳಿಸಬೇಕು ಮತ್ತು ರಾಷ್ಟ್ರದ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ
ಶರಣರು ಮನವಿ ಮಾಡಿದರು.
ಶಿವಯೋಗಾಶ್ರಮ ಟ್ರಸ್ಟ್, ಬಸವ ಕೇಂದ್ರ, ಜಿಲ್ಲಾ, ತಾಲೂಕು ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮತದಾನ
ಜಾಗೃತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಒಂದು ಶಕ್ತಿ. ನಮಗೆ ಬೇಕಾದವರನ್ನು, ಸರ್ಕಾರವನ್ನು ಆಯ್ಕೆ ಮಾಡಲು ಇರುವಂತಹ ಪರಮೋಚ್ಚ ಅಧಿಕಾರ. ಆ ಪರಮಾಧಿಕಾರವನ್ನು ಮತದಾನದ ದಿನ ಚಲಾಯಿಸಬೇಕು. ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಗೌರವ ಹೆಚ್ಚಿಸಬೇಕು
ಎಂದು ಮನವಿ ಮಾಡಿದರು.
ಬಹಳಷ್ಟು ಜನರು ಮತದಾನದ ದಿನ ಬಿಸಿಲ ಧಗೆ ಇದೆ ಎಂದು ಮತದಾನ ಮಾಡುವುದೇ ಇಲ್ಲ. ಆದರೂ, ಇಂತಹದ್ದೇ ಪಕ್ಷದ ಸರ್ಕಾರ, ಆಡಳಿತ
ಬೇಕು ಎನ್ನುತ್ತಾರೆ. ಅಂತಹ ಮಾತನಾಡುವ ಹಕ್ಕು… ಮತದಾನ ಮಾಡಿದಾಗ ಮಾತ್ರ ದೊರೆಯುತ್ತದೆ. ಹಾಗಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು
ಎಂದು ತಿಳಿಸಿದರು.
ದಾವಣಗೆರೆಯ ಜಯದೇವ ವೃತ್ತ ಜಾಗೃತಿ ಮತ್ತು ಹೋರಾಟದ ವೃತ್ತ. ಇಂದು ನಾವು ಹೋರಾಟಕ್ಕೆ ಇಲ್ಲಿ ಸೇರಿಲ್ಲ. ಬದಲಾಗಿ ಮತದಾನದ ಜಾಗೃತಿ ಮೂಡಿಸಲು. ನಾನು ಮತ ಹಾಕುತ್ತೇನೆ….ನೀವು ಮತ ಹಾಕಬೇಕು ಎಂದು
ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮಲ್ಲಿ ಯಾವುದು ಯಾವುದಕ್ಕೋ ಪಾದಯಾತ್ರೆ ನಡೆಸಲಾಗುತ್ತದೆ. ಮತದಾನ ಜಾಗೃತಿಯಂತಹ ಪಾದಯಾತ್ರೆ ನಡೆಸುತ್ತಿರುವ ಕೆಲಸವನ್ನ ಶ್ರೀಮಠ ಮಾಡುತ್ತಿದೆ. ಸಮಕಾಲೀನ ಸಮಾಜದಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಯಾರೂ ಸಹ ವೋಟನ್ನು ನೋಟಿಗೆ ಮಾರಾಟ ಮಾಡಿಕೊಳ್ಳಬಾರದು. ಮಾರಾಟಕ್ಕೆ ಒಳಗಾಗುವಂತಹ ಮತಕ್ಕೆ ಮೌಲ್ಯ ಇರುವುದೇ ಇಲ್ಲ. ಹಾಗಾಗಿ ಯಾವುದೇ ಆಸೆ, ಆಮಿಷ, ಒತ್ತಡಕ್ಕೆ ಒಳಗಾಗದೆ ಮತದ ಮೌಲ್ಯ ಉಳಿಸಬೇಕು ಎಂದು ತಿಳಿಸಿದರು. ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮಾಜಿ ಶಾಸಕ ಮೋತಿ ವೀರಣ್ಣ, ಬಿಜೆಪಿ
ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಸಿಪಿಐ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಆವರಗೆರೆ ಎಚ್.ಜಿ.
ಉಮೇಶ್, ಡಾ| ಜಿ.ಸಿ. ಬಸವರಾಜ್, ಡಾ|ಸಿ.ಆರ್. ನಸೀರ್ ಅಹಮ್ಮದ್, ಬಾಡದ ಆನಂದರಾಜ್, ವನುಜಾ ಮಹಾಲಿಂಗಯ್ಯ, ಸುಮತಿ ಜಯಪ್ಪ, ಮಹದೇವಮ್ಮ, ಎಂ. ಜಯಕುಮಾರ್, ಹಾಸಭಾವಿ ಕರಿಬಸಪ್ಪ, ಕೆ. ಈಶಾನಾಯ್ಕ , ಎಂ.ಜಿ. ಶ್ರೀಕಾಂತ್, ಶ್ರೀ ಕಾಂತ್ ಬಗರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಚ್. ಬಸವರಾಜೇಂದ್ರ ಇತರರು ಇದ್ದರು.
ಮನವಿ ಮಾಡಿದ ಶರಣರು
ಶ್ರೀ ಜಯದೇವ ವೃತ್ತದಿಂದ ಮತದಾನ ಜಾಗೃತಿ
ಪಾದಯಾತ್ರೆ ಪ್ರಾರಂಭಿಸಿದ ಡಾ| ಶಿವಮೂರ್ತಿ ಮುರುಘಾ ಶರಣರು ಜೆರಾಕ್ಸ್, ಪಾನ್ಶಾಪ್, ಫುಟ್ವೇರ್, ಬೀದಿಬದಿಯಲ್ಲಿನ ಕಬಾಬ್ ಅಂಗಡಿ… ಹೀಗೆ ಪ್ರತಿಯೊಂದು ಕಡೆ ತೆರಳಿ ಕರಪತ್ರ ವಿತರಿಸುವ ಜೊತೆಗೆ ಕಡ್ಡಾಯವಾಗಿ
ಮತದಾನ ಮಾಡಿ… ತಪ್ಪಿಸಬೇಡಿ… ಎಂದು ಮನವಿ ಮಾಡಿದರು.
ಪಕ್ಷಾತೀತ ಮಠ
ಚಿತ್ರದುರ್ಗದ ಬೃಹನ್ಮಠ ಪಕ್ಷಾತೀತ ಮಠ. ಶ್ರೀ ಮಠದ ಕಾರ್ಯಕ್ರಮಗಳಲ್ಲಿ ಎಲ್ಲಾ ಪಕ್ಷದವರು ಭಾಗವಹಿಸುವರು. ಶ್ರೀಮಠ ಯಾವುದೇ ಪಕ್ಷದ ಬ್ರ್ಯಾಂಡ್ ಅಲ್ಲ. ಆ ರೀತಿಯ ಬ್ರ್ಯಾಂಡ್ ಆಗಲಿಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.