ಸಿಎಂಗೆ ಮಂಡ್ಯ-ಹಾಸನ ಬಿಟ್ರೆ ಬೇರೆ ಜಿಲ್ಲೆ ಗೊತ್ತಿಲ್ಲ
ಎಚ್ಡಿಕೆ ವಿರುದ್ಧ ಮಾಜಿ ಸಚಿವ ರಾಜುಗೌಡ ಟೀಕೆ ಚುನಾವಣೆ ನಂತರ ರಾಜ್ಯ ಸರ್ಕಾರ ಪತನ
Team Udayavani, Apr 20, 2019, 11:56 AM IST
ದಾವಣಗೆರೆ: ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಾಜುಗೌಡ ಮಾತನಾಡಿದರು.
ದಾವಣಗೆರೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಮಂಡ್ಯ ಹಾಗೂ ಹಾಸನ ಬಿಟ್ಟರೆ ರಾಜ್ಯದ ಬೇರ್ಯಾವ ಜಿಲ್ಲೆಯೂ ಗೊತ್ತಿಲ್ಲ ಎಂದು ಮಾಜಿ ಸಚಿವ ರಾಜುಗೌಡ ಟೀಕಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಬಾಲಾಕೋಟ್ ಭಾರತದಲ್ಲಿದೆಯೇನೋ ಎಂಬಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾರೆ
ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ನನಗೆ ಬಾಗಲಕೋಟೆ
ಗೊತ್ತೇ ಹೊರತು ಬಾಲಾಕೋಟ್ ತಿಳಿಯದು ಎಂದು ಎಚ್.ಡಿ.
ಕುಮಾರಸ್ವಾಮಿ ಪ್ರತಿಕ್ರಿಯೆ ನೀಡ್ತಾರೆ. ಸಿಎಂ ಕುಮಾರಸ್ವಾಮಿಗೆ
ತಮ್ಮ ಮಕ್ಕಳು ಮಂಡ್ಯ-ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಆ ಜಿಲ್ಲೆಗಳು ಮಾತ್ರ ಗೊತ್ತಿದೆ. ಈಗ ದೇವೇಗೌಡರ ಸ್ಪರ್ಧೆಯಿಂದ ತುಮಕೂರು ಗೊತ್ತಾಗಿದೆ. ಅವರಿಗೆ ಬಾಗಲಕೋಟೆ, ದಾವಣಗೆರೆ ಕೂಡ ತಿಳಿದಿಲ್ಲ ಎಂದು ಟಾಂಗ್ ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ತಮ್ಮ ಮಗ ನಿಖೀಲ್ ಪರ ಕೆಲಸ ಮಾಡುತ್ತಿದ್ದಾರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ಮಂಡ್ಯ ಒಂದು ಕ್ಷೇತ್ರಕ್ಕೆ 8 ಸಾವಿರ ಕೋಟಿ ಅನುದಾನ ಕೊಡುವ ಮೂಲಕ ತಾರತಮ್ಯ ಎಸಗಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೂಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿ ಆಗಿರುವುದರಿಂದ ಅವರು ಜಾರಿಗೊಳಿಸಿದ ಯೋಜನೆಗಳು, ಸಾಧನೆ ಹೇಳಿ ಬಿಜೆಪಿ ಪ್ರಚಾರ ಮಾಡುತ್ತಿದೆ. ಬೇಕಿದ್ದರೆ ಕಾಂಗ್ರೆಸ್ನವರು ರಾಹುಲ್ ಹಾಗೂ ಜೆಡಿಎಸ್ನವರು ಕುಮಾರಸ್ವಾಮಿ ಹೆಸರು ಹೇಳಿ ಮತಯಾಚಿಸಲಿ. ಅವರು ಏನಾದರೂ ಸಾಧನೆ ಮಾಡಿದ್ದರೆ ತಾನೇ ಪ್ರಚಾರ ಮಾಡಲು ಸಾಧ್ಯ. ಮೋದಿಯವರ ಕಳೆದ 5 ವರ್ಷಗಳಲ್ಲಿನ ಸಾಧನೆಯನ್ನು ನಾವು ಬಿಂಬಿಸುತ್ತೇವೆ. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 10 ತಿಂಗಳಾದರೂ ಈ ಮೈತ್ರಿ ಸರ್ಕಾರ ಯಾವ ಅಭಿವೃದ್ಧಿ ಕಾರ್ಯ ಮಾಡಿದೆ ಎಂಬುದೇ ಜನರಿಗೆ ಗೊತ್ತಾಗುತ್ತಿಲ್ಲ ಎಂದು ದೂರಿದರು.
