ಚಿಮೂ ಹುಟ್ಟೂರಲ್ಲಿ ನೀರವ ಮೌನ
ಹಿರೇಕೋಗಲೂರು ಗ್ರಾಮದಲ್ಲಿ ಸ್ವಪ್ರೇರಣೆಯಿಂದ ಅಂಗಡಿ-ಮುಂಗಟ್ಟು ಬಂದ್
Team Udayavani, Jan 12, 2020, 11:37 AM IST
ದಾವಣಗೆರೆ: ಹಿರಿಯ ಸಂಶೋಧಕ ಹಾಗೂ ಸಾಹಿತಿ, ನಾಡೋಜ
ಡಾ|ಎಂ.ಚಿದಾನಂದ ಮೂರ್ತಿ ಬೆಂಗಳೂರಲ್ಲಿ ಶನಿವಾರ ನಿಧನರಾದ ಸುದ್ದಿ ತಿಳಿದ ಅವರ ಹುಟ್ಟೂರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೋಗಲೂರಲ್ಲಿ ನೀರವ ಮೌನ ಆವರಿಸಿತ್ತು. ಡಾ|ಚಿಮೂ ಅವರು ಕೊಟ್ಟೂರಯ್ಯ (ಕೊಟ್ರಯ್ಯ) ಹಾಗೂ ಪಾರ್ವತಮ್ಮ ದಂಪತಿಯ ಏಕೈಕ ಪುತ್ರ. ಅವರಿಗೆ ಇಬ್ಬರು ಸಹೋದರಿಯರು.
ಶಿಕ್ಷಕರಾಗಿ ಹಿರೇಕೋಗಲೂರಿಗೆ ಬಂದಿದ್ದ ಕೊಟ್ಟೂರಯ್ಯನವರು ಅದೇ ಗ್ರಾಮದ ಪಾರ್ವತಮ್ಮನವರನ್ನು ವಿವಾಹವಾದರು. ಹಾಗಾಗಿ ಆ ಗ್ರಾಮದಲ್ಲಿ ಜನಿಸಿದ ಚಿದಾನಂದ ಮೂರ್ತಿಯವರ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ ಹಿರೇಕೋಗಲೂರಿನಲ್ಲಿ ನಡೆಯಿತು.
ಮುಂದೆ ಇಂಟರ್ ಮಿಡಿಯೇಟ್ ಶಿಕ್ಷಣ ದಾವಣಗೆರೆ ಡಿ.ಆರ್. ಎಂ. ಕಾಲೇಜಿನಲ್ಲಿ ನಡೆಯಿತು. ಇಂಟರ್ ಮಿಡಿಯೇಟ್ ನಲ್ಲಿ ರ್ಯಾಂಕ್ ಗಳಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ನಂತರ ಎಂ.ಎ. ಮುಗಿಸಿದರು. ಪಿಎಚ್ಡಿ ನಂತರ ಕೋಲಾರದಲ್ಲಿ ಕನ್ನಡ ಉಪನ್ಯಾಸಕರಾಗಿ, ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸೇವೆಯಲ್ಲಿರುವಾಗಲೇ ಸ್ವ-ಇಚ್ಛೆಯಿಂದ ನಿವೃತ್ತಿ ಪಡೆದು ಕನ್ನಡ ಶಕ್ತಿ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷರಾಗಿ, ರಾಜ್ಯಾದ್ಯಂತ ಕನ್ನಡ ಶಾಶ್ವತ ಧ್ವಜ ಸ್ತಂಭ ಸ್ಥಾಪನೆಗೆ ಕಾರಣರಾದವರು.
ಹಂಪಿಯಲ್ಲಿ ಶಿಲ್ಪಕಲೆಗಳನ್ನು ವಿಕೃತಗೊಳಿಸುವ ಸುದ್ದಿ ಕೇಳಿ ಬೆಂಗಳೂರಿನಿಂದ ಹಂಪಿಗೆ ತೆರಳಿ ತುಂಗಾನದಿಯಲ್ಲಿ ಬಿದ್ದು ಆತ್ಮಾರ್ಪಣೆ ಮಾಡಿಕೊಳ್ಳಲು ಮುಂದಾದಾಗ ಮೀನುಗಾರರು ರಕ್ಷಿಸಿದ ಸುದ್ದಿ ತಿಳಿದು ಗೊ.ರು.ಚನ್ನಬಸಪ್ಪನವರು ಹಂಪಿಗೆ ಹೋಗಿ ಅವರನ್ನು ಕರೆದುಕೊಂಡು ಬಂದಿದ್ದರು.
