ದಿನದ ದುಡಿಮೆಗೆ ಕೋವಿಡ್ ಕನ್ನ!
Team Udayavani, May 8, 2021, 3:03 PM IST
ದಾವಣಗೆರೆ: ಊಹೆಗೂ ನಿಲುಕದಂತೆ ವ್ಯಾಪಿಸುತ್ತಿರುವ, ಜನರ ಜೀವ ಮತ್ತು ಜೀವನವನ್ನೇ ಆಪೋಶನ ಮಾಡುತ್ತಿರುವ ಮಹಾಮಾರಿ ಕೋವಿಡ್ ತಡೆಗೆ ಜಾರಿಯಲ್ಲಿರುವ ಕೋವಿಡ್ ಕರ್ಫ್ಯೂ ಹಲವರ ದೈನಂದಿನ ಬದುಕಿನ ದುಡಿಮೆಯನ್ನೇ ಲಾಕ್ ಮಾಡಿಬಿಟ್ಟಿದೆ.
ಹೌದು, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ನಿರ್ಬಂಧದಿಂದ ಕೆಲವು ವರ್ಗದವರ ಜೀವನ ನಿರ್ವಹಣೆ ದಿನದಿಂದದಿನಕ್ಕೆ ಕಠಿಣ ಆಗುತ್ತಿದೆ. ಬದುಕು ಸಾಗಿಸುವುದಾದರೂ ಹೇಗೆ ಎಂಬ ಚಿಂತೆಗೆದೂಡುತ್ತಿದೆ. ಪ್ರತಿ ದಿನದ ಕೌಟುಂಬಿಕ ಜೀವನ ನಿರ್ವಹಣೆ ಯಕ್ಷ ಪ್ರಶ್ನೆಯಾಗಿದೆ.
ನಿರ್ಬಂಧದ ಹಿನ್ನೆಲೆಯಲ್ಲಿ ಮೇ 12ರ ವರೆಗೆಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ತರಕಾರಿ ಅಂಗಡಿ, ಗ್ಯಾರೇಜ್, ಟೈಲರ್,ಹೇರ್ ಕಟಿಂಗ್ ಶಾಪ್, ಬ್ಯೂಟಿಪಾರ್ಲರ್,ಬೇಕರಿ, ಹೋಟೆಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್,ಮೊಬೈಲ್ ದುರಸ್ತಿ, ಫೋಟೋಸ್ಟುಡಿಯೋ,ಮಾಂಸ, ಮೀನು ಮಾರಾಟಗಾರರು ಸೇರಿದಂತೆಅನೇಕ ವಲಯಗಳಲ್ಲಿರುವವರಿಗೆ ಇದರಿಂದ ತೊಂದರೆಯಾಗಿದೆ.
ಬೆಳ್ಳಂಬೆಳಿಗ್ಗೆ ಗ್ಯಾರೇಜ್ಗೆ ಯಾರು ಬರ್ತಾರೆ? :
ದ್ವಿಚಕ್ರ ವಾಹನ, ಕಾರು ಇತರೆ ದುರಸ್ತಿ ಮಾಡುವಂತಹ ಗ್ಯಾರೇಜ್ನಂಬಿಕೊಂಡೇ ಜೀವನ ನಡೆಸುವವರ ಸ್ಥಿತಿಯ ಭಿನ್ನವಾಗೇನೂ ಇಲ್ಲ. ಬೆಳಗ್ಗೆ 6ಕ್ಕೆ ಗ್ಯಾರೇಜ್ ಬಾಗಿಲು ತೆರೆದರೂ ಅ ವೇಳೆಗೆ ದುರಸ್ತಿಗೆಂದುಬರುವವರ ಸಂಖ್ಯೆ ತೀರಾ ಕಡಿಮೆ. ಗ್ರಾಹಕರು ಬರುವ ಹೊತ್ತಿಗೆ ಸಮಯ ಆಗತೊಡಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ಕೆಲಸಮಾಡಿಕೊಂಡು ಬಂದಿದ್ದಷ್ಟಕ್ಕೆ ತೃಪ್ತಿ ಪಟ್ಟುಕೊಂಡು ಮನೆ ಕಡೆಹೆಜ್ಜೆ ಹಾಕಬೇಕಾಗುತ್ತದೆ. ಮನೆ, ಗ್ಯಾರೇಜ್ ಬಾಡಿಗೆ, ಕುಟುಂಬನಿರ್ವಹಣೆ, ಶಿಕ್ಷಣ, ಆರೋಗ್ಯ ವೆಚ್ಚ ನಿರ್ವಹಣೆ…ಹೀಗೆ ಎಲ್ಲವೂಕಷ್ಟ ಎಂಬುದು ದೇವರಾಜ ಅರಸು ಬಡಾವಣೆಯ ಮೆಕ್ಯಾನಿಕ್ ಮಂಜುನಾಥ್ ಅವರ ಅಳಲು.
