ಶಾಶ್ವತ ಬರಪೀಡಿತ ಪ್ರದೇಶಕ್ಕೆ ಭದ್ರಾ ಆಸರೆ
ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ 3 ಸಾವಿರ ಕೋಟಿ ರೂ. ಅನುದಾನ
Team Udayavani, Mar 12, 2022, 5:11 PM IST
ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಅತಿ ಮಹತ್ತರದ ಭದ್ರಾ ಮೇಲ್ದಂಡೆ ಯೋಜನೆಗೆ 3 ಸಾವಿರ ಕೋಟಿ ಅನುದಾನ ನೀಡಿರುವುದು “ಶಾಶ್ವತ ಬರಪೀಡಿತ ಪ್ರದೇಶ’ ಎಂದೇ ಗುರುತಿಸಲ್ಪಡುವ ಜಗಳೂರು ತಾಲೂಕಿನ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.
ರಾಷ್ಟ್ರೀಯ ಮಾನ್ಯತೆ ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಶೇ. 80ರಷ್ಟು ಅನುದಾನ ಭರಿಸಲಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಶೇ. 20ರಷ್ಟು ಅನುದಾನ ನೀಡಬೇಕಾಗಿದೆ ಅದರಲ್ಲಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ 3 ಸಾವಿರ ಕೋಟಿ ಅನುದಾನದ ಘೋಷಣೆ ಮಾಡಿರುವುದು ಜಗಳೂರು ತಾಲೂಕಿನ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.
ಜಗಳೂರು ತಾಲೂಕು ಯಾವುದೇ ನದಿ, ಜಲಮೂಲ ಹೊಂದಿಲ್ಲ. ಇಲ್ಲಿ ನದಿಯಾಶ್ರಿತ ನೀರಾವರಿ ಪ್ರದೇಶ ಇಲ್ಲ ಎನ್ನುವುದು ವಾಸ್ತವ ಸತ್ಯ. ಒಂದು ನೂರು ವರ್ಷದಲ್ಲಿ 70-80 ವರ್ಷಗಳ ಕಾಲ ತಾಲೂಕಿನ ಜನರು ಬರದಿಂದ ಬಸವಳಿದು ಹೋಗಿದ್ದಾರೆ. ಮಳೆಯ ಕಣ್ಣಾಮುಚ್ಚಾಲೆಯಾಟದ ಪರಿಣಾಮ ಜೀವನ ನಿರ್ವಹಣೆ ಅಕ್ಷರಶಃ ಅತಂತ್ರ ಎನ್ನುವ ವಾತಾವರಣದಲ್ಲೇ ಇಲ್ಲಿನ ಜನರು ಜೀವನ ಬಂಡಿ ಸಾಗಿಸುವಂತಾಗಿದೆ.
ಜಗಳೂರು ತಾಲೂಕಿನಲ್ಲಿ ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ಸದಾ ಶಾಶ್ವತ. ಜಗಳೂರು ಮತ್ತೂಂದು ಹೆಸರೇ ನೀರಿನ ಅಭಾವ ಎನ್ನುವ ಮಾತುಗಳು ಇದ್ದವು. ಬೇಸಿಗೆಯಲ್ಲಿ ಮಾತ್ರವಲ್ಲ, ಇತರೆ ದಿನಗಳಲ್ಲೂ ನೀರು ಅಕ್ಷರಶಃ ದುರ್ಲಭ. ಒಂದು ಬಾರಿ ದಾಖಲೆ ಮಳೆಯಾದರೆ ಇನ್ನೊಂದು ಬಾರಿ ಮಳೆಯ ಸುಳಿವೇ ಇರುವುದಿಲ್ಲ. ಇಂತಹ ಅನಿಶ್ಚತತೆಯಿಂದ ಜನರ ಬದುಕು ಸಹ ಅತಂತ್ರದ ಗೂಡು.
ಜಗಳೂರು ಎಂದರೆ ಕುಡಿಯುವ ನೀರಿನ ಸಮಸ್ಯೆ ಎಂಬುದು ಜನಜನಿತ. ಅಂತಹ ಜಗಳೂರು ತಾಲೂಕಿಗೆ ಈಚೆಗೆ ನೀರೊದಗಿಸುವ ಕೆಲ ಯೋಜನೆಗಳು ಕಾಣಿಸಲಾರಂಭಿಸಿವೆ. ಅದರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಹ ಒಂದು. ನಿಗದಿಯಂತೆ ಭದ್ರೆಯ ನೀರು ಹರಿದಲ್ಲಿ ಜಗಳೂರು ತಾಲೂಕಿನ 9 ಕೆರೆಗಳ ಒಡಲು ತುಂಬಲಿದೆ. ಕುಡಿಯುವುದಕ್ಕೆ ನೀರಿನ ಜೊತೆಗೆ ಹನಿ ನೀರಾವರಿಗೂ ನೀರು ಲಭ್ಯವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಬದುಕಿಗೆ ಒಂದಿಷ್ಟು ಭದ್ರತೆ ದೊರೆಯಲಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಜಗಳೂರು ತಾಲೂಕಿನ ಸಂಗೇನಹಳ್ಳಿ, ಬಿದರಕೆರೆ, ಭರಮಸಮುದ್ರ, ಮೆದಗಿನ ಕೆರೆ, ಜಮ್ಮಾಪುರ, ನಿಬಗೂರು, ರಸ್ತೆ ಮಾಚಿಕೆರೆ ಮತ್ತು ಜಗಳೂರು ಒಳಗೊಂಡಂತೆ ಒಟ್ಟು 9 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕೆರೆಗಳಲ್ಲಿ ನೀರು ತುಂಬಿಸಿ 2.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿಗೆ ನೀರು ಬಳಕೆ ಮಾಡಲಾಗುತ್ತದೆ. ಕೆರೆಗಳಲ್ಲಿನ ನೀರನ್ನು ಶುದ್ಧೀಕರಿಸಿ ಕುಡಿವ ನೀರಿಗೆ ಒದಗಿಸುವ ಮಹತ್ತರ ಯೋಜನೆಗೆ ಸರ್ಕಾರ ಮೂರು ಸಾವಿರ ಕೋಟಿ ಅನುದಾನ ಮೀಸಲಿಟ್ಟಿರುವುದು ತಾಲೂಕಿನ ಜನರಲ್ಲಿ ನೀರಿನ ಸಮಸ್ಯೆ ಬಗೆಹರಿಯುವ ಆಶಾಭಾವನೆ ಮೂಡಿಸಿದೆ.