2014ರ ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆಗಳಲ್ಲಿ ಶೇ. 90ರಷ್ಟು ಈಡೇರಿಸಲಾಗಿದೆ. ಕರ್ನಾಟಕವಲ್ಲ, ಇಡೀ ದೇಶದಲ್ಲೇ ಈಗಿರುವುದು ನರೇಂದ್ರ ಮೋದಿ ಅಲೆಯಲ್ಲ ಸುನಾಮಿ. ಮೋದಿಯವರು ಮತೊಮ್ಮೆ ಪ್ರಧಾನಿಯಾಗುವುದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಯುವ ಜನಾಂಗವಲ್ಲದೆ, ಮಹಿಳೆಯರು, ಮಧ್ಯಮ ವರ್ಗದವರು, ವೃದ್ಧರೂ ಸಹ ಮೋದಿ ಪರ ಒಲವು ಹೊಂದಿದ್ದಾರೆ. ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಆಗಿರುವ ಮತದಾನದ ಪ್ರಮಾಣ ನೋಡಿದರೆ, ಮತದಾರರ ಅಂತರಾಳ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ಜಿ.ಎಂ.ಸಿದ್ದೇಶ್ವರ್ ಸಹ ಮೂರು ಬಾರಿ ಸಂಸದರಾಗಿ ದಾವಣಗೆರೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ದಾವಣಗೆರೆಗೆ ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ, ರೈಲ್ವೆ ಜೋಡಿ ಮಾರ್ಗ ಸೇರಿದಂತೆ 26
ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಜಯ ಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಸ್ಪತ್ರೆ ಬಂದ್ ಆಗಿದೆ
ನಮ್ಮ ಆಸ್ಪತ್ರೆ ಬಂದ್ ಆಗಿರುವುದರಿಂದ
ಸರ್ಕಾರ ರಚಿಸಲು ನಾವು ಯಾವುದೇ
ಆಪರೇಷನ್ ಮಾಡುವುದಿಲ್ಲ. ಮೇಲಾಗಿ
ಈಗ ನಮ್ಮಲ್ಲಿ ಡಾಕ್ಟರ್ ಕಡಿಮೆ ಇದ್ದು, ಬರುವ
ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಲೋಕಸಭಾ
ಚುನಾವಣೆ ಫಲಿತಾಂಶ ಪ್ರಕಟವಾದ ನಂತರ
ಎಲ್ಲರೂ ಬಯಲಿಗೆ ಬರಲಿದ್ದಾರೆ. ನಾವೇನೇ
ಮಾಡಿದರೂ ಮಾಧ್ಯಮದವರಿಗೆ ತಿಳಿಯಲಿದೆ.
.ರಾಜುಗೌಡ,
ಮಾಜಿ ಸಚಿವ
ಶಾಮನೂರು ಹೇಳಿಕೆಗೆ ಸ್ವಾಗತ
ಈ ಚುನಾವಣೆ ನಂತರ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂಬುದಾಗಿ ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಹೇಳಿಕೆಯನ್ನು ತಾವು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ರಾಜುಗೌಡ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನಗಳಿಸಲಿದೆ. ನಂತರ ಮೈತ್ರಿ ಸರ್ಕಾರ ಪತನಗೊಂಡು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಬರಲಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಎರಡನ್ನೂ ನಿಭಾಯಿಸಬೇಕಾಗಿರುವುದರಿಂದ ಬಿಎಸ್ ವೈ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲಿದ್ದಾರೆ. ಹಾಗಾಗಿ ಶಾಮನೂರು ಶಿವಶಂಕರಪ್ಪನವರು ಹೇಳಿರುವುದು ಸರಿಯಾಗಿದೆ ಎಂದು ತಿಳಿಸಿದರು. 23ರ ಮಧ್ಯರಾತ್ರಿ ಸರ್ಕಾರ ಬೀಳಲಿದೆ ಎಂಬುದಾಗಿ ಬಿಜೆಪಿ ಶಾಸಕ ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಸುಮ್ಮನೆ ಏನನ್ನೂ ಹೇಳಲ್ಲ. ಮೇಲಾಗಿ ಅವರು ಗುರುಗಳು. ಯಾವುದೋ ಲೆಕ್ಕಾಚಾರ ಆಧರಿಸಿ ಹಾಗೆ ಹೇಳಿರಬಹುದು ಎಂದರು.
ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ್, ಮುಖಂಡರಾದ ಲೋಕಿಕೆರೆ ನಾಗರಾಜ್, ಬಸವರಾಜ ಬೇತೂರು, ಎಸ್ಟಿ ಮೋರ್ಚಾದ ಲೋಹಿತ್
ಕುಮಾರ್, ಶ್ರೀನಿವಾಸ್, ಧನುಷ್ರೆಡ್ಡಿ, ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.