ಹೋಟೆಲ್ಗೆ ಮತ್ತಷ್ಟು ಸಮಯ ಕೊಡಿ : ಹೋಟೆಲ್ಗಳಿಗೆ ಬೆಳಗ್ಗೆ 10ರ ವರೆಗೆ ತೆರೆಯಲು ಅವಕಾಶವೇನೋ ನೀಡಲಾಗಿದೆ. ಆದರೆ ಪಾರ್ಸೆಲ್ ಮಾತ್ರ ನೀಡಬೇಕಾಗುವುದರಿಂದಸಾಕಷ್ಟು ಸಮಸ್ಯೆ ಆಗುತ್ತಿದೆ. ಎಷ್ಟು ಜನ ಗ್ರಾಹಕರು ಬರುತ್ತಾರೋ,ಏನೇನು ಆರ್ಡರ್ ಮಾಡುವರೋ ಅದನ್ನ ನೀಡಬೇಕಾಗುತ್ತಿದೆ. 10ಗಂಟೆ ಒಳಗೆ ಇಷ್ಟೇ ಜನ ಗ್ರಾಹಕರು ಬರುತ್ತಾರೆ ಎಂದು ಲೆಕ್ಕಾಚಾರಮಾಡುವುದು ಕಷ್ಟ. ತಯಾರು ಮಾಡಿದಂತಹ ತಿಂಡಿ, ತಿನಿಸು ವ್ಯಾಪಾರವಾದರೆ ಸರಿ. ಇಲ್ಲ ಎಂದರೆ ಹಾಕಿದ ಬಂಡವಾಳವೂ ಗಿಟ್ಟುವುದೇ ಇಲ್ಲ. ಬಹಳ ಕಷ್ಟ ಆಗುತ್ತಿದೆ. ಪಾರ್ಸೆಲ್ಗೆ ಇನ್ನೂ ಹೆಚ್ಚಿನಸಮಯ ನೀಡಿದರೆ ಅನುಕೂಲ ಆಗುತ್ತದೆ ಎಂದು ಬೆಣ್ಣೆದೋಸೆ ಹೋಟೆಲ್ ಮಾಲೀಕ ಬಸವರಾಜ್ ಹೇಳುತ್ತಾರೆ.
ಈ ವರ್ಷವೂ ತಪ್ಪುತ್ತಿಲ್ಲ ತೊಂದರೆ :
ಎಲೆಕ್ಟ್ರಿಕಲ್ ಅಂಗಡಿಗಳಲ್ಲಿ ಜನಸಂದಣಿ ಆಗಲಿಕ್ಕೆ ಸಾಧ್ಯವೇ ಇಲ್ಲ. ಏನಾದರೂಕೆಲಸ ಇದ್ದರೂ ಒಬ್ಬಿಬ್ಬರು ಬರಬಹುದು. ಆದರೂ ನಮಗೆ 10 ಗಂಟೆ ತನಕ ಮಾತ್ರ ಅಂಗಡಿ ತೆರೆಯುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಷ್ಟೊತ್ತಿಗೆ ವ್ಯಾಪಾರಆಗುವುದೇ ಇಲ್ಲ. ಈಗ ಹೇಗೋ ಮೊಬೈಲ್ ಇವೆ. ಕಸ್ಟಮರ್ಗಳು ಫೋನ್ ಮಾಡಿಕೊಂಡು ಬಂದು ರಿಪೇರಿಗೆ ಕೊಟ್ಟು ಹೋಗುತ್ತಾರೆ. ಮರುದಿನವೋ,
ಮುಂದಿನ ದಿನವೋ ರಿಪೇರಿ ಮಾಡಿಕೊಟ್ಟರೆ ಹಣ ಸಿಗುತ್ತದೆ. ಅದರಲ್ಲೇ ಜೀವನ ನಡೆಸಬೇಕಾಗಿದೆ. ಕಳೆದ ವರ್ಷವೂ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ವರ್ಷವೂ ತಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಸಂತೋಷ್ ದೊಡ್ಮನಿ.
ಈಗಿನ ದುಡಿಮೆಯಲ್ಲಿ ಜೀವನ ಕಷ್ಟ : ನಮ್ಮದು ಅವತ್ತೇ ದುಡಿದು ಜೀವನ ನಡೆಸುವ ಕೆಲಸ. ಬೆಳಗ್ಗೆ 6 ಗಂಟೆಗೆ ಬಾಗಿಲು ತೆಗೆದರೂ ಗಿರಾಕಿ ಬರೋದು ತಡ. ಬಂದವರಿಗೆ ಕಟಿಂಗ್, ಶೇವಿಂಗ್ ಮಾಡಿ ಎಷ್ಟು ಆಗುತ್ತೋ ಅದರಲ್ಲೇ ಜೀವನ ಮಾಡಬೇಕು. ಬಾಡಿಗೆ ಎಲ್ಲವೂ ಮೈ ಮೇಲೆ ಬರುತ್ತದೆ.ಗಂಡ-ಹೆಂಡತಿ, ಮಕ್ಕಳು ಇದ್ದರೂ ಈಗ ಆಗುತ್ತಿರುವದುಡಿಮೆಯಲ್ಲಿ ಜೀವನ ನಡೆಸುವುದು ಕಷ್ಟ ಆಗುತ್ತಿದೆ ಎಂದು ಹೇರ್ ಕಟಿಂಗ್ ಸಲೂನ್ ಮಾಲಿಕ ಮೋಹನ್ ಹೇಳುತ್ತಾರೆ.
-ರಾ. ರವಿಬಾಬು