ಇನ್ನೂ 5 ಸಚಿವರ ಭ್ರಷ್ಟಾಚಾರ ಶೀಘ್ರ ಬಯಲು: ಸಲೀಂ ಅಹಮ್ಮದ್
Team Udayavani, Apr 17, 2022, 10:30 PM IST
ದಾವಣಗೆರೆ: ಬಿಜೆಪಿ ಸರಕಾರದಲ್ಲಿನ 4ರಿಂದ 5 ಸಚಿವರ ಭ್ರಷ್ಟಾಚಾರದ ಸ್ಪಷ್ಟ ಮಾಹಿತಿ ನಮ್ಮಲ್ಲಿದೆ. ಸಚಿವರ ಭ್ರಷ್ಟಾಚಾರವನ್ನು ಧಾರಾವಾಹಿಯಂತೆ ಒಂದೊಂದಾಗಿ ಬಹಿರಂಗಪಡಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಶೇ. 40 ಕಮಿಷನ್ ಸರಕಾರ. ಎಲ್ಲ ಇಲಾಖೆಗಳಲ್ಲಿ ಶೇ. 40 ಕಮಿಷನ್ ತಾಂಡವವಾಡುತ್ತಿದೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಸರಕಾರಕ್ಕೆ ಶೇ. 40 ಕಮಿಷನ್ ನೀಡಬೇಕು ಎಂಬುದಾಗಿ ಪ್ರಧಾನಿಗೆ ಪತ್ರ ಬರೆದಿದ್ದರು. ಆದರೆ ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ’ ಎಂದು ಪ್ರಧಾನಿ ಹೇಳಿದ್ದರಿಂದ ಪತ್ರದ ಆಧಾರದಲ್ಲಿ ಸಿಬಿಐ ಇಲ್ಲವೇ ಇ.ಡಿ.ಗೆ ತನಿಖೆ ವಹಿಸಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅದು ಯಾವುದೂ ಆಗದೆ ತನಿಖೆ ನಡೆಯಲೇ ಇಲ್ಲ ಎಂದರು.
ನಿಷ್ಪಕ್ಷಪಾತ ತನಿಖೆ ಸಾಧ್ಯವೇ?
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರೇ ಆವಶ್ಯಕತೆ ಇದ್ದರೆ ತನಿಖಾಧಿಕಾರಿಗಳು ಬಂಧಿಸುತ್ತಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುವ ಜತೆಗೆ ಈಶ್ವರಪ್ಪ ಅವರ ತಪ್ಪಿಲ್ಲ ಎಂದು ಹೇಳಿದಾಗ ಅಧಿಕಾರಿಗಳು ಯಾವ ರೀತಿ ನಿಷ್ಪಕ್ಷಪಾತ ತನಿಖೆ ಮಾಡಲಿಕ್ಕೆ ಸಾಧ್ಯ ಎಂದು ಸಲೀಂ ಪ್ರಶ್ನಿಸಿದರು.