ಹಕ್ಕಿಜ್ವರ ಪತ್ತೆಯಾದ ಗ್ರಾಮದಲ್ಲಿ ತಕ್ಷಣ ಕ್ರಮ
ಸಹಾಯವಾಣಿ ಸ್ಥಾಪನೆ ಹಕ್ಕಿಜ್ವರ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಕಾರ್ಯೋನ್ಮುಖವಾಗಲಿ: ಡಿಸಿ ಆದೇಶ
Team Udayavani, Mar 18, 2020, 1:06 PM IST
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಈ ಹಕ್ಕಿಜ್ವರ ರೋಗೋದ್ರೇಕ ದೃಢಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿ ಪ್ರದೇಶಕ್ಕೆ ಅನ್ವಯಿಸುವಂತೆ ತಕ್ಷಣದಿಂದ ಕೆಲವು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಮಂಗಳವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಹಕ್ಕಿಜ್ವರ ನಿಯಂತ್ರಣ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ,ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಕ್ಕಿಜ್ವರ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಸಹಕರಿಸಬೇಕು ಎಂದರು.
ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅ ಧಿನಿಯಮ 2009ರ ಕಲಂ 6 ರಡಿ ಹಾಗೂ ಭಾರತ ಸರ್ಕಾರದಿಂದ ಪ್ರಕಟಿಸಲಾದ ಮಾರ್ಚ್ 2015ರ ಕ್ರಿಯಾ ಯೋಜನೆಯಂತೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಒಂದು ಕಿ.ಮೀ(ರೇಡಿಯಸ್/ತ್ರಿಜ್ಯ) ವ್ಯಾಪ್ತಿಯ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಹಾಗೂ 1 ರಿಂದ 10 ಕಿ.ಮೀ. ಗಳ ವ್ಯಾಪ್ತಿ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಸಿಆರ್ಪಿಸಿ ಸೆಕ್ಷನ್ 133ರನ್ವಯ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸೋಂಕುಪೀಡಿತ ವಲಯದ ಒಂದು ಕಿಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಾ ಕೋಳಿಗಳು, ಮೊಟ್ಟೆ, ಕೋಳಿ ಆಹಾರ ಇತ್ಯಾದಿಗಳನ್ನು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ನಿಯಮಾನುಸಾರ ನಾಶಪಡಿಸಬೇಕು. ಸರ್ವೇಕ್ಷಣಾ ವಲಯ 1 ರಿಂದ 10 ಕಿ.ಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಕೋಳಿ ಸಾಗಾಣಿಕೆ ನಿಷೇಧಿಸಿದೆ. ಸರ್ವೇಕ್ಷಣಾ ವಲಯದಲ್ಲಿ ಕೋಳಿ, ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟ ಕೇಂದ್ರಗಳನ್ನು ನಿಷೇಧಿಸಲಾಗಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶ ಪಾಲಿಸಲು ಅವರು ಸೂಚಿಸಿದರು.
ಸಹಾಯವಾಣಿ: ಹಕ್ಕಿಜ್ವರಕ್ಕೆ ಸಂಬಂಧಿಸಿದಂತೆ ನಗರದ ಪಶುಸಂಗೋಪನೆ ಕಚೇರಿಯಲ್ಲಿ 24×7 ಸಹಾಯವಾಣಿ ತೆರೆಯಲಾಗಿದ್ದು, ಹಕ್ಕಿಜ್ವರ ನಿಯಂತ್ರಣ ಕುರಿತಾದ ಸಂದೇಹ, ಸಲಹೆಗಳ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ದೂ.ಸಂಖ್ಯೆ: 08192-296832ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದರು.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ 1 ಕಿ.ಮೀ ಸರ್ವೇಕ್ಷಣಾ ವ್ಯಾಪ್ತಿಯಲ್ಲಿ 1167 ಕೋಳಿಗಳಿದ್ದು, ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಲು ಪಶುಸಂಗೋಪನೆ ಅಧಿಕಾರಿಗಳು ಕ್ರಮ ವಹಿಸುವರು. ಹತ್ತಿರದಲ್ಲಿ ಭತ್ತದ ಗದ್ದೆಗಳಿರುವುದರಿಂದ ಹೊರಗಿನಿಂದ ಬರುವ ಕೊಕ್ಕರೆ, ಬಾತುಕೋಳಿ ಇನ್ನೂ ವಿವಿಧ ಜಾತಿಯ ಪಕ್ಷಿಗಳ ಬಗ್ಗೆ ವಹಿಸಬೇಕೆಂದರು.