ಆದಷ್ಟು ಬೇಗ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತವಾಗಲಿ ಎಂಬುದು ಸಾರ್ವಜನಿಕರು, ರೈತಾಪಿ ವರ್ಗದ ಒತ್ತಾಸೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಅನುದಾನಘೋಷಣೆ ಮಾಡಿರುವುದು ಉತ್ತಮ ಬೆಳವಣಿಗೆ.
ಏನೇನು ಅನುಕೂಲ?
ಕೆರೆಗಳಲ್ಲಿ ನೀರು ನಿಲ್ಲುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ. ಇದರಿಂದ ಸಹಜವಾಗಿಯೇ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಹೀಗೆ ಒಂದು ಯೋಜನೆ ಅನೇಕ ಲಾಭ ತಂದುಕೊಡಲಿದೆ. ಭದ್ರಾ ಮೇಲ್ದಂಡೆ ಯೋಜನೆಡಯಡಿ ಜಗಳೂರು ತಾಲೂಕಿನ ಸೇರ್ಪಡೆಗೆ ಒತ್ತಾಯಿಸಿ ಐತಿಹಾಸಿಕ ಹೋರಾಟವೇ ನಡೆದಿತ್ತು. ನಿರಂತರವಾಗಿ ನೂರಾರು ದಿನಗಳ ಕಾಲ ಇಲ್ಲಿನ ಜನರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಎಲ್ಲ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕು ಸೇರ್ಪಡೆ ಆಗಿದೆ. 5 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ 2.10 ಟಿಎಂಸಿ ನೀರು ಜಗಳೂರು ತಾಲೂಕಿಗೆ ಮಂಜೂರಾಗಿದೆ. ಹದವಾದ ಮಳೆಯನ್ನೇ ಕಾಣದ ಜನರ ಪಾಲಿಗೆ 2.10 ಟಿಎಂಸಿ ನೀರು ದೊರೆಯುತ್ತಿರುವುದು ಸಹಜವಾಗಿ ಸಂತಸ ಮೂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆ ಜೊತೆಗೆ ದೀಟೂರು ಏತ ನೀರಾವರಿ ಯೋಜನೆಯ ಮೂಲಕವೂ ನೀರು ದೊರೆಯುವಂತಾಗುತ್ತಿರುವುದು ಜಗಳೂರು ತಾಲೂಕಿನ ಚಿತ್ರಣವೇ ಬದಲಾಗುವ ವಾತಾವರಣದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ತಾಲೂಕಿನ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹೆಜ್ಜೆಯಾಗಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ನಲ್ಲಿ ಮೂರು ಸಾವಿರ ಕೋಟಿ ಮೀಸಲಿ ಟ್ಟಿರುವುದು ಜಗಳೂರುಗೆ ಮಾತ್ರವಲ್ಲ ನೆರೆಯ ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕಿನ ಭಾಗಕ್ಕೂ ಅನುಕೂಲವಾಗಲಿದೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ದೊರೆಯುವ ಜೊತೆಯಲ್ಲಿ 2.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿಗೆ ಅವಕಾಶ ಇರುವುದರಿಂದ ದುಡಿಯುವ ಕೈಗಳಿಗೆ ಕೆಲಸ ದೊರೆಯಲಿದೆ. ಆರ್ಥಿಕ ವಾತಾವರಣ ಉತ್ತಮವಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಜಗಳೂರು ತಾಲೂಕಿನ 9 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕುಡಿಯುವ ನೀರಿನ ಜೊತೆಗೆ 2.10 ಲಕ್ಷ ಹೆಕ್ಟೇರ್ನಲ್ಲಿ ಹನಿ ನೀರಾವರಿ ಆಗುವುದರಿಂದ ಸಾಕಷ್ಟು ಅನುಕೂಲ ಆಗಲಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳುವಂತಾಗಬೇಕು.
–ಕೆ.ಬಿ. ಕಲ್ಲೇರುದ್ರೇಶ್, ಸದಸ್ಯರು,
ಭದ್ರಾ ಮೇಲ್ದಂಡೆ ಯೋಜನೆ ತಾಂತ್ರಿಕ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್