ಹಿರೇಕೋಗಲೂರಿನಲ್ಲಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಚಿಮೂ, ಶಾಲೆಯ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಓದಿ ಮುಗಿಸಿದ್ದರು. ಅವರ ಓದಿನ ಗೀಳನ್ನು ಮೆಚ್ಚಿಕೊಂಡ ಆಗ ಮುಖ್ಯ ಶಿಕ್ಷಕರಾಗಿದ್ದ ಟಿ. ಶೇಷಪ್ಪನವರು, “ಈಗಲೇ ಇಷ್ಟು ಪುಸ್ತಕ ಓದಿರಬೇಕಾದರೆ ಮುಂದೆ ಇವನು ಓದಿ ಓದಿ ನನ್ನ ಮಗ ಕೂಚುಭಟ್ಟ ಅನ್ನುವ ಹಾಗೆ ಆಗಬಹುದು. ಇಲ್ಲವೇ ಮುಂದೆ ದೊಡ್ಡ ಸಾಹಿತಿ ಆಗಬಹುದು’ ಎಂದಿದ್ದರಂತೆ.
ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಮಾವಿನ ತೋಟದಲ್ಲಿ ಮರ ಕೋತಿ ಆಟ ಆಡುವುದು, ಜೇನು ಹುಡುಕಿ ಜೇನು ತೆಗೆದು ತಿನ್ನುವುದು ಅವರ ಚಟುವಟಿಕೆಗಳಾಗಿದ್ದವು. ಈಗ ಇವರ ಸಮವಯಸ್ಕರು ಊರಿನಲ್ಲಿ ಯಾರೂ ಇಲ್ಲ. ಕೆ.ಜಿ.ಬಸವರಾಜಪ್ಪ (ಮಾಗನೂರು ಬಸಪ್ಪನವರ ಅಳಿಯ) ಎಂಬುವವರು ವಿದೇಶದಲ್ಲಿದ್ದಾರೆ. 2018ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿಯೊಂದಿಗೆ ನೀಡಿದ ಏಳು ಲಕ್ಷ ರೂ.ಗಳಲ್ಲಿ ನಾಲ್ಕು ಲಕ್ಷ ರೂ. ಗಳನ್ನು ಹಿರೇಕೋಗಲೂರಿನ ಕಾವೇರಿ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಶಾಲಾ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಿದ್ದಾರೆ. ಅವರ ಹೆಸರನ್ನು ಗ್ರಾಮದಲ್ಲಿ ಶಾಶ್ವತವಾಗಿ ಉಳಿಸುವ ಹಿನ್ನೆಲೆಯಲ್ಲಿ ಅವರ ಒಪ್ಪಿಗೆ ಪಡೆದು ಗ್ರಾಮದಲ್ಲಿ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ 32 ಲಕ್ಷ ರೂ.ಗಳ ಅನುದಾನದಲ್ಲಿ ನಾಡೋಜ ಡಾ|ಎಂ. ಚಿದಾನಂದ ಮೂರ್ತಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಿದೆ. ಅದರ ಉದ್ಘಾಟನೆ ಕಳೆದ ನ.11ರಂದು ನೆರವೇರಿದೆ ಎಂದು ಚಿದಾನಂದ ಮೂರ್ತಿಯವರ ನಿಕಟವರ್ತಿ, ನಾಡೋಜ ಡಾ| ಎಂ. ಚಿದಾನಂದ ಮೂರ್ತಿ ಸಾಹಿತ್ಯ ಸಾಂಸ್ಕೃತಿಕ ಭವನದ ಸಂಸ್ಥಾಪಕ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