ಆರೋಗ್ಯ ಇಲಾಖೆಯು ಕಿಲ್ಲಿಂಗ್ ಕಾರ್ಯ ನಿರ್ವಹಿಸಲು ರ್ಯಾಪಿಡ್ ರೆಸ್ಪಾನ್ಸ್ ಟೀಂ ರಚಿಸಿ, ಟೀಮ್ನಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಮತ್ತು ಐಸೋಲೇಷನ್ ಸೌಲಭ್ಯ ಒದಗಿಸಬೇಕು. ಈ ತಂಡವು ಕಾರ್ಯ ನಿರ್ವಹಿಸಿದ ನಂತರ 14 ದಿನಗಳ ವರೆಗೆ ನಿಗಾವಣೆಯಲ್ಲಿ ಇಡಬೇಕು. ರ್ಯಾಪಿಡ್ ರೆಸ್ಪಾನ್ಸ್ ತಂಡಕ್ಕೆ ಅಗತ್ಯವಿರುವ ಸುರಕ್ಷಾ ಸಾಮಗ್ರಿಗಳನ್ನು ಹೊಂದಿರುವ ಪಿ.ಪಿ. ಕಿಟ್ಗಳ ನೆರವು ನೀಡಲಾಗುವುದು ಎಂದರು.
ಹರಿಹರ ತಾಲೂಕಿನ ಕೆಲವು ಡಾಬಾಗಳಲ್ಲಿ ಬೇಯಿಸಿದ ಮಾಂಸ ಸಹ ನಾಶಪಡಿಸಬೇಕು. ಹೆಬ್ಟಾಳು ಬಳಿ ಇರುವ ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಇಲ್ಲದೆ ನೊಣಗಳ ಹಾವಳಿ ಹೆಚ್ಚಿದ್ದು ಸುತ್ತಮುತ್ತಲ ಗ್ರಾಮಗಳಿಗೆ ನೊಣಗಳ ಕಾಡುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಪೌಲ್ಟ್ರಿ ಫಾರಂ ಮಾಲೀಕರು ಶುಚಿತ್ವ ಕಾಪಾಡಬೇಕು. ಇಲ್ಲದಿದ್ದರೆ ಸಿಆರ್ಪಿಸಿ ಸೆಕ್ಷನ್ 133 ರನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಪರವಾನಗಿಯನ್ನು ಕೂಡ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ದೇವರಬೆಳೆಕೆರೆ ಪಿಕ್ಅಪ್ ಡ್ಯಾಂ ಬಳಿ ಹಕ್ಕಿಗಳು ಹೆಚ್ಚಾಗಿ ವಲಸೆ ಬರುತ್ತಿದ್ದು, ಅವುಗಳ ಬಗ್ಗೆಯೂ ನಿಗಾ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಪೌಲ್ಟ್ರಿ ಫಾರಂನವರು ಒಂದು ಕೋಳಿಯನ್ನು ಸಹ ಇಟ್ಟುಕೊಳ್ಳುವ ಹಾಗಿಲ್ಲ. ಸತ್ತಿರುವ ಕೋಳಿಯನ್ನು ಎಲ್ಲೆಂದರಲ್ಲಿ ಎಸೆಯುವ ಹಾಗಿಲ್ಲ. ಹೊಸ ಕೋಳಿ ಸಾಕುವಂತಿಲ್ಲ ಎಂದು ತಿಳಿಸಿದರು.
ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಆರ್ಆರ್ ಟೀಮ್ಗಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸಲಾಗುವುದು. ಆರ್ಆರ್ ಸಿಬ್ಬಂದಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಓ ಮತ್ತು ಎನ್ಜಿಓ ಗಳ ಸಭೆ ನಡೆಸಿ ಹಕ್ಕಿಜ್ವರದ ಕುರಿತು ಜಾಗೃತಿ ಮೂಡಿಸಲಾಗುವುದು. ಕೋಳಿ ಸಾಕಾಣಿಕೆದಾರರಿಗೆ ನೀಡುವ ಪರಿಹಾರದ ಕುರಿತು ಸಮರ್ಪಕ ದಾಖಲಾತಿ ನಿರ್ವಹಿಸಲು ಸೂಚಿಸಲಾಗುವುದು. ಹಕ್ಕಿಜ್ವರ ಕುರಿತು ಎಚ್ಚರಿಸುವ ಫಲಕಗಳನ್ನು ಸಾರ್ವಜನಿಕವಾಗಿ ಅಳವಡಿಸಲಾಗುವುದು. ಫಾಗಿಂಗ್ ಯಂತ್ರಗಳ ಮೂಲಕ ರಾಸಾಯನಿಕಗಳ ಸಿಂಪಡಣೆ ಮಾಡಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿವೈಎಸ್ಪಿ ಮಂಜುನಾಥ್ ಗಂಗಲ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್ಓ ಡಾ|ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರಾಘವನ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ| ಭಾಸ್ಕರ್ ನಾಯಕ್, ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ದಾವಣಗೆರೆ ತಹಶೀಲ್ದಾರ್ ಸಂತೋಷ್ ಕುಮಾರ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